ADVERTISEMENT

ಶಿವಮೊಗ್ಗ: ಕಪ್ಪೆಗಳ ಜೀವನ ಕ್ರಮ ಬಿಚ್ಚಿಟ್ಟ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 5:10 IST
Last Updated 2 ಸೆಪ್ಟೆಂಬರ್ 2025, 5:10 IST
ಹೊಸನಗರ ತಾಲ್ಲೂಕಿನ ಗರ್ತಿಕೆರೆಯಲ್ಲಿ ಇತ್ತೀಚಿಗೆ ಉಭಯ ಜೀವಿಗಳ ಬಗೆಗಿನ ವಸತಿ ಕಾರ್ಯಾಗಾರದಲ್ಲಿ ಪಾಲ್ಗೊಂಡ ಆಸಕ್ತರು
ಹೊಸನಗರ ತಾಲ್ಲೂಕಿನ ಗರ್ತಿಕೆರೆಯಲ್ಲಿ ಇತ್ತೀಚಿಗೆ ಉಭಯ ಜೀವಿಗಳ ಬಗೆಗಿನ ವಸತಿ ಕಾರ್ಯಾಗಾರದಲ್ಲಿ ಪಾಲ್ಗೊಂಡ ಆಸಕ್ತರು   

ಶಿವಮೊಗ್ಗ: ಹೊಸನಗರ ತಾಲ್ಲೂಕಿನ ಗರ್ತಿಕೆರೆಯಲ್ಲಿ ಇತ್ತೀಚೆಗೆ ಉಭಯ ಜೀವಿಗಳ ಬಗೆಗಿನ ವಸತಿ ಕಾರ್ಯಾಗಾರ, ವನ್ಯಜೀವಿ ಸಂಶೋಧಕ ಡಾ.ಅಮಿತ್ ಹೆಗಡೆ ನೇತೃತ್ವದಲ್ಲಿ ನಡೆಯಿತು.

ಪಶ್ಚಿಮ ಘಟ್ಟಗಳು ಜೀವ ವೈವಿಧ್ಯತೆಯ ಖಜಾನೆಯಾಗಿದೆ. ಇದರಲ್ಲಿ ಉಭಯ ಜೀವಿಗಳು ವಿಶೇಷವಾಗಿ ಕಪ್ಪೆಗಳ ಅಧ್ಯಯನ, ದಾಖಲಾತಿ, ಅವುಗಳ ಸ್ವಭಾವ, ಸಂತಾನೋತ್ಪತ್ತಿ, ಹವಾಮಾನ ವೈಪರೀತ್ಯ ಹಾಗೂ ಸುತ್ತಮುತ್ತಲ ಸೂಕ್ಷ್ಮ ಬದಲಾವಣೆಗಳಿಂದ ಜೀವ ವೈವಿಧ್ಯತೆಯ ಮೇಲೆ ಆಗುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಯಿತು.

ಕಾರ್ಯಾಗಾರವು ಕೇವಲ ಶಿಕ್ಷಣಕ್ಕಷ್ಟೇ ಸೀಮಿತಗೊಳ್ಳದೆ ಸಂರಕ್ಷಣೆ ಹಾಗೂ ಪ್ರಕೃತಿಯೊಂದಿಗೆ ಗಾಢಬಾಂಧವ್ಯವನ್ನು ಬೆಳೆಸುವ ಬಗ್ಗೆ ಗಮನಹರಿಸಲಾಯಿತು.

ADVERTISEMENT

ವಿವಿಧ ರಾಜ್ಯ ಹಾಗೂ ವಿವಿಧ ಭಾಗಗಳಿಂದ, ವಿದ್ಯಾರ್ಥಿಗಳು, ಶಿಕ್ಷಕರಿಂದ ಹಿಡಿದು, ಕೃಷಿ ಸಂಶೋಧಕರು, ಚಾರಣಪ್ರಿಯರು, ಪರಿಸರಾಸಕ್ತರು ಭಾಗವಹಿಸಿ ಈ ಅಮೂಲ್ಯ ಅನುಭವದ ಜೊತೆಗೆ ಸಂರಕ್ಷಣೆಯ ಹೊಸ ಪ್ರೇರಣೆ ಪಡೆದುಕೊಂಡರು.

