ಶಿವಮೊಗ್ಗ: ‘ಹಬ್ಬಗಳನ್ನು ಸಂಭ್ರಮದಿಂದ ಆಚರಿಸಬೇಕೇ ವಿನಃ ಆತಂಕದಿಂದಲ್ಲ. ಕೋಮು ಗಲಭೆಗಳಿಂದ ದೇಶದ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ’ ಎಂದು ಬಸವಕೇಂದ್ರದ ಮರುಳಸಿದ್ಧ ಸ್ವಾಮೀಜಿ ಹೇಳಿದರು.
‘ಶಾಂತಿಗಾಗಿ ನಡಿಗೆ’ ತಂಡದಿಂದ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಶಾಂತಿ ಹೆಚ್ಚಲಿ. ಮುಂದೆಂದೂ ಶಾಂತಿಗಾಗಿ ಸಭೆ ಮಾಡುವ ಅಗತ್ಯ ಬಾರದಿರಲಿ. ಸೌಹಾರ್ದತೆ ಸಾಮಾನ್ಯ ಜ್ಞಾನವಾಗಬೇಕು. ಭಾರತೀಯ ಸಂಸ್ಕೃತಿಯು ಸೌಹಾರ್ದತೆಗೆ ವಿಶೇಷ ಆದ್ಯತೆ ನೀಡಿದೆ. ಜಗತ್ತು ಸುಂದರ ವಾಗಬೇಕಾದರೆ ಎಲ್ಲರಲ್ಲೂ ಸೌಹಾರ್ದತೆ, ಉದಾತ್ತ ಮನೋಭಾವ, ಪರಸ್ಪರ ಮುಖಾಮುಖಿಯಾಗುವ ಗುಣ ಬೆಳೆಯಬೇಕು’ ಎಂದರು.
ನಗರದ ಟಿ.ಸೀನಪ್ಪಶೆಟ್ಟಿ ವೃತ್ತದಲ್ಲಿ (ಗೋಪಿ ವೃತ್ತ) ಮಾನವ ಸರಪಳಿ ರಚಿಸಿ, ಅಲ್ಲಿಂದ ಶಾಂತಿ ನಡಿಗೆ ಕೈಗೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಫಾದರ್ ರೋಷನ್ ಕ್ಲಿಫರ್ಡ್ ಪಿಂಟೊ, ಫಾದರ್ ಪೀಯೂಷ್ ಡಿಸೋಜಾ, ಫಾದರ್ ಅರುಳ್ ವಿನಿಲ್ ಡಿಸಿಲ್ವಾ, ಮೌಲ್ವಿ ಶಾಹುಲ್ ಹಮೀದ್, ಮುಫ್ತಿ ಸೈಯದ್ ಮುಜಿಬುಲ್ಲಾ, ಮೌಲಾನ ಗುಲಾಮ್ ಬರ್ಕಫಿ, ಡಿಎಸ್ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ವಕೀಲ ಕೆ.ಪಿ. ಶ್ರೀಪಾಲ್, ಪ್ರಮುಖರಾದ ಎಚ್.ಆರ್. ಬಸವರಾಜಪ್ಪ, ಎಸ್.ವಿ. ರಾಜಮ್ಮ, ಸರೋಜಾ ಚಂಗೊಳ್ಳಿ, ಹಿಟ್ಟೂರು ರಾಜು, ಫರ್ವೇಜ್ ಅಲ್ತಾಫ್, ಚಂದ್ರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.