
ಭ್ರೂಣ
ಸಾಗರ: ಗರ್ಭವತಿಯಾಗಿದ್ದ ಬಾಲಕಿಯ ಭ್ರೂಣ ಹತ್ಯೆ ಮಾಡಿದ, ಪೋಕ್ಸೊ ಪ್ರಕರಣದ ಬಗ್ಗೆ ಅರಿವು ಇದ್ದರೂ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡದ ಆರೋಪದ ಮೇಲೆ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ.ಪ್ರತಿಮಾ ಸೇರಿ 9 ಜನರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡಾಗ ಪೋಷಕರು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋದಾಗ ಆಕೆ ಗರ್ಭವತಿಯಾಗಿರುವುದು ಗೊತ್ತಾಗಿದೆ. ಆಕೆಯ ಪೋಷಕರು ಈ ಬಗ್ಗೆ ವಿಚಾರಿಸಿದಾಗ ಕೃತ್ಯವೆಸಗಿದ ವ್ಯಕ್ತಿಯ ಪತ್ತೆಯಾಗಿದೆ.
ನಂತರ ಬಾಲಕಿಯ ಪೋಷಕರು, ಕೃತ್ಯವೆಸಗಿದ ವ್ಯಕ್ತಿಯ ಪೋಷಕರು ಸೇರಿ ಮಧ್ಯವರ್ತಿಗಳ ನೆರವಿನಿಂದ ಖಾಸಗಿ ಆಸ್ಪತ್ರೆಯೊಂದರಲ್ಲಿ ಭ್ರೂಣ ಹತ್ಯೆ ಮಾಡಿಸಿದ್ದಾರೆ. ಮಧ್ಯವರ್ತಿಗಳಾದ ಕುಮಾರ್, ಪರಮೇಶ್ವರ ದೂಗೂರು, ಬಾಲಕಿ ಪೋಷಕರು, ಕೃತ್ಯವೆಸಗಿದ ವ್ಯಕ್ತಿಯ ಪೋಷಕರ ವಿರುದ್ಧ ಪ್ರಕರಣ ದಾಖಲಾಗಿದೆ.
‘ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ 21 ವರ್ಷದ ವ್ಯಕ್ತಿಯನ್ನು ಈಗಾಗಲೇ ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆ ನಡೆಯತ್ತಿದ್ದು, ಯಾವ ಅಪರಾಧಕ್ಕೆ ಸಂಬಂಧಿಸಿದಂತೆ ಯಾವ ವ್ಯಕ್ತಿಗಳ ಪಾತ್ರವಿದೆ, ಅಪರಾಧಗಳ ಸ್ವರೂಪವೇನು ಎಂಬುದು ಸ್ಪಷ್ಟವಾದ ನಂತರ ಬಂಧನ ಪ್ರಕ್ರಿಯೆ ನಡೆಸಲಾಗುವುದು’ ಎಂದು ಎಎಸ್ಪಿ ಬೆನಕ ಪ್ರಸಾದ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.