ಸಾಗರ: ಇಲ್ಲಿನ ಇತಿಹಾಸ ಪ್ರಸಿದ್ಧ ಗಣಪತಿ ದೇವಸ್ಥಾನದ ನೂತನ ರಥದ ಮನೆ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.
ಇಲ್ಲಿನ ಚಾಮರಾಜಪೇಟೆ ಬಡಾವಣೆಯ ರಟ್ಟೆಹಳ್ಳಿ ಗೋಪಾಲಕೃಷ್ಣ, ಸುನಂದಾ ದೇವಿ ಅವರ ಪುತ್ರಿ ಅರುಣಾ ಸುಂದರ್ ನೀಡಿದ್ದ ₹ 13 ಲಕ್ಷ ದೇಣಿಗೆ ನೆರವಿನಿಂದ ರಥದ ಮನೆ ನಿರ್ಮಿಸಲಾಗಿದೆ.
ಗಣಪತಿ ದೇವಸ್ಥಾನ ಹಿತರಕ್ಷಣಾ ಸಮಿತಿ ಸಂಚಾಲಕ ಐ.ವಿ. ಹೆಗಡೆ, ‘ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದಾನಿಗಳು ನೀಡಿದ ನೆರವಿನಿಂದ ರಥದ ಮನೆ ನಿರ್ಮಾಣವಾಗಿದೆ ಎಂಬುದು ವಿಶೇಷ ಸಂಗತಿ’ ಎಂದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ರಾಘವೇಂದ್ರ ಭಟ್, ‘ಅಭಿವೃದ್ಧಿಗೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ಸರ್ಕಾರವೇ ಮಾಡಲು ಸಾಧ್ಯವಿಲ್ಲ. ಕೆಲವೊಂದು ಕೆಲಸಗಳಿಗೆ ಸಾರ್ವಜನಿಕರ ಸಹಕಾರ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ದಾನಿಗಳು ಸಹಕರಿಸಿದ್ದರಿಂದ ರಥದ ಮನೆ ನಿರ್ಮಾಣವಾಗಿದೆ. ಇದರ ನಿರ್ವಹಣೆಯನ್ನು ಮುಜರಾಯಿ ಇಲಾಖೆ ಸಿಬ್ಬಂದಿ ಅಚ್ಚುಕಟ್ಟಾಗಿ ನಿರ್ವಹಿಸಬೇಕಿದೆ’ ಎಂದು ಹೇಳಿದರು.
ಸಂಘ ಪರಿವಾರದ ಅ.ಪು. ನಾರಾಯಣಪ್ಪ, ‘ಶಿಥಿಲಗೊಂಡ ದೇವಸ್ಥಾನಗಳ ಪುನರುತ್ಥಾನಕ್ಕೆ ನೆರವು ನೀಡುವ ಸಂಸ್ಕೃತಿ ನಮ್ಮಲ್ಲಿ ರಾಜಮಹಾರಾಜರ ಕಾಲದಿಂದಲೂ ಇದೆ. ಪ್ರಸ್ತುತ ರಥದ ಮನೆ ನಿರ್ಮಾಣಕ್ಕೆ ದಾನಿಗಳು ಸಹಕಾರ ನೀಡುವ ಮೂಲಕ ಆ ಪರಂಪರೆಯನ್ನು ಮುಂದುವರಿಸಿದ್ದಾರೆ’ ಎಂದರು.
ನಗರಸಭೆ ಸದಸ್ಯರಾದ ಅರವಿಂದ ರಾಯ್ಕರ್, ಮೈತ್ರಿ ಪಾಟೀಲ್, ಕೆ.ಆರ್. ಗಣೇಶ್ ಪ್ರಸಾದ್, ಕುಸುಮಾ ಸುಬ್ಬಣ್ಣ, ರಾಮು, ಆಶ್ರಯ ಸಮಿತಿ ಸದಸ್ಯ ಯು.ಎಚ್. ರಾಮಪ್ಪ, ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್, ನಿವೃತ್ತ ಶಿಕ್ಷಕ ಶಿವಪ್ಪ, ಪ್ರಮುಖರಾದ ರಾಜು ಮಡಿವಾಳ, ಎಸ್.ಕೆ. ಪ್ರಭಾವತಿ, ಸಂತೋಷ್ ಶಿವಾಜಿ, ರಾಘವೇಂದ್ರ ಕಾಮತ್, ರಾಜೇಂದ್ರ ಭಟ್, ಗಣಪತಿ ಭಟ್, ಪಿ.ಎಲ್. ಗಜಾನನ ಭಟ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.