ತುಮರಿ: ‘ಧರ್ಮ ಧರ್ಮಗಳ ನಡುವೆ ಹಾಗೂ ಮನುಷ್ಯ ಮನುಷ್ಯರ ನಡುವೆ ಸಾಮರಸ್ಯ ಮೂಡಿಸುವುದೇ ಧರ್ಮದ ಪರಮ ಗುರಿ. ಒತ್ತಡದ ಮನಸ್ಸು ಮತ್ತು ದೇಹವನ್ನು ದಂಡಿಸಿ ನೆಮ್ಮದಿಯ ಸ್ಥಿತಿಯನ್ನು ಹೊಂದಲು ಯೋಗ ಒಂದು ಸಾಧನವಾಗಿದೆ’ ಎಂದು ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮಾಧಿಕಾರಿ ಎಸ್.ರಾಮಪ್ಪ ಹೇಳಿದರು.
ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಿ ಎಜುಕೇಷನ್ ಹಾಗೂ ಚಾರಿಟೇಬಲ್ ಟ್ರಸ್ಟ್, ಆನಂದ ಮಾರ್ಗ ಪ್ರಚಾರಕ ಸಂಘದ ಸಹಯೋಗದಲ್ಲಿ ಭಾನುವಾರ ನಡೆದ ರಾಷ್ಟ್ರಮಟ್ಟದ ಯೋಗ ಶಿಬಿರ– ಧರ್ಮ ಮಹಾಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಯೋಗವು ಧಾರ್ಮಿಕ ಸಾಧನೆಯ ಭಾಗವಾಗಿದೆ. ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ದೊಡ್ಡದು. ನಿರಂತರ ಯೋಗದಿಂದ ಮಾನಸಿಕ ಶಾಂತಿ ಸಾಧ್ಯವಿದ್ದು, ಸಂತರು ಬದುಕಿದ ನಾಡಿನಲ್ಲಿ ಪ್ರತಿಯೊಬ್ಬರೂ ಆರೋಗ್ಯಯುತ ಜೀವನ ನೆಡೆಸಲು ಪ್ರಯತ್ನಿಸಬೇಕು’ ಎಂದು ಹೇಳಿದರು.
ಕೋಲ್ಕತ್ತ ಪ್ರಚಾರಕ ಸಂಘದ ಮಾರ್ಗಗುರು ಆಚಾರ್ಯ ಪ್ರಿಯ ಕೃಷ್ಣಾನಂದ ಅವಧೂತ ಶ್ರೀಗಳು, ಆಚಾರ್ಯ ಸುತೀಥಾನಂದ ಅವಧೂತ ಶ್ರೀಗಳು ಮಾತನಾಡಿದರು.
ಎರಡು ದಿನಗಳ ಕಾರ್ಯಕ್ರಮದಲ್ಲಿ ಯೋಗ ಮತ್ತು ಧ್ಯಾನದ ವೈಯಕ್ತಿಕ ಕಲಿಕೆ, ಸಾಮೂಹಿಕ ಧ್ಯಾನ, ಪಾಂಚಜನ್ಯ ನಡೆಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಕಾರ್ಯಕ್ರಮದಲ್ಲಿ ವಿವಿಧ ರಾಷ್ಟ್ರ
ಹಾಗೂ ರಾಜ್ಯಗಳಿಂದ 400ಕ್ಕೂ ಅಧಿಕ ಸಂತರು ಪಾಲ್ಗೊಂಡಿದ್ದರು. ದೇವಸ್ಥಾನದ ಸುತ್ತ ಮುತ್ತ ಬಿಗಿ ಭದ್ರತೆ ಒದಗಿಸಲಾಗಿತ್ತು.
ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್.ಆರ್, ರಾಜ್ಯ ಸಮಿತಿ ಅಧ್ಯಕ್ಷ ಗಣೇಶ ಉಪ್ಪೋಣಿ, ಧರ್ಮ ಪ್ರಚಾರಕ ವಿಶುದ್ಧಾತ್ಮಾನಂದ ಅವಧೂತ, ಶಿವಮೊಗ್ಗದ ಭಕ್ತಿ ಪ್ರಧಾನ ಜನಮೇಜಿರಾವ್, ಮಹಾಭಲೇಶ್ವರ್ ಸಾಗರ, ಶಾಂತಮೂರ್ತಿ, ಅಮೃತಾನಂದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.