ADVERTISEMENT

‘ಗಾಂಧಿ ಹೆಸರು ದುರುಪಯೋಗ ಸಲ್ಲ’

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 4:23 IST
Last Updated 3 ಅಕ್ಟೋಬರ್ 2021, 4:23 IST
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಬಸಪ್ಪ ವೃತ್ತ ನಾಮಕರಣ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಮಾತನಾಡಿದರು
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಬಸಪ್ಪ ವೃತ್ತ ನಾಮಕರಣ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಮಾತನಾಡಿದರು   

ಶಿವಮೊಗ್ಗ: ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಗಾಂಧೀಜಿಯ ಹೆಸರು ಇಂದು ದುರುಪಯೋಗವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆ, ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನ ಸಹಯೋಗದಲ್ಲಿ ಶನಿವಾರ ನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಮತ್ತು ತುಂಗಾನಗರದ 100 ಅಡಿ ರಸ್ತೆ ಹಾಗೂ ತುಂಗಾ ನಾಲೆ ವೃತ್ತಕ್ಕೆ ‘ಗಾಂಧಿ ಬಸಪ್ಪ ವೃತ್ತ’ ಎಂದು ನಾಮಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದಾರೆ. ಆದರೆ, ಅವರ ಹೆಸರು ಇತ್ತೀಚಿನ ದಿನಗಳಲ್ಲಿ ಬೇರೆ ರೀತಿಯ ಚರ್ಚೆಯಾಗುತ್ತಿರುವುದು ಬೇಸರದ ವಿಷಯ ಎಂದರು.

ADVERTISEMENT

ಗುಲಾಮಗಿರಿಯಿಂದ ಬಿಡಿಸಿಕೊಳ್ಳುವ ಪ್ರಯತ್ನ: ‘ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ನಾವು ಇನ್ನು ಇಲ್ಲಗಳ ನಡುವೆಯೇ ಬದುಕುತ್ತಿದ್ದೇವೆ. ಈ ದೇಶದಲ್ಲಿ 5 ಕೋಟಿ ಜನರಿಗೆ ಮಾತ್ರ ನಲ್ಲಿ ನೀರಿನ ಸಂಪರ್ಕ ಇದೆ ಎಂದರೆ ಸ್ಥಿತಿ ಹೇಗಿದೆ ಎಂದು ಊಹಿಸಿಕೊಳ್ಳಬಹುದು. ಮೋದಿ ಪ್ರಧಾನಿಯಾದ ಮೇಲೆ ಈಗ 12 ಕೋಟಿ ಜನರಿಗೆ ನಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದು ಹೆಚ್ಚಲ್ಲದಿದ್ದರೂ ಕೆಲವೇ ವರ್ಷಗಳಲ್ಲಿ ಮೂಲ ಸೌಲಭ್ಯಕ್ಕೆ ಮೋದಿ ಸರ್ಕಾರ ಒತ್ತು ನೀಡಿದೆ. ಗುಲಾಮಗಿರಿಯಿಂದ ಬಿಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿವೆ’ ಎಂದರು.

ಗಾಂಧಿ ಬಸಪ್ಪ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಜೈಲು ಶಿಕ್ಷೆ ಅನುಭವಿಸಿದ್ದರು. ರಾಷ್ಟ್ರಭಕ್ತರಾಗಿದ್ದರು. ಅವರ ಹೆಸರನ್ನು ರಸ್ತೆಗೆ ಮತ್ತು ವೃತ್ತಕ್ಕೆ ಇಟ್ಟಿರುವುದು ಶ್ಲಾಘನೀಯ. ಅವರ ಆದರ್ಶಗಳನ್ನು ಅವರ ಕುಟುಂಬದವರು ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆರ್ಯವೈಶ್ಯ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಪಾಲಿಕೆ ಆಯುಕ್ತ ಚಿದಾನಂದ್‌ ವಟಾರೆ, ಎಸ್‌. ಶಿವಕುಮಾರ್, ಸುವರ್ಣಾ ಶಂಕರ್, ದತ್ತಾತ್ರಿ, ಆರತಿ ಆ.ಮ. ಪ್ರಕಾಶ್, ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನದ ಎಸ್.ಬಿ. ವಾಸುದೇವ್, ಎಸ್.ಬಿ. ಅಶೋಕ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.