ಶಿವಮೊಗ್ಗ: ಒಂದೂವರೆ ವರ್ಷದ ನಂತರ ಶಾಲೆಗಳು ಆರಂಭವಾಗಿವೆ. ಸದ್ಯಕ್ಕೆ ಪಠ್ಯ ಕಡಿತಗೊಳಿಸುವ ಚಿಂತನೆ ಇಲ್ಲ. ಈ ಕುರಿತು ಡಿಸೆಂಬರ್ನಲ್ಲಿ ನಿರ್ಧರಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ನಗರದ ಮಲವಗೊಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ 1ರಿಂದ 5ನೇ ತರಗತಿ ಪ್ರಾರಂಭೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಪದವಿಪೂರ್ವ ಕಾಲೇಜುಗಳನ್ನು ಬೇಗನೆ ಆರಂಭಿಸಿದ ಕಾರಣ ಪಠ್ಯ ಕಡಿತಗೊಳಿಸುವುದಿಲ್ಲ. ಒಂದು ತಿಂಗಳ ವಿಳಂಬವಾಗಿದೆ ಅಷ್ಟೆ. ಈಗಾಗಲೇ ದಸರೆ ರಜೆ ಹೊಂದಾಣಿಕೆ ಮಾಡಲಾಗಿದೆ. ಮುಂದೆ ಇನ್ನಷ್ಟು ರಜೆ ಹೊಂದಾಣಿಕೆ ಮೂಲಕ ಪಠ್ಯ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಾಥಮಿಕ ಶಿಕ್ಷಕರ ಬೇಡಿಕೆ ಈಡೇರಿಸಲು ಈಗಾಗಲೇ 3 ಸುತ್ತಿನ ಮಾತುಕತೆ ನಡೆದಿದೆ. ಬಡ್ತಿ ವಿಷಯದಲ್ಲಿ ಸರ್ಕಾರ, ಸಂಘದ ಮಧ್ಯೆ ಸಹಮತ ಸಾಧ್ಯವಾಗಿಲ್ಲ. ಪರೀಕ್ಷೆ ನಡೆಸಿ ಪ್ರೌಢಶಾಲೆಗೆ ಬಡ್ತಿ ನೀಡಲು ಸರ್ಕಾರ ಸಿದ್ಧವಿದೆ ಎಂದರು.
ರಾಜ್ಯದಲ್ಲಿ 48 ಸಾವಿರ ಶಾಲೆಗಳಿವೆ. 28,900 ಶಾಲೆಗಳು ಸುಸ್ಥಿತಿಯಲ್ಲಿವೆ. 7 ಸಾವಿರ ಶಾಲೆಗಳ ದುರಸ್ತಿ ಮಾಡಬೇಕಿದೆ. ಇಂತಹ ಶಾಲೆಗಳಲ್ಲಿ ಎರಡು ಪಾಳಿಯಲ್ಲಿ ಶಾಲೆ ತರಗತಿ ಸೂಚಿಸಲಾಗಿದೆ. ಮಕ್ಕಳ ಸಂಖ್ಯೆ ತೀರ ಕ್ಷೀಣಿಸಿರುವ ಶಾಲೆಗಳನ್ನು ದುರಸ್ತಿ ಮಾಡುವ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಶಾಲೆಗಳ ಅಭಿವೃದ್ಧಿಗೆ ದತ್ತು ಯೋಜನೆ ಜಾರಿ ಮಾಡಲಾಗುತ್ತಿದೆ. ಅದಕ್ಕಾಗಿ ‘ನನ್ನ ಶಾಲೆ ನನ್ನ ಕೊಡುಗೆ’ ಆ್ಯಪ್ ರೂಪಿಸಲಾಗಿದೆ ಎಂದು ವಿವರ ನೀಡಿದರು.
ಸದ್ಯ ಅರ್ಧ ದಿನ ಶಾಲೆ ನಡೆಸಲು ಸೂಚಿಸಲಾಗಿದೆ. ಮುಂದಿನ ವಾರದಿಂದ 1ರಿಂದ 5ನೇ ತರಗತಿ ಮಕ್ಕಳಿಗೂ ಬಿಸಿಯೂಟ ನೀಡಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.