ADVERTISEMENT

ಅಧಿಕಾರಿ ಸೋಗಿನಲ್ಲಿ ಬೆದರಿಕೆ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 8:17 IST
Last Updated 2 ನವೆಂಬರ್ 2022, 8:17 IST

ಶಿವಮೊಗ್ಗ: ಆಹಾರ ಸುರಕ್ಷತಾ ಅಂಕಿತ ಅಧಿಕಾರಿಯ ಅಧಿಕೃತ ಜೀಪಿನಲ್ಲೇ ನಕಲಿ ಅಧಿಕಾರಿಯೊಬ್ಬ ಸೋಮವಾರ ನಗರದ ವಿವಿಧೆಡೆ ಹೋಟೆಲ್‌ಗಳ ಮೇಲೆ ದಾಳಿ ನಡೆಸಲು ಹೋಗಿ ಸಿಕ್ಕಿಹಾಕಿಕೊಂಡಿದ್ದಾನೆ. ಈ ಬಗ್ಗೆ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿನೋಬನಗರದಲ್ಲಿ ನೂತನವಾಗಿ ಆರಂಭವಾದ ಬೆಣ್ಣೆದೋಸೆ ಹೋಟೆಲ್ ಮತ್ತು ಮಾರ್ಟ್‌ಗೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಯ ಜೀಪಿನಲ್ಲಿ ಬಂದ ಗಂಗಾಧರ್ ಎಂಬ ವ್ಯಕ್ತಿ ಪರಿಶೀಲನೆಯ ನೆಪದಲ್ಲಿ ಒಳ ಪ್ರವೇಶಿಸಿ ಕೆಲವು ಲೋಪಗಳನ್ನು ತೋರಿಸಿ ದಂಡದ ರೂಪದಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ₹ 12 ಸಾವಿರ ನೀಡುವಂತೆ ತಾಕೀತು ಮಾಡಿದ್ದಾರೆ.

ಮರು ದಿನ ಕೊಡುವುದಾಗಿ ಅಂಗಡಿ ಮಾಲೀಕ ಹೇಳಿದ್ದು, ಅಧಿಕಾರಿ ಸೋಗಿನಲ್ಲಿದ್ದ ವ್ಯಕ್ತಿ ಕೊನೆಗೆ ₹ 2 ಸಾವಿರ ಪಡೆಯುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ADVERTISEMENT

ಈ ಬಗ್ಗೆ ಅನುಮಾನಗೊಂಡ ಹೋಟೆಲ್‌ನವರು ವಿಚಾರಿಸಿದ್ದು ತಾನು ಆ ಇಲಾಖೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿದ್ದೇನೆ. ಸಾಹೇಬರ ಅನುಮತಿ ಮೇರೆಗೆ ಬಂದಿದ್ದೇನೆ ಎಂದು ಹೇಳಿದ್ದಾನೆ. ಆ ಬಗ್ಗೆ ಸ್ಪಷ್ಟನೆ
ಪಡೆಯಲು ಆಹಾರ ಸುರಕ್ಷತಾ ಅಂಕಿತ ಅಧಿಕಾರಿಗೆ ಕರೆ ಮಾಡಿದಾಗ ಪರಾರಿಯಾಗಿದ್ದಾನೆ.

ಈ ಬಗ್ಗೆ ವಿನೋಬ ನಗರ ‍ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಸರ್ಕಾರಿ ಜೀಪನ್ನು ವಶಪಡಿಸಿಕೊಂಡಿದ್ದು, ನಕಲಿ ಅಧಿಕಾರಿಯ ಬಂಧನಕ್ಕೆ ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.