ಸಾಗರ: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದ್ದು, ಸಂತ್ರಸ್ತರ ಕಣ್ಣೊರೆಸುವ ತಂತ್ರವನ್ನು ನಡೆಸುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಆರೋಪಿಸಿದರು.
ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ಕಾಂಗ್ರೆಸ್ ಪಕ್ಷ ನವೆಂಬರ್ 28ರಂದು ಆಯನೂರಿನಿಂದ ಶಿವಮೊಗ್ಗದವರೆಗೆ ಪಾದಯಾತ್ರೆ ಏರ್ಪಡಿಸಿದೆ. ಪಾದಯಾತ್ರೆ ಯಶಸ್ವಿಯಾಗದಂತೆ ತಡೆಯಲು ಬಿಜೆಪಿ ಮುಖಂಡರು ವಿವಿಧ ರೀತಿಯ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಬಿಜೆಪಿ ಮುಖಂಡರು ಹೇಳಿದ್ದಾರೆ. ಆದರೆ ಕೇವಲ 9,600 ಎಕರೆ ಪ್ರದೇಶವನ್ನು ಡಿನೋಟಿಫೈ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. 1960ರಲ್ಲಿ 12,000 ಇದ್ದ ಸಂತ್ರಸ್ತರ ಸಂಖ್ಯೆ ಈಗ 50,000 ಸಾವಿರಕ್ಕೆ ಏರಿದೆ. ಈ ವಾಸ್ತವ ಅಂಶವನ್ನು ಪ್ರಸ್ತಾವನೆ ಕಳಿಸುವಾಗ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.
ಮುಳುಗಡೆ ಸಂತ್ರಸ್ತ ರೈತರು ಕಂದಾಯ ಭೂಮಿ ಮಾತ್ರವಲ್ಲದೆ ಅರಣ್ಯ ಭೂಮಿ, ಗೋಮಾಳ, ಸೊಪ್ಪಿನಬೆಟ್ಟ ಪ್ರದೇಶದಲ್ಲೂ ಸಾಗುವಳಿ ಕೈಗೊಂಡಿದ್ದಾರೆ. ರೈತರು ಯಾವ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೊ ಅದೇ ಭೂಮಿಯನ್ನು ಅವರಿಗೆ ಮಂಜೂರು ಮಾಡುವುದು ಸೂಕ್ತ ಎಂದರು.
ಪ್ರಮುಖರಾದ ಗಣಪತಿ ಹೆನಗೆರೆ, ರಫೀಕ್ ಬಾಬಾಜಾನ್, ಅರುಣ್ ಪೂಜಾರಿ, ರಾಮಚಂದ್ರ ಎಂ.ಡಿ. ಜಯಂತ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.