ADVERTISEMENT

ಶಿವಮೊಗ್ಗ: ಕೃಷಿ ಕ್ಷೇತ್ರ ಅಣಿಗೊಳಿಸಲು ಸ್ಮಾರ್ಟ್ ತಂತ್ರಜ್ಞಾನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 3:07 IST
Last Updated 6 ಜನವರಿ 2026, 3:07 IST
ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ  ಸೋಮವಾರ ಆರಂಭವಾದ ಅಂತಾರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನೆಯ ನೋಟ
ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ  ಸೋಮವಾರ ಆರಂಭವಾದ ಅಂತಾರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನೆಯ ನೋಟ   

ಶಿವಮೊಗ್ಗ: ‘ಜಾಗತಿಕ ಹವಾಮಾನ ಬದಲಾವಣೆಗೆ ಪೂರಕವಾಗಿ ಕೃಷಿ ಕ್ಷೇತ್ರವ ಅಣಿಗೊಳಿಸಲು ಸ್ಮಾರ್ಟ್ ತಂತ್ರಜ್ಞಾನ, ಮಣ್ಣು ಮತ್ತು ನೀರಿನ ನಿರ್ವಹಣೆ, ಬೆಳೆಗಳ ಆಯ್ಕೆಗೆ ಸಕಾಲಿಕ ಸಲಹೆಗಳ ಒಳಗೊಂಡ ಸಂಯೋಜಿತ ಯೋಜನೆಗಳ ಅಗತ್ಯವಿದೆ’ ಎಂದು ಬಾಂಗ್ಲಾ ದೇಶದ ಸಿಐಆರ್‌ಡಿಎಪಿ ಮಹಾನಿರ್ದೇಶಕ ಡಾ.ಪಿ.ಚಂದ್ರಶೇಖರ ತಿಳಿಸಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ನ್ಯಾಚುರಲ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್, ಗ್ರೀನ್‌ವಿಚ್, ಯುಕೆ ಸಹಯೋಗ ಮತ್ತು ಐಎಸ್‌ಪಿಎಫ್-ಬ್ರಿಟಿಷ್ ಕೌನ್ಸಿಲ್, ನವದೆಹಲಿಯ ಐಸಿಎಸ್‌ಎಸ್‌ಆರ್ ಬೆಂಬಲದೊಂದಿಗೆ ‘ಹವಾಮಾನ ಸ್ಥಿತಿಸ್ಥಾಪಕತ್ವದ ಕೃಷಿ ಸಂಶೋಧನೆ ಮತ್ತು ಸಹಯೋಗವನ್ನು ಮುಂದುವರೆಸುವಲ್ಲಿ ಆರಂಭಿಕ ವೃತ್ತಿಜೀವನದ ಸಂಶೋಧಕರನ್ನು ಸಬಲೀಕರಣ’ ವಿಷಯ ಕುರಿತು ಇಲ್ಲಿ ಸೋಮವಾರ ಆರಂಭವಾದ ಅಂತಾರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಳೆ ವಿಫಲವಾದಾಗ, ಪ್ರವಾಹ ಬಂದಾಗ, ಕೀಟಗಳು ಉಲ್ಬಣಗೊಂಡಾಗ ಏನು ಮಾಡಬೇಕು ಎಂಬಂತಹ ಸ್ಪಷ್ಟ ಯೋಜನೆಗಳನ್ನು ಇದು ಒಳಗೊಂಡಿರಬೇಕು ಎಂದರು.

ADVERTISEMENT

ಪ್ರಯೋಗಾಲಯ ಅಥವಾ ಗ್ರಂಥಾಲಯಗಳ ಕಪಾಟಿನಲ್ಲಿರುವ ಜರ್ನಲ್‌ನಲ್ಲಿನ ಲೇಖನಗಳು, ಪುಸ್ತಕ ಅಥವಾ ವರದಿ ಆಗಿ ಉಳಿಯುವ ಹವಾಮಾನ ಸಂಶೋಧನೆಯಿಂದ ಉಪಯೋಗವಿಲ್ಲ. ಬದಲಾಗಿ ರೈತರು, ವಿಸ್ತರಣಾ ಏಜೆಂಟರು ಮತ್ತು ನೀತಿ ನಿರೂಪಕರು ಈ ಸಂಶೋಧನೆಗಳನ್ನು ಅರ್ಥಮಾಡಿಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಉತ್ತಮ ಫಲಿತಾಂಶ ಸಾಧ್ಯ ಎಂದು ತಿಳಿಸಿದರು.

