ADVERTISEMENT

‘ಬೆಳೆವಿಮೆ; ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ’

ಶಾಸಕ ಗೋಪಾಲಕೃಷ್ಣ ಬೇಳೂರು ಭರವಸೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 5:10 IST
Last Updated 7 ಡಿಸೆಂಬರ್ 2025, 5:10 IST
ಹೊಸನಗರ ತಾಲ್ಲೂಕಿನ ನಿಟ್ಟೂರಿನಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆ ಕಾರ್ಯಾಗಾರವನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಉದ್ಘಾಟಿಸಿದರು ‌
ಹೊಸನಗರ ತಾಲ್ಲೂಕಿನ ನಿಟ್ಟೂರಿನಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆ ಕಾರ್ಯಾಗಾರವನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಉದ್ಘಾಟಿಸಿದರು ‌   

ಹೊಸನಗರ: ‘ಮಲೆನಾಡಿನ ರೈತರು ಅತೀ ಹೆಚ್ಚಿನ ಮಳೆಯಿಂದಾಗಿ ಬೆಳೆ ಕಳೆದುಕೊಂಡು, ಸೂಕ್ತ ಬೆಳೆ ವಿಮೆ ಪರಿಹಾರದಿಂದ ವಂಚಿತರಾಗಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ವಿಮೆ ಪರಿಹಾರವನ್ನು ಕೊಡಿಸುವಲ್ಲಿ ನಾನು ಬದ್ಧನಾಗಿದ್ದೇನೆ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಭರವಸೆ ನೀಡಿದರು.

ತಾಲ್ಲೂಕಿನ ನಿಟ್ಟೂರು ಶ್ರೀ ರಾಮೇಶ್ವರ ಸಭಾಭವನದಲ್ಲಿ‌ ಶಿವಮೊಗ್ಗ ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯಿತಿ, ಸಸ್ ಅಗ್ರಿ ಪ್ರೈ ಲಿಮಿಟೆಡ್, ನಿಟ್ಟೂರು ಶೋಧಾ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಜಂಟಿಯಾಗಿ ಆಯೋಜಿಸಿದ್ದ ಪರಂಪರಾಗತ ಕೃಷಿ ವಿಕಾಸ ಯೋಜನೆಯ ಬ್ರಾಂಡಿಂಗ್ ಮತ್ತು ಲೇಬಲಿಂಗ್ ಕುರಿತ ರೈತರ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಹೊಸನಗರ, ಸಾಗರ ಸೇರಿದಂತೆ ಅತೀಹೆಚ್ಚು ಮಳೆ ಬೀಳುವ ತಾಲ್ಲೂಕಿನ ರೈತರು ಮೊದಲೇ ಕೊಳೆರೋಗ, ಎಲೆಚುಕ್ಕೆ ರೋಗದಿಂದ ತತ್ತರಿಸಿದ್ದಾರೆ. ಹವಮಾನಾಧರಿತ ಬೆಳೆ ವಿಮೆಯನ್ನು ಬಹುತೇಕ ರೈತರು ನೆಚ್ಚಿಕೊಂಡಿದ್ದರು. ಆದರೆ, ಗಾಯದ ಮೇಲೆ ಬರೆ ಎಳೆದಂತೆ ಸೂಕ್ತ ವಿಮೆ ಪರಿಹಾರ ಸಿಗದೇ ಕಂಗಾಲಾಗಿದ್ದಾರೆ. ಈ ಕಠಿಣ ಸಂದರ್ಭದಲ್ಲಿ ನಾನು ನಿಮ್ಮ ಜೊತೆಗಿರುತ್ತೇನೆ’ ಎಂದು ತಿಳಿಸಿದರು.

ADVERTISEMENT

ವಿಮಾ ಕಂಪನಿ ಹೊಣೆ; ಬೆಳೆ ವಿಮೆ ಯೋಜನೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಜೊತೆ ರೈತರ ಪಾಲು‌ ಇದೆ. ಬೆಳೆ ವಿಮೆ ತಾರತಮ್ಯದಲ್ಲಿ ಸರ್ಕಾರದ ಪಾತ್ರವಲ್ಲ. ಇದಕ್ಕೆ ವಿಮಾ ಕಂಪನಿಯೇ ನೇರ ಹೊಣೆ. ಈ ಸಂಬಂಧ ಸದನದಲ್ಲೂ ಚರ್ಚಿಸುತ್ತೇನೆ ಎಂದರು.

