ADVERTISEMENT

ತುಂಗಾನದಿಗೆ ಹಾರಿ ಅಧಿಕಾರಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 4:17 IST
Last Updated 8 ಡಿಸೆಂಬರ್ 2019, 4:17 IST

ನರಸಿಂಹರಾಜಪುರ: ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡುಬ ಸೇತುವೆ ಕೆಳಗಿನ ತುಂಗಾನದಿಗೆ ಹಾರಿ ಹೊಸನಗರ ತಾಲ್ಲೂಕಿನ ಆಹಾರ ನಿರೀಕ್ಷಕ ಐ.ಡಿ. ದತ್ತಾತ್ರೇಯ (60) ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭದ್ರಾವತಿ ತಾಲ್ಲೂಕಿನ ಕೆಂಚನಹಳ್ಳಿ ಕಾಲೊನಿಯಲ್ಲಿ ವಾಸ ಮಾಡುತ್ತಿದ್ದ ದತ್ತಾತ್ರೇಯ ಅವರು ಶನಿವಾರ ಬೆಳಿಗ್ಗೆ 6 ಗಂಟೆಗೆ ಮನೆ ಬಿಟ್ಟಿದ್ದರು. 10 ಗಂಟೆ ವೇಳೆಗೆ ಪತ್ನಿ ಅನಸೂಯಗೆ ದೂರವಾಣಿ ಕರೆ ಮಾಡಿ, ತಾನು ಮುಡಬ ಸೇತುವೆ ಸಮೀಪದಲ್ಲಿದ್ದು, ಅಲ್ಲಿಗೆ ಬರುವಂತೆ ತಿಳಿಸಿದ್ದಾರೆ. ಗಾಬರಿಯಿಂದ ಪತ್ನಿ ಹಾಗೂ ಮಕ್ಕಳು ಅಲ್ಲಿಗೆ ಬಂದಾಗ ಸೇತುವೆ ಕೆಳಗೆ ತುಂಗಾನದಿಯ ದಡದಲ್ಲಿ ದತ್ತಾತ್ರೇಯ ಅವರ ಮೃತದೇಹ ಪತ್ತೆಯಾಗಿದೆ. ಮುಡಬ ಸೇತುವೆಯು ನರಸಿಂಹರಾಜಪುರ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಗಡಿಭಾಗದಲ್ಲಿದೆ.

‘ಹೊಸನಗರ ತಹಶೀಲ್ದಾರ್ ಮತ್ತು ಇತರರು ತಮ್ಮ ಪತಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಹಕ್ಕುಪತ್ರ ತಿದ್ದುಪಡಿ ವಿಚಾರದಲ್ಲಿ ಪತಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ’ ಎಂದು ಅನಸೂಯ ದೂರಿನಲ್ಲಿ ತಿಳಿಸಿದ್ದಾರೆ. ನರಸಿಂಹರಾಜಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.