ಹವಾಮಾನ ಬದಲಾವಣೆಯು ಒಂದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಇದು ಸ್ಥಳೀಯ ಮಣ್ಣು, ಸೂಕ್ಷ್ಮ ಹವಾಮಾನ, ಸಂಸ್ಕೃತಿಗಳು ಮತ್ತು ಇತಿಹಾಸಗಳಿಂದ ಸಂದರ್ಭೋಚಿತವಾಗಿ ರೂಪುಗೊಂಡಿದೆ. ಅದಕ್ಕಾಗಿಯೇ ಸಂಶೋಧಕರು ತಮ್ಮ ವೃತ್ತಿಜೀವನದ ಆರಂಭದಲ್ಲಿ, ತಲೆಮಾರುಗಳಿಂದ ಸಂಸ್ಕರಿಸಿದ ಸ್ಥಳೀಯ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳ ಗುರುತಿಸಿ ಮುಂದುವರೆಯಬೇಕು ಎಂದು ಸಲಹೆ ನೀಡಿದರು.

ಪ್ರತಿ ವರ್ಷ, ರೈತರು ತಮ್ಮ ಬೆಳೆಯ ಪಾಲನ್ನು ಅಸಮರ್ಪಕ ಸಂಗ್ರಹಣೆ, ಕಳಪೆ ನಿರ್ವಹಣೆ, ದುರ್ಬಲ ಮಾರುಕಟ್ಟೆ ಸಂಪರ್ಕ ಮತ್ತು ಹವಾಮಾನ-ಪ್ರೇರಿತ ಅಡಚಣೆಗಳಿಂದಾಗಿ ಕಳೆದುಕೊಳ್ಳುತ್ತಾರೆ. ಆದ್ದರಿಂದ ಹವಾಮಾನ ಸಂಶೋಧನೆಯು ಉತ್ಪಾದನೆ ಮೀರಿ ನೋಡಬೇಕು. ಕೊಯ್ಲಿನ ನಂತರದ ನಷ್ಟಗಳನ್ನು ಕಡಿಮೆ ಮಾಡುವ, ಸಂಗ್ರಹಣೆ ಮತ್ತು ಸಂಸ್ಕರಣೆಯನ್ನು ಸುಧಾರಿಸುವ, ಮೌಲ್ಯ ಸರಪಳಿಗಳ ಬಲಪಡಿಸುವ, ಮಾರುಕಟ್ಟೆ ಮಟ್ಟದ ತ್ಯಾಜ್ಯ ತಡೆಯುವ ತಂತ್ರಗಳ ಸಂಯೋಜಿಸಬೇಕು ಎಂದರು.

ಕೃಷಿ ಸಹಕಾರ ಸಂಘಗಳು ಮತ್ತು ಎಫ್‌ಪಿಒಗಳು ಮಾರುಕಟ್ಟೆ ಮಧ್ಯವರ್ತಿಗಳಷ್ಟೇ ಅಲ್ಲ, ಹವಾಮಾನ ಸ್ಥಿತಿಸ್ಥಾಪಕ ತಂತ್ರಜ್ಞಾನ ಉತ್ಪಾದನೆ ಮತ್ತು ಅಳವಡಿಕೆಯಲ್ಲಿ ಪ್ರಮುಖ ಪಾಲುದಾರರೂ ಆಗಿವೆ. ರೈತರನ್ನು ಸಂಘಟಿಸಿ ಅವರು ವೈಯಕ್ತಿಕ ಅಪಾಯ ಕಡಿಮೆ ಮಾಡುತ್ತಾರೆ. ಹವಾಮಾನ-ಸ್ಮಾರ್ಟ್ ತಂತ್ರಜ್ಞಾನಗಳು, ಇನ್‌ಪುಟ್‌ ಮತ್ತು ಮಾಹಿತಿ ರೈತರ ಕೈಗೆಟಕುವಂತೆ ಮಾಡುತ್ತಾರೆ.

