
ಶಿವಮೊಗ್ಗ: ‘ದೈವಜ್ಞ ಸಮಾಜದವರು ಚಿನ್ನ– ಬೆಳ್ಳಿಯಂತೆ ಶುದ್ಧವಾಗಿರಬೇಕು’ ಎಂದು ಮಾದಾರ್ಯ ಅಕ್ಷೋಭ್ಯ ತೀರ್ಥ ಮೂಲ ಸಂಸ್ಥಾನ ಮಠದ ಕಿರಿಯ ಪೀಠಾಧಿಪತಿ ಅಕ್ಷೋಭ್ಯ ರಾಮಪ್ರಿಯ ತೀರ್ಥ ಶ್ರೀಗಳು ಹೇಳಿದರು.
ಇಲ್ಲಿನ ದೈವಜ್ಞ ಬ್ರಾಹ್ಮಣ ವಾದಿರಾಜ ಶಿಷ್ಯವೃಂದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಮಧ್ವಾಧಿರಾಜರ 546ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
‘ಇವತ್ತು ಚಿನ್ನ, ಬೆಳ್ಳಿಗೆ ಉತ್ತಮ ಬೆಲೆ ಇದೆ. ಹಾಗೆಯೇ ದೈವಜ್ಞ ಸಮಾಜದವರು ಪ್ರಾಮಾಣಿಕರಾಗಿದ್ದು, ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕು. ಅಭರಣಗಳ ತಯಾರಿಸುವ ಕೆಲಸ ಮಾತ್ರ ನಮ್ಮದು. ಅದರಲ್ಲಿ ತಯಾರಿಕೆಯ ವೆಚ್ಚ ಮಾತ್ರ ನಮಗೆ ಸಲ್ಲುತ್ತದೆ. ನಿಜವಾದ ಆಭರಣ ಮಾಲೀಕನದ್ದು. ಹಾಗೆಯೇ ಭಕ್ತಿ ಕೂಡ, ಭಕ್ತಿ ನಮ್ಮದು, ಶಕ್ತಿ ನಮ್ಮ ದೇವರದ್ದು’ ಎಂದರು.
‘ವಾದಿರಾಜರ ಶಿಷ್ಯ ವೃಂದ ಎರಡನೇ ಬಾರಿಗೂ ತುಂಬಾ ಅಚ್ಚುಕಟ್ಟಾಗಿ ಶಿವಮೊಗ್ಗದಲ್ಲಿ ಜಯಂತ್ಯುತ್ಸವ ಆಚರಿಸಿದೆ. ಇದು ನೆನಪಿನಲ್ಲಿ ಉಳಿಯುವಂತಹದ್ದು. ವಾದಿರಾಜರ ಜನ್ಮ ವೃತ್ತಾಂತ ತಿಳಿಸಿದ ಶ್ರೀಗಳು, ವಾದಿರಾಜರು ದೇವರ ಮಗ. ದೇವರ ಮಗ ಎಂದು ಹೇಳುವುದು ಅಷ್ಟು ಸುಲಭದ ಮಾತಲ್ಲ. ಬ್ರಹ್ಮ ಪದವಿ ಪಡೆಯುವವರು ಮಾತ್ರ ದೇವರ ಕಂದ ಎನಿಸಿಕೊಳ್ಳುತ್ತಾರೆ. ವಾದಿರಾಜರು ಭಗವಂತನಲ್ಲಿ ಲೀನರಾಗಿ ಈ ಪದವಿ ಪಡೆದಿದ್ದಾರೆ’ ಎಂದರು.
ಇದಕ್ಕೂ ಮೊದಲು ಮಧ್ವಾಧಿರಾಜರ ಭಾವಚಿತ್ರ ಮೆರವಣಿಗೆ ತಿಲಕ ನಗರದ ರಾಘವೇಂದ್ರ ಸ್ವಾಮಿ ಮಠದಿಂದ, ಜೈಲ್ ಸರ್ಕಲ್ನಲ್ಲಿರುವ ದೈವಜ್ಞ ಬ್ರಾಹ್ಮಣ ಕಲ್ಯಾಣ ಮಂಟಪದವರೆಗೆ ನಡೆಯಿತು.
ನಂತರ ಪೂಜಾ ನಮನ ಕಾರ್ಯಕ್ರಮ, ಸಮಾಜದ ಮಹಿಳೆಯರು ಲಕ್ಷ್ಮೀ ಸೋಬಾನೆ ಪದ ಹಾಡಿದರು. ಮಠದಿಂದ ಬಂದ ಮಂತ್ರಾಕ್ಷತೆ ವಿತರಿಸಲಾಯಿತು. ನಂತರ ಪ್ರಸಾದ ವಿನಿಯೋಗ ನಡೆಯಿತು.
ಕಾರ್ಯಕ್ರಮದಲ್ಲಿ ನಾಗಭೂಷಣ ಆಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಷ್ಯ ವೃಂದದವರು ಹಾಗು ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.