ADVERTISEMENT

ಸಮಯ ಕಳೆಯಲು ಪತ್ರಿಕೆಗಳೇ ಸೂಕ್ತ: ಜಿಲ್ಲಾಧಿಕಾರಿ ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 12:37 IST
Last Updated 26 ಮಾರ್ಚ್ 2020, 12:37 IST
ಸಾಗರ ತಾಲ್ಲೂಕು ತ್ಯಾಗರ್ತಿ ಬಳಿ ಮಾರ್ಗ ಬಂದ್ ಮಾಡಲಾಗಿದೆ.
ಸಾಗರ ತಾಲ್ಲೂಕು ತ್ಯಾಗರ್ತಿ ಬಳಿ ಮಾರ್ಗ ಬಂದ್ ಮಾಡಲಾಗಿದೆ.   

ಶಿವಮೊಗ್ಗ: ದೇಶದಲ್ಲಿ ಕೊರೊನಾ ನಿರ್ಬಂಧವಿರುವ ಕಾರಣ ಜನರು ಮನೆಯಲ್ಲೇ ಕುಳಿತು ಸಮಯ ಕಳೆಯಲು ದಿನ ಪತ್ರಿಕೆ, ವಾರಪತ್ರಿಕೆ, ನಿಯತ ಕಾಲಿಕೆಗಳು ಅತ್ಯಗತ್ಯ. ಅದಕ್ಕಾಗಿ ಮುದ್ರಣ ಮಾಧ್ಯಮಗಳ ಪ್ರತಿನಿಧಿಗಳಿಗೆ, ಪತ್ರಿಕಾ ವಿತರಕರಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಭರವಸೆ ನೀಡಿದರು.

ದೇಶದಲ್ಲಿ ಉಂಟಾಗಿರುವ ಕೊರೊನಾ ವೈರಸ್ ತಡೆಗೆ ವಿಧಿಸಲಾಗಿರುವ ಲಾಕ್ ಡೌನ್ ಯಶಸ್ವಿಯಾಗಬೇಕಾದರೆ ಜನರು ತಮ್ಮ ಮನೆಗಳಲ್ಲಿ ಇರುವಂತೆ ಮಾಡಲು ಮಾಧ್ಯಮಗಳ ಸಹಕಾರ ಅಗತ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧಾ ತಿಳಿಸಿದರು.

ನಗರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಸಂಪಾದಕರು, ಪತ್ರಿಕಾ ವಿತರಕರ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

ಜನರು ನಿರಂತರವಾಗಿ ದೃಶ್ಯ ಮಾಧ್ಯಮ ವೀಕ್ಷಿಸಲು ಸಾಧ್ಯವಾಗದು.ಅದಕ್ಕಾಗಿ ಮನೆಗಳಿಗೆ ಹೆಚ್ಚುಪತ್ರಿಕೆಗಳನ್ನು ತರಿಸಿಕೊಳ್ಳಬೇಕು. ಜಗತ್ತಿನ, ಸ್ಥಳೀಯ ಆಗುಹೋಗುಗಳನ್ನು ಮನೆಯಲ್ಲೇ ಕುಳಿತು ಕೂಲಂಕಷವಾಗಿ ಓದಲು ಸಾಧ್ಯವಾಗುತ್ತದೆ. ಸಮಯವೂ ಸಾಗುತ್ತದೆ ಎಂದರು.

ಪ್ರೆಸ್‌ ಟ್ರಸ್ಟ್‌ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಪತ್ರಿಕಾ ವಿತರಕರಿಗೆ ಟ್ರಸ್ಟ್ ವತಿಯಿಂದ ಅಗತ್ಯ ಮಾಸ್ಕ್, ಕೈಗವಸುಗಳನ್ನು ವಿತರಿಸುವ ಭರವಸೆ ನೀಡಿದರು.

ಹಲವೆಡೆ ಮಾರ್ಗಗಳೇ ಬಂದ್

ಜಿಲ್ಲೆಯ ಹಲವು ಗ್ರಾಮಗಳಲ್ಲಿ ಹೊರಗಿನವರ ಪ್ರವೇಶ ತಡೆಯಲು ರಸ್ತೆ ಮಾರ್ಗಗಳನ್ನೇ ಬಂದ್ ಮಾಡಲಾಗಿದೆ. ಸಾಗರ ತಾಲ್ಲೂಕಿನ ಆನಂದಪುರಂ ಸಮೀಪದ ತ್ಯಾಗರ್ತಿ, ಮೈಲಾರಿಕೊಪ್ಪ, ನಾಡವಳ್ಳಿ, ಚನ್ನಾಪುರ ಮಾರ್ಗದಲ್ಲಿ ಬಿದಿರು, ಮರದ ದಿಮ್ಮಿಗಳನ್ನು ಅಡ್ಡಹಾಕಿ ಸಂಚಾರಕ್ಕೆ ತಡೆಯೊಡ್ಡಲಾಗಿದೆ.

ಪ್ರಕರಣ ದಾಖಲು: ಕೊರೊನಾ ಪೀಡಿತ ದೇಶದಿಂದ ತೀರ್ಥಹಳ್ಳಿ ತಾಲ್ಲೂಕಿಗೆ ಬಂದು ಹೋಂ ಕ್ವಾರಂಟೈನ್‌ನಲ್ಲಿದ್ದ ಇಬ್ಬರ ವಿರುದ್ಧ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಣ್ಗಾವಲು ತಪ್ಪಿಸಿಸಾರ್ವಜನಿಕರ ಜತೆ ಬೆರೆತು ಕ್ರಿಕೆಟ್‌ ಆಡುತ್ತಿದ್ದ ಆರೋಪದ ಮೇಲೆಮಹಮ್ಮದ್‌ ಸೊಯಬ್‌, ಮಹಮದ್ ಹುಸೇನ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ.

ಕೋಳಿ ಫಾರಂ ಮಾಲೀಕನ ವಿರುದ್ಧ ಪ್ರಕರಣ: ಫಾರಂನಲ್ಲಿ ಹೆಚ್ಚು ಸಂಖ್ಯೆಯ ಕೋಳಿಗಳು ಮೃತಪಟ್ಟರೂ ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ ನಿರ್ಲಕ್ಷ್ಯ ತೋರಿದ ಶಿಕಾರಿಪುರ ಅಂಬರಗೊಪ್ಪ ನಿವಾಸಿ ರಂಗಸ್ವಾಮಿ ವಿರುದ್ಧ ಬುಧವಾರ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.