ಇಂಡೊನೇಷ್ಯಾದ 2000 ರೈತರು ಅರಣ್ಯ ಸಂರಕ್ಷಣೆಯೊಂದಿಗೆ ಕಾಫಿ ಬೆಳೆದು ಆದಾಯ ಗಳಿಸಿದ್ದಾರೆ. ವಿಯೆಟ್ನಾಂನಲ್ಲಿ ಸಹಕಾರಿ ಸಂಸ್ಥೆಗಳಿಂದ ಪರಿಸರ ಸಂರಕ್ಷಣೆ ಕಡ್ಡಾಯಗೊಳಿಸಲಾಗಿದೆ. ಫಿಲಿಪೈನ್ಸ್- ಸಹಕಾರಿಯು ವಿಪತ್ತು ನಿರ್ವಹಣೆಗೆ ಸಿದ್ದತೆ ಮಾಡಿಕೊಂಡಿದ್ದು, ಬಾಂಗ್ಲಾದೇಶದಲ್ಲಿ ಮಹಿಳಾ ಸಹಕಾರಿಗಳು 73,000 ಸೌರ ಘಟಕಗಳನ್ನು ಸ್ಥಾಪಿಸಿ ಆದಾಯ ಗಳಿಸುತ್ತಿದ್ದಾರೆ. ಫಿಜಿ-ಬೌಮಾ ಜಲಪಾತ ಬಳಿಯ ಕೃಷಿಕ ಕುಟುಂಬಗಳು ಪ್ರವಾಸಿ ಗೈಡ್ ಆಗಿ ಆದಾಯ ಗಳಿಸುತ್ತಿವೆ. ಈ ರೀತಿಯ ಆದಾಯ ಗಳಿಕೆಯ ಅಭ್ಯಾಸಗಳ ಭಾರತೀಯ ರೈತರಲ್ಲೂ ಉತ್ತೇಜಿಸಬೇಕಿದೆ. ಅದಕ್ಕಾಗಿ ರೈತರಿಗೆ ಕೈಗೆಟುಕುವ ಡಿಜಿಟಲ್ ಪರಿಹಾರಗಳ ನೀಡಬೇಕಿದೆ. ಸಂಶೋಧನೆ ಹಾಗೂ ವಿಸ್ತರಣಾ ಸೇವೆಗಳ ಬಲಪಡಿಸಬೇಕು.  ರೈತರ ಉತ್ಪನ್ನಗಳ ಬ್ರ‍್ಯಾಂಡ್ ಮಾಡಲು ಮತ್ತು ಪ್ರಮಾಣೀಕರಿಸಲು ಸಹಾಯ ಮಾಡಬೇಕು ಎಂದರು.  

ಇಂಗ್ಲೆಂಡ್‌ನ ಗ್ರೀನ್‌ವಿಚ್ ವಿಶ್ವವಿದ್ಯಾಲಯದ ಕರ್ನ ಹ್ಯಾನ್ಸನ್, ಮಾತನಾಡಿ, ಹವಾಮಾನ ಬದಲಾವಣೆ ಒಂದು ನಿಜವಾದ ಸವಾಲಾಗಿದ್ದು, ನವೀನ ಸಂಶೋಧನೆಗಳು ಮತ್ತು ಇಂತಹ ಕಾರ್ಯಾಗಾರಗಳು ಎಲ್ಲರೂ ಒಟ್ಟಾಗಿ ಸೇರಿ ಪರಿಹಾರೋಪಾಯಗಳನ್ನು ಕಂಡು ಹಿಡಿಯಲು ಒಂದು ಉತ್ತಮ ಅವಕಾಶವಾಗಿದೆ ಎಂದರು.

