ಸೊರಬ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಮುಸ್ಲಿಮರು ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಶುಕ್ರವಾರ ಈದ್ ಮಿಲಾದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಹೊಸಪೇಟೆ ಬಡಾವಣೆ, ರಾಜೀವ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಗಮನ ಸೆಳೆದರು. ಹಬ್ಬದ ಪ್ರಯುಕ್ತ ಮಸೀದಿ ಹಾಗೂ ಮದರಸಾವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು.
ಚಿಣ್ಣರಾದಿಯಾಗಿ ಎಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತಮ್ಮ ಬಂಧುಗಳು ಹಾಗೂ ಸ್ನೇಹಿತರೊಂದಿಗೆ ಮಸೀದಿ ಬಳಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಹೊಸಪೇಟೆ ಬಡಾವಣೆಯ ಶಾಫಿ ಬದ್ರಿಯಾ ಸುನ್ನಿ ಜಾಮೀಯಾ ಮಸೀದಿಯಿಂದ ಆರಂಭಗೊಂಡ ಮೆರವಣಿಗೆ ಸ್ವಾಮಿ ವಿವೇಕಾನಂದ ವೃತ್ತ, ಸಿದ್ದಾಪುರ ರಸ್ತೆ, ಸಾಗರ ರಸ್ತೆ, ರಾಜೀವ ನಗರದ ಮದರಸಾವರೆಗೆ ತಲುಪಿ, ಪುನಃ ಮಸೀದಿಗೆ ತಲುಪಿತು.
ಶಾಫಿ ಬದ್ರಿಯಾ ಸುನ್ನಿ ಜಾಮೀಯಾ ಮಸೀದಿಯ ಧರ್ಮಗುರು ಮುಹಮ್ಮದ್ ರಫೀಕ್ ಮದನಿ ಧರ್ಮ ಸಂದೇಶ ನೀಡಿದರು.
ಮಸೀದಿಯ ಅಧ್ಯಕ್ಷ ಉಸ್ಮಾನ್ ಬ್ಯಾರಿ, ಕಾರ್ಯದರ್ಶಿ ಎ. ಅಬ್ದುಲ್ ರೆಹಮಾನ್, ಇಬ್ರಾಹಿಂ ಸಾಬ್, ಆಹ್ಮದ್ ಬಷೀರ್, ಇಸ್ಮಾಯಿಲ್ ಉಜರೆ, ಎ. ಅಬ್ಬುಸಾಬ್ ಜಾವೀದ್ ಜಬೀವುಲ್ಲಾ, ಅಬ್ದುಲ್ ಫಾರುಕ್, ಮುಹಮ್ಮದ್ ಅಲಿ, ಎಸ್.ಬಿ. ಹಸನ್, ರಫೀಕ್ ಮೇಸ್ತ್ರಿ, ಎಸ್ಎಸ್ಫ್ ಗೌರವಾಧ್ಯಕ್ಷ ನೂರುಲ್ಲಾ ಅಮೀನ್, ಅಧ್ಯಕ್ಷ ದಾವುದ್ ಶರೀಫ್, ಕಾರ್ಯದರ್ಶಿ ಎ. ಆಶೀಕ್, ನೌಶಾದ್, ಸಲೀಂ, ನಿಹಾಲ್, ಅಕ್ರಂ ಸೇರಿದಂತೆ ಸಮುದಾಯದ ನೂರಾರು ಜನ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.