
ಶಿವಮೊಗ್ಗ: ದೇಶಕ್ಕೆ ಸೈನಿಕರ ಕೊಡುಗೆ ಅಪಾರ. ಮಾಜಿ ಸೈನಿಕರು ಹಾಗೂ ಹುತಾತ್ಮ ಸೈನಿಕರ ಕುಟುಂಬಕ್ಕೆ ಲಭ್ಯವಿರುವ ಸೌಲಭ್ಯಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸಶಸ್ತ್ರ ಧ್ವಜ ದಿನಾಚರಣೆಯಲ್ಲಿ ಧ್ವಜ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕಳೆದ ಸಾಲಿನ ಧ್ವಜ ದಿನಾಚರಣೆ ನಿಧಿ ಸಂಗ್ರಹದಲ್ಲಿ ನಿಗದಿತ ಗುರಿಗಿಂತ ಹೆಚ್ಚಿನ ಸಾಧನೆ ತೋರಿದ್ದಕ್ಕಾಗಿ ಜಿಲ್ಲೆಗೆ ರಾಜ್ಯಪಾಲರಿಂದ ಪ್ರಶಸ್ತಿ ಲಭಿಸಿದೆ. ಇದು ಹೆಮ್ಮೆಯ ವಿಷಯ ಎಂದು ಹೇಳಿದರು.
ಧ್ವಜ ದಿನಾಚರಣೆ ಅಂಗವಾಗಿ ಸಂಗ್ರಹಿಸುವ ನಿಧಿಯು ಮಾಜಿ ಸೈನಿಕರು, ಹುತಾತ್ಮ ಸೈನಿಕರ ಅವಲಂಬಿತರ ಕಲ್ಯಾಣಕ್ಕಾಗಿ ಗೌರವ ರೂಪದಲ್ಲಿ ವಿನಿಯೋಗವಾಗುವುದು. ಹುತಾತ್ಮ ಸೈನಿಕರ ಅವಲಂಬಿತರು ನಿವೇಶನಕ್ಕೆ ಬೇಡಿಕೆ ಇಟ್ಟಿದ್ದು, ಈ ಕುರಿತು ಪರಿಶೀಲಿಸಲಾಗುವುದು ಎಂದು ಹೇಳಿದರು.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ಸಿ.ಎ.ಹಿರೇಮಠ, ನಿವೃತ್ತ ಕರ್ನಲ್ ರಾಮಚಂದ್ರ, ಸೈನಿಕರ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪಿ.ವಿ.ಕೃಷ್ಣಮೂರ್ತಿ, ಉಪಾಧ್ಯಕ್ಷ ವೆಂಕಟೇಶ್ ರಾವ್, ಕಾರ್ಯದರ್ಶಿ ಉಮೇಶ್ ಬಾಪಟ್, ಸೈನಿಕ ಕಲ್ಯಾಣ ಇಲಾಖೆ ಸಿಬ್ಬಂದಿಯಾದ ದಿನೇಶ್, ಅನಿಲ್, ಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.