ADVERTISEMENT

‘ಬಜೆಟ್‍ನಲ್ಲಿ ಕೊಡುಗೆ: ಮಧು ಬಂಗಾರಪ್ಪ ಶ್ರಮ ಕಾರಣ’

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2019, 14:21 IST
Last Updated 10 ಫೆಬ್ರುವರಿ 2019, 14:21 IST
ಎಚ್.ಗಣಪತಿ
ಎಚ್.ಗಣಪತಿ   

ಸೊರಬ: ಜಿಲ್ಲೆಯ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ₹200 ಕೋಟಿ ಅನುದಾನ ಬಜೆಟ್‍ನಲ್ಲಿ ಮೀಸಲಿಟ್ಟಿರುವುದರ ಹಿಂದೆ ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಪರಿಶ್ರಮವಿದೆ ಎಂದು ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ ಹೇಳಿದರು.

ಭಾನುವಾರ ಜೆಡಿಎಸ್-ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕು ಸೇರಿ ಜಿಲ್ಲೆಯ ನೀರಾವರಿ ಯೋಜನೆಗೆ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಹಲವು ಬಾರಿ ಪಾದಯಾತ್ರೆಯ ಮೂಲಕ ಹೋರಾಟ ಮಾಡಿದ್ದು, ಇದಕ್ಕೆ ಕುಮಾರಸ್ವಾಮಿ ಅವರು ಬೆಂಬಲ ನೀಡಿದ್ದಲ್ಲದೆ ಪಕ್ಷಭೇದ ಮರೆತು ಜಿಲ್ಲೆಯ ನೀರಾವರಿಗೆ ಬಜೆಟ್‍ನಲ್ಲಿ ಅನುದಾನ ಮೀಸಲಿಟ್ಟು ನುಡಿದಂತೆ ನಡೆದುಕೊಂಡ ಮುಖ್ಯಮಂತ್ರಿಗೆ ಕಾಂಗ್ರೆಸ್, ಜೆಡಿಎಸ್ ಅಭಿನಂದನೆ ಸಲ್ಲಿಸುತ್ತದೆ’ ಎಂದರು.

ತಾಲ್ಲೂಕಿನಲ್ಲಿ ಮಧು ಬಂಗಾರಪ್ಪ ಅವರು ₹ 23 ಕೋಟಿ ಅನುದಾನದಲ್ಲಿ ಕಚವಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡುವ ಜೊತೆಗೆ ಕಾಗೋಡು ತಿಮ್ಮಪ್ಪ, ಡಿ.ಕೆ.ಶಿವಕುಮಾರ್, ರೇವಣ್ಣ ಅವರ ವಿಶ್ವಾಸ ಪಡೆದು ಹೆಚ್ಚಿನ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಮೂಗೂರು ಹಾಗೂ ಮೂಡಿ ಏತನೀರಾವರಿ ಹಾಗೂ ಇತರೆ ಯೋಜನೆಗಳಿಗೆ ಬಜೆಟ್‍ನಲ್ಲಿ ನೂರಾರು ಕೋಟಿ ಅನುದಾನ ಮೀಸಲಿಡಲಾಗಿದೆ ಎಂದರು.

ADVERTISEMENT

ತಾಲ್ಲೂಕಿನ ಹಾಯ, ಗುಡವಿ, ಹಲಸಿನಕೊಪ್ಪ ಸೇತುವೆಗಳ ನಿರ್ಮಾಣಕ್ಕೆ ₹ 15 ಕೋಟಿ ಅನುದಾನ ಬಿಡುಗಡೆಯಾಗಿದೆ. ರಸ್ತೆಗಳ ನಿರ್ಮಾಣಕ್ಕೂ ₹ 5 ಕೋಟಿ ಅನುದಾನ ಬಿಡುಗಡೆಯಾಗಿದ್ದರ ಹಿಂದೆ ಮಧು ಬಂಗಾರಪ್ಪ ಅವರ ಪರಿಶ್ರಮ ಇದೆ ಎಂದು ಹೇಳಿದರು.

ಪಟ್ಟಣದ ರಸ್ತೆಯ ವಿಸ್ತರಣೆಗೆ ₹ 20 ಕೋಟಿ ಅನುದಾನ ಮೀಸಲಿಡಲಾಗಿದ್ದರೂ ಈವರೆಗೂ ವಿಸ್ತರಣೆ ಮಾಡುವಲ್ಲಿ ನಿಟ್ಟಿನಲ್ಲಿ ಶಾಸಕ ಕುಮಾರ್‌ ಬಂಗಾರಪ್ಪ ಮುಂದಾಗಿಲ್ಲ. ಮಧು ಬಂಗಾರಪ್ಪ ಅವರ ಅವಧಿಯಲ್ಲಿ ತೆರವುಗೊಳಿಸಿದ ಮನೆಗಳ ಮುಂದೆ ಜೆಸಿಬಿ ಮೂಲಕ ಕಾಮಗಾರಿ ಚಾಲನೆಗೊಳಿಸಿದ ನೆಪದಲ್ಲಿ ಕೆದರುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಜೆ.ಶಿವಾನಂದಪ್ಪ ಮಾತನಾಡಿದರು. ಜೆಡಿಎಸ್ ವಕ್ತಾರ ಎಂ.ಡಿ. ಶೇಖರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ವೀರೇಶ್ ಕೊಟಗಿ, ರಾಜೇಶ್ವರಿ ಗಣಪತಿ, ಪ್ರಶಾಂತಮೇಸ್ತ್ರಿ, ಕಲ್ಲಪ್ಪ ಚಿತ್ರಟ್ಟೆಹಳ್ಳಿ, ಜಿ.ಕೆರಿಯಪ್ಪ, ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.