ADVERTISEMENT

ಎಲೆಚುಕ್ಕಿ ರೋಗ; ಪರಿಹಾರಕ್ಕೆ ಆಗ್ರಹ

ಕರೂರು ಹೋಬಳಿ ರೈತರ ಪ್ರತಿಭಟನೆ; ಜಿಲ್ಲಾಡಳಿತಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 6:10 IST
Last Updated 21 ಸೆಪ್ಟೆಂಬರ್ 2022, 6:10 IST
ಶಿವಮೊಗ್ಗದಲ್ಲಿ ಕರೂರು ಹೋಬಳಿಯ ರೈತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ಕರೂರು ಹೋಬಳಿಯ ರೈತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಸಾಗರ ತಾಲ್ಲೂಕಿನ ಕರೂರು ಹೋಬಳಿಯ ಬಹುತೇಕ ಕಡೆ ಅಡಿಕೆ ತೋಟಕ್ಕೆ ಎಲೆ ಚುಕ್ಕೆ ರೋಗ ಬಂದಿದೆ. ಬೆಳೆ ನಷ್ಟವಾದ ಕಾರಣ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸ್ಥಳೀಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಾಗರ ತಾಲ್ಲೂಕು ಕರೂರು ಹೋಬಳಿ ಮರಾಠಿ ಕ್ಯಾಂಪ್, ಇಕ್ಕಿಬೀಳು, ಕಸಗೋಡು, ಬ್ಯಾಡಗೋಡು ಗ್ರಾಮದ 100 ಕುಟುಂಬಗಳ 250 ಎಕರೆ ಹಾಗೂ ಹೊಸನಗರ ತಾಲ್ಲೂಕಿನ ನಾಗೋಡಿ ಗ್ರಾಮದ ಸುಮಾರು 30 ಎಕರೆ
ಅಡಿಕೆ ತೋಟಕ್ಕೆ ಎಲೆಚುಕ್ಕಿ ರೋಗ ತೀವ್ರವಾಗಿ ಹರಡಿದೆ. ಅಡಿಕೆ ಉದುರುತ್ತದೆ. ಹ್ಯಾಡಗಳು ಕೂಡ ಉದುರುತ್ತಿವೆ. ಅಡಿಕೆ ಮರಗಳು ಸಾಯುತ್ತಿದ್ದು, ಜಿಲ್ಲಾಡಳಿತ ಕೂಡಲೇ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಎಲೆ ಚುಕ್ಕಿ ರೋಗಕ್ಕೆ ಕಾರಣವಾಗಿರುವ ಬಗ್ಗೆ ಕೃಷಿ ವಿಜ್ಞಾನಿಗಳನ್ನು ಸ್ಥಳಕ್ಕೆ ಕಳುಹಿಸಿ ರೋಗ ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ವಿನಂತಿಸಿದ್ದಾರೆ. ಅಡಿಕೆ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ನೂರಾರು ಕುಟುಂಬಗಳು ಬೀದಿಗೆ ಬಂದಿದ್ದು, ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಕುಟುಂಬಗಳು ರಾಷ್ಟ್ರೀಕೃತ ಬ್ಯಾಂಕ್, ಸೊಸೈಟಿ, ಸಂಘಗಳಲ್ಲಿ ಸಾಲ ಮಾಡಿ ದಿಕ್ಕು ತೋಚದಂತಾಗಿದ್ದಾರೆ ಎಂದರು.

ADVERTISEMENT

ಆದ್ದರಿಂದ ಕೂಡಲೇ ತೋಟಗಾರಿಕೆ ಇಲಾಖೆಯ ತಜ್ಞರಿಂದ ಬೆಳೆ ನಷ್ಟ ಮತ್ತು ಹಾನಿಯ ಬಗ್ಗೆ ವೈಜ್ಞಾನಿಕ ಲೆಕ್ಕ ಹಾಕಿಸುವುದು, ರೈತರಿಗೆ ತಕ್ಷಣದಲ್ಲಿ ಪರಿಹಾರ ಒದಗಿಸುವುದು, ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಬ್ಯಾಂಕ್ ಮತ್ತು ಸೊಸೈಟಿಗಳ ಸಾಲ ಮನ್ನಾ ಮಾಡುವುದು ಹಾಗೂ ಕೂಡಲೇ ರಾಜ್ಯ ಸರ್ಕಾರದ ಗಮನಕ್ಕೆ ತಂದು ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕೆಂದು ಸಂತ್ರಸ್ತರು ಆಗ್ರಹಿಸಿದರು.

ಆರ್. ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ಶಿವಾನಂದ್, ರಾಜು, ಸತೀಶ್, ನಾಗರಾಜ್, ರಾಮು ಮೊದಲಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.