ADVERTISEMENT

ಉತ್ತರದ ರೈತರ ಹೋರಾಟಕ್ಕೆ ಸಿಐಟಿಯು ಬೆಂಬಲ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 11:42 IST
Last Updated 1 ಡಿಸೆಂಬರ್ 2020, 11:42 IST
ಶಿವಮೊಗ್ಗದಲ್ಲಿ ಮಂಗಳವಾರ ಸಿಐಟಿಯು ಕಾರ್ಯಕರ್ತರು ಉತ್ತರ ರಾಜ್ಯಗಳ ರೈತರ ಹೋರಾಟ ಬೆಂಬಲಿಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ಮಂಗಳವಾರ ಸಿಐಟಿಯು ಕಾರ್ಯಕರ್ತರು ಉತ್ತರ ರಾಜ್ಯಗಳ ರೈತರ ಹೋರಾಟ ಬೆಂಬಲಿಸಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಕೃಷಿ ತಿದ್ದುಪಡಿ ಮಸೂದೆ ವಿರೋಧಿಸಿ ರೈತರು ಕೈಗೊಂಡಿರುವ ಹೋರಾಟ ಬೆಂಬಲಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್‌ಯೂನಿಯನ್ (ಸಿಐಟಿಯು) ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಬಂಧಿಸಿರುವ ಎಲ್ಲ ರೈತರನ್ನು ತಕ್ಷಣ ಬಿಡುಗಡೆ ಮಾಡಬೇಕು. ರೈತ ವಿರೋಧಿ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಬೇಕು. ರೈತರಿಗೆ ಮಾರಕವಾದ ವಿದ್ಯುತ್‌ ಮಸೂದೆ ರದ್ದು ಮಾಡಬೇಕು. ರೈತರ ಜತೆಗಿನ ಮಾತುಕತೆ ವಿಧಿಸಿದ ಷರತ್ತು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ರೈತ ವಿರೋಧಿ ಕೃಷಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರದ ವಿರುದ್ಧ ಉತ್ತರದ ಹಲವು ರಾಜ್ಯಗಳ ರೈತರು ಶಾಂತಿಯುತವಾಗಿ ಹೋರಾಟ ಕೈಗೊಂಡಿದ್ದಾರೆ. ರೈತರನ್ನು ಮಾತುಕತೆಗೆ ಕರೆಯದೇ ರೈತ ವಿರೋಧಿ ಮಸೂದೆ ಹಿಂಪಡೆಯದೆ ಕೇಂದ್ರ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿದರು.

ADVERTISEMENT

ದೆಹಲಿಗೆ ರೈತರು ಬರುವುದನ್ನು ತಡೆಯಲು ಬೇಲಿ ಹಾಕಿದ್ದು, ಅಶ್ರುವಾಯು, ಜಲಫಿರಂಗಿ ಬಳಸಿ ಪ್ರಹಾರ ನಡೆಸಿದ್ದ ಅಕ್ಷಮ್ಯ. ರಾಷ್ಟ್ರೀಯ ಹೆದ್ದಾರಿ ಅಗೆದು ರೈತರು ದೆಹಲಿ ಪ್ರವೇಶಿಸದಂತೆ ಅಡ್ಡಿಪಡಿಸಲಾಗುತ್ತಿದೆ. ಪೊಲೀಸರ ಮೂಲಕ ದೌರ್ಜನ್ಯ, ದಬ್ಬಾಳಿಕೆ ನಡೆಸಲಾಗಿದೆ. ಹೋರಾಟದ ಹಕ್ಕು ಕಸಿಯುವ ಪ್ರಯತ್ನ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯ ಮುಖಂಡರಾದ ಎಂ.ನಾರಾಯಣ, ಹನುಮಮ್ಮ, ಅಬ್ದುಲ್ ಸುಭಾನ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.