ಶಿವಮೊಗ್ಗ: 'ಛತ್ರಪತಿ ಶಿವಾಜಿ ಮಹಾರಾಜರು ಧೀರ ಮತ್ತು ಪರಾಕ್ರಮಿ ಆಗಿದ್ದರು. ಅವರು ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಭಾರತವೇ ತನ್ನ ದೇಶ, ಭಾರತೀಯರೆಲ್ಲರೂ ತನ್ನವರು ಎಂಬ ಭಾವ ಹೊಂದಿದ್ದರು’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಜಿಲ್ಲಾಡಳಿತದಿಂದ ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಪರಕೀಯರ ದಾಳಿಯನ್ನು ಹಿಮ್ಮೆಟ್ಟಿಸಿ ಹಿಂದೂ ರಾಷ್ಟ್ರ ಕಟ್ಟಲು ಶ್ರಮಿಸಿದ್ದ ಛತ್ರಪತಿ ಶಿವಾಜಿ ಅವರ ಕುಟುಂಬಕ್ಕೂ ಶಿವಮೊಗ್ಗಕ್ಕೂ ಅವಿನಾಭಾವ ಸಂಬಂಧ ಇದೆ. ಶಿವಾಜಿಯವರ ಮಕ್ಕಳು ಮೊಘಲರಿಂದ ತಪ್ಪಿಸುಕೊಳ್ಳುವಾಗ ಕೆಳದಿ ರಾಣಿ ಚೆನ್ನಮ್ಮ ಅವರಿಗೆ ಸಹಾಯ ಮಾಡಿದ್ದರು. ಮೊಘಲರು ಸೇರಿದಂತೆ ಇತರೆ ಆಕ್ರಮಣಕಾರರ ವಿರುದ್ದ ಹೋರಾಡಿದ್ದ ಶಿವಾಜಿ ಹಾಗೂ ವಂಶಸ್ಥರನ್ನು ನಾವು ಸ್ಮರಿಸಬೇಕು’ ಎಂದು ಸಲಹೆ ನೀಡಿದರು.
‘ನಮ್ಮ ಸನಾತನ ಧರ್ಮವನ್ನು ನಾಶಗೊಳಿಸಲು ಪ್ರಯತ್ನಿಸಿದವರ ವಿರುದ್ಧ ನಿಂತು ರಾಷ್ಟ್ರ ರಕ್ಷಣೆಯಲ್ಲಿ ತೊಡಗಿದ್ದ ಶಿವಾಜಿ ಶೌರ್ಯವಂತರು. ಜಾಗತಿಕ ಮಟ್ಟದಲ್ಲಿ ಅನೇಕ ಪ್ರಾಚೀನ ಮತ, ಪಂಥಗಳು ಕಣ್ಮರೆಯಾಗಿರುವುದನ್ನು ಕಾಣಬಹುದು. ಆದರೆ ಶಿವಾಜಿಯಂತಹವರು ಪರಕೀಯ ದೇಶಗಳ ಸರಣಿ ದಾಳಿಯಿಂದ ರಾಷ್ಟ್ರ ರಕ್ಷಣೆ ಮಾಡಿದ್ದಾರೆ’ ಎಂದು ಭಾಷಣಕಾರ್ತಿ ಹಾರಿಕಾ ಮಂಜುನಾಥ್ ಹೇಳಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಭೂಪಾಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ, ತಹಶೀಲ್ದಾರ್ ವಿ.ಎಸ್.ರಾಜೀವ್, ಮುಖಂಡರಾದ ಆರ್.ಚಂದ್ರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.