ADVERTISEMENT

ಶಾಸಕ ಕೆ.ಎಸ್‌. ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಮನವಿ

ಮುಸ್ಲಿಂ ಸಮುದಾಯದ ನಿಂದನೆ ಆರೋಪ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 4:57 IST
Last Updated 15 ಮಾರ್ಚ್ 2023, 4:57 IST
ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆಯಾಗುಂತಹ ಹೇಳಿಕೆ ನೀಡಿರುವ ಶಾಸಕ ಕೆ.ಎಸ್. ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪೀಸ್ ಆರ್ಗನೈಜೇಷನ್ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆಯಾಗುಂತಹ ಹೇಳಿಕೆ ನೀಡಿರುವ ಶಾಸಕ ಕೆ.ಎಸ್. ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪೀಸ್ ಆರ್ಗನೈಜೇಷನ್ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.   

ಶಿವಮೊಗ್ಗ: ಮಂಗಳೂರಿನ ಕಾವೂರಿನಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಭಾಷಣದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ ಅವರು ಮುಸ್ಲಿಂ ಸಮುದಾಯದ ವಿರುದ್ಧ ಧಾರ್ಮಿಕ ನಿಂದನೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೀಸ್ ಆರ್ಗನೈಜೇಷನ್ ಮುಖಂಡ ರಿಯಾಜ್ ಅಹಮದ್ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

‘ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಶಾಸಕ ಈಶ್ವರಪ್ಪ ಅವರು ‘ಅಜಾನ್ ಕೂಗಿದರೆ ಮಾತ್ರ ಅಲ್ಲಾಹನಿಗೆ ಕೇಳುವುದೇ? ಅಲ್ಲಾಹನು ಕಿವುಡನೇ. ಇನ್ನು ಸ್ವಲ್ಪ ದಿನಗಳು ತಡೆದುಕೊಳ್ಳಿ ಜಿನ್ನಾ ಸಂತತಿಯೇ ಭಾರತದಲ್ಲಿ ಇರುವುದಿಲ್ಲ’ ಎಂದು ಅಜಾನ್ ಮತ್ತು ಅಲ್ಲಾಹನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಒಂದು ಸಮುದಾಯವನ್ನು ಎತ್ತಿ ಕಟ್ಟುವ ಕೆಲಸ ಮಾಡಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕೆಡಿಸುವ ಪ್ರಯತ್ನ ಮಾಡಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿ ವರ್ಧಕ ಬಳಸಬಾರದು ಎಂಬ ಸುಪ್ರೀಂ ಕೋರ್ಟ್‌ನ ಆದೇಶವನ್ನು ತಪ್ಪಾಗಿ ಉಲ್ಲೇಖಿಸಿ ಈಶ್ವರಪ್ಪ ಸುಳ್ಳು ಹೇಳಿದ್ದಾರೆ’ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ದೂರಲಾಗಿದೆ.

‘ಮುಸ್ಲಿಮರು ಆಜಾನ್ ಕೂಗುವುದು ಅಲ್ಲಾಹನಿಗೆ ಕೇಳಲಿ ಎಂದಲ್ಲ; ಏಕದೈವ ಆರಾಧಕರು ಸೃಷ್ಟಿಕರ್ತನಿಗೆ ತಲೆಬಾಗಿ ತಮ್ಮ ಜೀವನವನ್ನು ಸೃಷ್ಟಿಕರ್ತನ ಆಜ್ಞೆಯಂತೆ ಪಾಲಿಸಲು ಕೂಗುವಂತಹ ಕರೆ ಹಾಗೂ ಪ್ರಾರ್ಥನೆ. ಆದರೆ, ಈಶ್ವರಪ್ಪ ಅವರು ನೀಡಿರುವ ಹೇಳಿಕೆಯಿಂದ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗೆ ತೀವ್ರ ಧಕ್ಕೆಯಾಗಿದೆ. ಹೀಗಾಗಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.