ಕಾರ್ಯಾಗಾರದಲ್ಲಿ ಮಾತನಾಡಿದ ಡಾ. ಅಮಿತ್‌ ಹೆಗಡೆ, ‘ಮಳೆಗಾಲವನ್ನು ನಾವು ಒಂದು ಋತುವಿನ ರೀತಿ ನೋಡಿರುತ್ತೇವೆ ಇದರ ಒಳಗಿನ ಸೂಕ್ಷ್ಮ ಬದಲಾವಣೆಗಳು ನಮಗೆ ಗೋಚರಿಸುವುದಿಲ್ಲ. ಮುಂಗಾರು, ಹಿಂಗಾರು ಮಳೆ, ಕೃಷಿಗೆ ಎಷ್ಟು ಪೂರಕವೋ ಹಾಗೆ ಕಪ್ಪೆಗಳ ಜೀವನ ಚಕ್ರಕ್ಕೂ ಅಷ್ಟೇ ಪೂರಕ, ಉದಾಹರಣೆಗೆ ಮಳೆಯ ಆರಂಭದಲ್ಲಿ ಕೂಗುವ ಕಪ್ಪೆಗಳು ಮಧ್ಯಂತರದಲ್ಲಿ ಇರುವುದಿಲ್ಲ. ಮಧ್ಯಂತರದಲ್ಲಿ ಕೂಗುವ ಕಪ್ಪೆಗಳು ಮಳೆಗಾಲದ ಕೊನೆಯಲ್ಲಿ ಇರುವುದಿಲ್ಲ. ಮೊದಲು ಮಳೆಯಾಗಿ ನಂತರ ಎರಡು ಮೂರು ತಿಂಗಳು ಮಳೆಯೇ ಇಲ್ಲದಿರುವುದು ಅಥವಾ ಕೇವಲ ರಭಸದ ಮಳೆ ಸುರಿಯುವುದು ಇವೆಲ್ಲವೂ ಅವುಗಳ ಜೀವನ ಚಕ್ರದ ಅಸಮತೋಲನಕ್ಕೆ ಕಾರಣವಾಗುತ್ತದೆ. ಕಪ್ಪೆಗಳ ಕೂಗು ಅವುಗಳ ಸಂತಾನೋತ್ಪತ್ತಿ ಪ್ರಕ್ರಿಯೆ. ಇವುಗಳ ಕೂಲಂಕಶ ಅಧ್ಯಯನದಿಂದ ಪರಿಸರದ ಬದಲಾವಣೆ ಹವಾಮಾನ ವೈಪರೀತ್ಯಗಳ ಬಗ್ಗೆ ಕೂಡ ತಿಳಿಯಬಹುದು’ ಎಂದರು.

‘ತೀರಾ ಅಪರೂಪದ ಪ್ರಭೇದಗಳು ಎಷ್ಟೋ ಬಾರಿ ಕಾಡಿನಲ್ಲಿಯೇ ಕಂಡು ಬರಬೇಕೆಂದೇನಿಲ್ಲ ಕೆಲವೊಮ್ಮೆ ಕೃಷಿ ಭೂಮಿ ಹಾಗೂ ಮನೆಯ ಸುತ್ತಮುತ್ತಲೂ ಕೂಡ ಕಂಡು ಬರುವುದು. ಜನರಿಗೆ ಹಾಗೂ ಕೃಷಿಕರಿಗೆ ಇದರ ಬಗ್ಗೆ ಅರಿವು ಮೂಡಿ ಸುತ್ತ ಜೀವ ವೈವಿಧ್ಯತೆ ಸಂರಕ್ಷಿಸಬೇಕಾಗಿದೆ, ಈ ಕಾರ್ಯ ಸದಾ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.