ಸಿಆರ್‌ಎಆರ್‌ಸಿ -2026 ನ ಸಂಘಟನಾ ಕಾರ್ಯದರ್ಶಿ ಎಚ್.ಎಂ.ವಿನಯ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆರ್.ಸಿ ಜಗದೀಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾರತ ಬ್ರಿಟಿಷ್ ಕೌನ್ಸಿಲ್‌ನ ಕಾರ್ಯಕ್ರಮಗಳು ಮತ್ತು ಪಾಲುದಾರಿಕೆ ಮುಖ್ಯಸ್ಥ  ರಾಜೇಂದ್ರ ತ್ರಿಪಾಠಿ, ಯುನೈಟೆಡ್ ಕಿಂಗ್‌ಡಮ್ ನ ಗ್ರೀನ್‌ವಿಚ್ ವಿಶ್ವವಿದ್ಯಾಲಯದ ಲೂಸಿ ಬುಷಿ, ಕೆಎಸ್‌ಎನ್‌ಯುಎಎಚ್ ಸಂಶೋಧನಾ ಸಹ ನಿರ್ದೇಶಕ ಡಾ. ಎಸ್.ಪ್ರದೀಪ್ , ಆಡಳಿತ ಮಂಡಳಿ ಸದಸ್ಯರಾದ ಡಾ. ಟಿ.ಕೆ. ಬಸವರಾಜ ಪ್ರಭು, ಡಾ.ಬಿ.ಕೆ.ಕುಮಾರಸ್ವಾಮಿ, ದೇವಿಕುಮಾರ್ ಪಾಲ್ಗೊಂಡಿದ್ದರು. ಡಾ.ಬಿ.ಎಂ.ದುಶ್ಯಂತ್ ಕುಮಾರ್ ಸ್ವಾಗತಿಸಿದರು.

ಹಸಿರು ಕ್ರಾಂತಿಯ ಪಿತಾಮಹ ಅಮೆರಿಕದ ನಾರ್ಮನ್ ಬೊರ್ಲಾಗ್ ಎಸಿ ರೂಮಿನಲ್ಲಿ ಕೂತು ಕೃಷಿ ನಿಯಮಾವಳಿಗಳ ರೂಪಿಸಬೇಡಿ ಹೊಲಕ್ಕೆ ತೆರಳಿ ಕೈ ಮಣ್ಣು ಮಾಡಿಕೊಂಡು ಸಂಶೋಧನೆಗಳ ಕೈಗೊಳ್ಳಿ ಎಂದು ಹೇಳುತ್ತಿದ್ದರು. ಇದು ಸಂಶೋಧಕರಿಗೆ ಸದಾ ಸ್ಮರಣೀಯ
ಡಾ.ಸುರೇಶ್ ಚಂದ್ರ ಬಾಬು ವಾಷಿಂಗ್ಟನ್ ಡಿಸಿಯ ಐಎಸ್‌ಎಫ್‌ಆರ್‌ಐ ಸಂಶೋಧನಾ ಸಹೋದ್ಯೋಗಿ

‘ಹವಾಮಾನ ವೈಪರೀತ್ಯ ತಡೆ ತಳಿ ಅಭಿವೃದ್ಧಿಪಡಿಸಿ’

ಹವಾಮಾನ ಬದಲಾವಣೆಯಿಂದ ಒಂದೆಡೆ ಕೃಷಿಕರು ಬಲಿಪಶುಗಳಾಗುತ್ತಿದ್ದರೆ. ಇನ್ನೊಂದೆಡೆ ಕೃಷಿಯಿಂದಲೂ ಹವಾಮಾನ ಬದಲಾವಣೆಯಾಗುತ್ತಿದೆ. ಆದ ಕಾರಣ ಕೃಷಿಸ್ನೇಹಿ ಸಂಶೋಧನೆಗಳ ಉತ್ತೇಜಿಸಬೇಕು ಎಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ (ಜಿಕೆವಿಕೆ) ಕುಲಪತಿ ಡಾ. ಎಸ್.ವಿ.ಸುರೇಶ್ ಹೇಳಿದರು. ಮಳೆ ಉಷ್ಣತೆ ವೈಪರೀತ್ಯ ತಡೆಯುವ ತಳಿಗಳ ಅಭಿವೃದ್ದಿಯಾಗಬೇಕು. ರೈತರಿಗಾಗುವ ನಷ್ಟ ಕಡಿಮೆಗೊಳಿಸುವುದು ಹವಾಮಾನ ವೈಪರೀತ್ಯ ಎದುರಿಸಲು ಹವಾಮಾನ ಸ್ಮಾರ್ಟ್ ತಂತ್ರಜ್ಞಾನದ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.