‘ಬೆಳೆವಿಮೆ ಬರುವ ಮುನ್ನ ಭಾರೀ ಮಾತನಾಡುತ್ತಿದ್ದ ಸಂಸದರು ಇದೀಗ ರಾಜ್ಯ ಸರ್ಕಾರವನ್ನು ಬೊಟ್ಟು ಮಾಡುತ್ತಿದ್ದಾರೆ. ಮಳೆ ಕಾಣದ ಶಿಕಾರಿಪುರ ಸೊರಬದಲ್ಲಿ ನೂರರಷ್ಟು ವಿಮೆ ಸಿಗುತ್ತದೆ. ಆದರೆ, ಅತೀ ಹೆಚ್ಚು ಮಳೆ ಬೀಳುವ ಆಗುಂಬೆ, ಹುಲಿಕಲ್ ಪ್ರದೇಶ ಹೊಂದಿರುವ ತೀರ್ಥಹಳ್ಳಿ, ಹೊಸನಗರ, ಸಾಗರಕ್ಕೆ ಮಾತ್ರ ಬಾರೀ ತಾರತಮ್ಯವಾಗುತ್ತದೆ. ಇದಕ್ಕೆ ಕಾರಣ ಯಾರು? ಈ ಬಗ್ಗೆ ಪರಿಶೀಲನೆ ಆಗಬೇಕು. ಯಾವುದೇ ಸರ್ಕಾರವಾಗಿರಲಿ, ಮುಖ್ಯಮಂತ್ರಿಯೇ ಆಗಲಿ ರೈತರ ಪರವಾಗಿ ನಾನು ಧ್ವನಿ ಎತ್ತುತ್ತೇನೆ’ ಎಂದು ಭರವಸೆ ನೀಡಿದರು.

ರೈತರು ತಾವು ಬೆಳೆದ ಬೆಳೆಗಳನ್ನು ನೇರವಾಗಿ ಮಾರುಕಟ್ಟೆಗೆ ಬಿಡಲು‌ ಮುಂದಾಗಬೇಕು. ತಾವು ಉತ್ಪಾಧಿಸಿದ ಪದಾರ್ಥಗಳ ಬ್ರಾಂಡಿಂಗ್ ಮಾಡಿ ಒಮ್ಮೆ ಯಶಸ್ವಿಯಾದರೇ ಮಾರುಕಟ್ಟೆಯಲ್ಲಿ ಸಾಕಷ್ಟು ಸಮಯ ಬಾಳುತ್ತದೆ. ಬ್ರಾಂಡಿಂಗ್ ಮತ್ತು ಲೇಬಲಿಂಗ್ ಮಾಡುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಶೋಧಾ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಅಧ್ಯಕ್ಷ ಪುರುಶೋತ್ತಮ ಬೆಳ್ಳಕ್ಕ ಸಮಗ್ರ ಮಾಹಿತಿ ನೀಡಿದರು.

ರಾಷ್ಟ್ರ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ತರಬೇತುದಾರ ಯೋಗೀಶ್ ಅಪ್ಪಾಜಯ್ಯ ಬ್ರಾಂಡಿಂಗ್ ಹಾಗೂ ಲೇಬಲಿಂಗ್ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಬೆಂಗಳೂರು ಸಸ್ ಅಗ್ರಿ ಸಂಸ್ಥೆಯ ವ್ಯವಸ್ಥಾಪಕ ಗೋಪಾಲಕೃಷ್ಣ ಹೆಗಡೆ, ಸಸ್ ಅಗ್ರಿ ಸಹಾಯಕ ನಿರ್ದೇಶಕರಾದ ರವಿ ನಾಯಕ್ , ಆಕಾಶ್, ಆಪ್ಸ್‌ಕೋಸ್ ಉಪಾಧ್ಯಕ್ಷ ಎ.ಒ. ರಾಮಚಂದ್ರ, ತಾಲ್ಲೂಕು ತೋಟಗಾರಿಕಾಧಿಕಾರಿ ಪುಟ್ಟನಾಯ್ಕ್, ಸಾಗರ ತೋಟಗಾರಿಕಾಧಿಕಾರಿ ಮಹಾಬಲೇಶ್ವರ, ಡಿ.ಪಿ.ಕೃಷ್ಣಮೂರ್ತಿ, ಬಿ.ಎನ್. ಗುರುಮೂರ್ತಿ, ಎನ್.ಶಿವರಾಮಶೆಟ್ಟಿ ಸಂಪದಮನೆ, ದುಮ್ಮ ವಿನಯಕುಮಾರ್, ಬಿ.ಜಿ.ಚಂದ್ರಮೌಳಿಗೌಡ, ವಿನಾಯಕ ಚಕ್ಕಾರು, ಶೋಧ ಫಾರ್ಮರ್ಸ್ ಪದಾಧಿಕಾರಿಗಳು, ನಿರ್ದೇಶಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.