ADVERTISEMENT

ಹೊಸನಗರ|ವಿಭಾಗಾಧಿಕಾರಿ ತಡಯಾಜ್ಞೆ ಕಾನೂನು ಬಾಹಿರ: ಗಿರೀಶ್‌

ತಾ.ಪಂ. ಮಾಜಿ ಸದಸ್ಯೆ ಅಕ್ರಮ ರಕ್ಷಿಸಲು ಓಡೋಡಿ ಬಂದ ನಾಯಕರು

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 16:18 IST
Last Updated 4 ಜೂನ್ 2023, 16:18 IST
ಗಿರೀಶ್ ಆಚಾರ್
ಗಿರೀಶ್ ಆಚಾರ್   

ಹೊಸನಗರ: ತಾಲ್ಲೂಕಿನ ಕಚ್ಚಿಗೆಬೈಲು ಸರ್ವೆ ನಂ.31ರಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ರುಕ್ಮಿಣಿ ರಾಜು ಅವರು ಮಾಡಿದ್ದ ಅಕ್ರಮ ಜಮೀನು ಪ್ರಕರಣ ಸಂಬಂಧ ಇಲ್ಲಿನ ತಹಶೀಲ್ದಾರ್ ಅವರು ಹೊರಡಿಸಿದ್ದ ತೆರವು ಆದೇಶಕ್ಕೆ ವಿಭಾಗಧಿಕಾರಿ ಅವರು ತಡೆಯಾಜ್ಞೆ ನೀಡಿರುವುದು ಕಾನೂನು ಬಾಹಿರವಾಗಿದೆ ಎಂದು ಜನ ಸಂಗ್ರಾಮ ಪರಿಷತ್ ಸದಸ್ಯ ಗಿರೀಶ್ ಆಚಾರ್ ಆರೋಪಿಸಿದ್ದಾರೆ.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಅಕ್ರಮವಾಗಿ ಜಮೀನು ಕಬಳಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ತಹಸೀಲ್ದಾರ್ ಅವರು ತೆರವು ಆದೇಶ ಹೊರಡಿಸಿದ್ದರು. ಆ ಮೇರೆಗೆ ಕಂದಾಯ ಇಲಾಖೆಯು ಅಕ್ರಮವಾಗಿ ಕಟ್ಟಿದ್ದ ಗುಡಿಸಲನ್ನು ನಾಶ ಮಾಡಿತ್ತು. ಅಲ್ಲದೇ ಅಕ್ರಮವಾಗಿ ಹಾಕಿಕೊಂಡಿದ್ದ ಬೇಲಿ ಕಿತ್ತುಹಾಕಿತ್ತು. ಇದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಮಾಜಿ ಶಾಸಕ ಹಾಲಪ್ಪ ಹರತಾಳು ಅವರು ದಿಢೀರ್‌ ಪ್ರತಿಭಟನೆ ಮಾಡುವ ಮೂಲಕ ಈ ವಿಚಾರವನ್ನು ರಾಜಕೀಯಗೊಳಿಸಿದ್ದಾರೆ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಮಾಯಕರಂತಿರುವ ವಿಭಾಗಾಧಿಕಾರಿ ಅವನ್ನು ಸ್ಥಳಕ್ಕೆ ಕರೆಸಿಕೊಂಡು, ಬೆದರಿಸಿದ್ದಾರೆ. ಇದರಿಂದ ಉಪವಿಭಾಗಾಧಿಕಾರಿ ಪಲ್ಲವಿ ಅವರು ತಹಶೀಲ್ದಾರ್ ಅವರು ಹೊರಡಿಸಿದ್ದ ತೆರವು ಆದೇಶಕ್ಕೆ ತಡಯಾಜ್ಞೆ ನೀಡಿದ್ದಾರೆ. ಈ ನಡೆ ಕಾನೂನಿಗೆ ವಿರುದ್ಧವಾಗಿದೆ. ತಹಶೀಲ್ದಾರ್ ಆದೇಶ ಸಂಬಂಧ ಮೇಲ್ಮನವಿ ಸಲ್ಲಿಕೆಯಾಗದಿದ್ದರೂ ತಡಯಾಜ್ಷೆ ನೀಡಿರುವುದು ಸಂವಿಧಾನ ವಿರೋಧಿ ನಡೆ ಎಂದು ದೂರಿದರು.

ADVERTISEMENT

ರುಕ್ಮಿಣಿ ರಾಜು ಅವರು ಕಚ್ಚಿಗೆಬೈಲಿನಲ್ಲಿ ತಮ್ಮ ರಾಜಕೀಯ ಪ್ರಭಾವ ಬಳಸಿ ಏಳೆಂಟು ಎಕರೆ ಅರಣ್ಯ ಮತ್ತು ಕಂದಾಯ ಭೂಮಿಯನ್ನು ಅಕ್ರಮವಾಗಿ ಕಬಳಿಕೆ ಮಾಡಿ ಅಪಾರ ಪ್ರಮಾಣದ ಮರಗಿಡ ಕಡಿದು ನಾಶ ಮಾಡಿದ್ದರು. ಗ್ರಾಮಸ್ಥರ ವಿರೋಧದ ನಡುವೆಯೂ ಬೇಲಿ ಹಾಕಿದ್ದರು. ಈ ಬಗ್ಗೆ ಕಂದಾಯ ಇಲಾಖೆಗೆ ದೂರು ನೀಡಿದ್ದರಿಂದ ತಹಶೀಲ್ದಾರ್ ಅವರು ತೆರವು ಆದೇಶ ಹೊರಡಿಸಿದ್ದರು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.