ಶಿವಮೊಗ್ಗ: ಮನುಷ್ಯ ಮನುಷ್ಯರ ನಡುವೆ ಪರಸ್ಪರ ಸಂಬಂಧವನ್ನು ಬೆಳೆಸುವ ಕಾರ್ಯವನ್ನು ರಂಗಭೂಮಿ ಮಾಡುತ್ತಿದೆ ಎಂದು ರಂಗ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ಹೇಳಿದರು.
ಶಿವಮೊಗ್ಗ ರಂಗಾಯಣದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಸರಣಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಬಿ.ವಿ.ಕಾರಂತ ಅವರ ಜನ್ಮದಿನ ನೆನಪಿನ ರಂಗಸಂಗೀತ ಹಾಗೂ ಶಿವಮೊಗ್ಗ ರಂಗಾಯಣ ರೆಪರ್ಟರಿ ನಾಟಕ ವಿದುರಾಶ್ವಥದ ವೀರಗಾಥೆ ‘ಹತ್ಯಾಕಾಂಡ’ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದು ಮನುಷ್ಯರ ನಡುವಿನ ಸಂಬಂಧ ತೆಳುವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ರಂಗಭೂಮಿ ಮನುಷ್ಯರ ನಡುವಿನ ಸಾಮರಸ್ಯ, ಬಾಂಧವ್ಯವನ್ನು ಬೆಳೆಸುವಂತಹ ಮಹತ್ತರವಾದ ಕಾರ್ಯವನ್ನು ನಡೆಸುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ.ಆರ್.ಭೀಮಸೇನ, ‘ರಂಗಭೀಷ್ಮ ಬಿ.ವಿ.ಕಾರಂತ ಅವರು ದೇಶದ ರಂಗಭೂಮಿಗೆ ಹೊಸ ಸ್ವರೂಪ ನೀಡಿದ್ದಾರೆ’ ಎಂದು ಹೇಳಿದರು.
ಇತಿಹಾಸವನ್ನು ಅರಿಯದೆ ಇತಿಹಾಸ ವನ್ನು ನಿರ್ಮಿಸಲು ಸಾಧ್ಯವಿಲ್ಲ. ದೇಶದ 75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗ ವಾಗಿ ರೂಪಿಸಲಾಗಿರುವ ರಂಗ ಚಟುವಟಿಕೆಗಳು ದೇಶಾಭಿಮಾನವನ್ನು ಬೆಳೆಸುವಂತಹ ಕಾರ್ಯವನ್ನು ಮಾಡಲಿ ಎಂದರು.
ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗ ಸಂಗೀತ ಕಾರ್ಯಕ್ರಮವನ್ನು ನಡೆಸಿದ ಧಾರವಾಡದ ಬಸವಲಿಂಗಯ್ಯ ಹಿರೇಮಠ, ನಾಟಕಕಾರ ಬೇಲೂರು ರಘುನಂದನ್, ರಂಗ ಸಮಾಜದ ಸದಸ್ಯ ಆರ್.ಎಸ್.ಹಾಲಸ್ವಾಮಿ, ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಇದ್ದರು. ಮಂಜುನಾಥ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.
ಶಿವಮೊಗ್ಗ ರಂಗಾಯಣ ರೆಪರ್ಟರಿ ಕಲಾವಿದರಿಂದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಗೌರಿಬಿದನೂರಿನ ವಿಧುರಾಶ್ವಥದಲ್ಲಿ ನಡೆದ ಧ್ವಜ ಸತ್ಯಾಗ್ರಹ ಹಾಗೂ ಹತ್ಯಾಕಾಂಡ ಘಟನೆ ಆಧಾರಿತ, ರಂಗ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶಿಸಿದ ‘ಹತ್ಯಾಕಾಂಡ’ ನಾಟಕ ಪ್ರದರ್ಶನ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.