ರಿಪ್ಪನ್ಪೇಟೆ: ದೇಶದಲ್ಲಿ ವಿವಿಧ ಧರ್ಮದ 400ಕ್ಕೂ ಅಧಿಕ ಅಲ್ಪಸಂಖ್ಯಾತ ಪಂಗಡಗಳಿದ್ದರೂ, ಸರ್ಕಾರ ಇದು ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ಮುಸ್ಲಿಂ, ಕ್ರೈಸ್ತ ಸಮುದಾಯದ ಓಲೈಕೆಗೆ ಮುಂದಾಗಿದೆ ಎಂದು ಆಚಾರ್ಯ ಗುಣಧರನಂದಿ ಮುನಿಮಹಾರಾಜರು ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ಹೊಂಬುಜ ಅತಿಶಯ ಕ್ಷೇತ್ರದಲ್ಲಿ ಚತುರ್ವಿಂಶತಿ ತೀರ್ಥಂಕರರ ಜಿನಬಿಂಬಗಳ ಪಂಚಕಲ್ಯಾಣ ಪೂರ್ವಕ ಮಹೋತ್ಸವದ ಸಂಪನ್ನ ಕಾರ್ಯಕ್ರಮದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
₹ 400 ಕೋಟಿ ಅನುದಾನ ಬಿಡುಗಡೆ ಮಾಡಿದರೂ, ಆರ್ಥಿಕವಾಗಿ ಹಿಂದುಳಿದ ಇತರೆ ಯಾವುದೇ ಪಂಗಡಕ್ಕೆ ಈ ಅನುದಾನದ ಪ್ರಯೋಜನ ಸಿಗುತ್ತಿಲ್ಲ ಎಂದರು.
ಜೈನರ ಕಾಶಿ ಎಂದೇ ವಿಶ್ವದೆಲ್ಲೆಡೆ ಪ್ರಖ್ಯಾತಿ ಪ್ರಸಿದ್ಧಿ ಪಡೆದಿರುವ ಹೊಂಬುಜ ಪದ್ಮಾವತಿ ದೇವಿಯ ಬೀಜಾಕ್ಷರಿ ಮಂತ್ರದಲ್ಲಿ ಮೃತ್ಯು ಜಯಿಸುವ ಅನಂತಶಕ್ತಿ ಅಡಗಿದೆ. ಶ್ರೀಕ್ಷೇತ್ರದ ದೇವಿ ಸನ್ನಿಧಿಯಲ್ಲಿ ನಡೆದಿರುವ ಪಂಚಕಲ್ಯಾಣ ಮಹೋತ್ಸವ ಮುಂದಿನ ಸಹಸ್ರಾರು ವರ್ಷಗಳ ಕಾಲ ಇತಿಹಾಸದಲ್ಲಿ ಉಳಿಯಲಿದೆ. ಕಾರ್ಯಕ್ರಮಕ್ಕೆ ಸಾಕ್ಷೀಕರಿಸಿದಂತೆ ಕಡು ಬೇಸಿಗೆಯಲ್ಲಿಯೂ ವರುಣನ ಆಗಮನ ದೇವರಾಯ ಇಂದ್ರ ಸಂತೃಪ್ತಿಯಾದ ಸಂಕೇತವಾಗಿದೆ. ಜೈನ ಬೀಜಾಕ್ಷರ ಮಂತ್ರ ನಿತ್ಯ ಪಠಣದಿಂದ ಭಕ್ತರ ಸಂಕಷ್ಟಗಳು ಪರಿಹಾರವಾಗಲಿವೆ ಎಂದರು.
ಜೈನಸಂಸ್ಕೃತಿಯನ್ನು ಬಿಂಬಿಸುವ 451 ಅಡಿ ಎತ್ತರದ ಸುಮೇರು ಪರ್ವತ ರಾಜ್ಯದಲ್ಲಿ ನಿರ್ಮಾಣವಾಗುತ್ತಿದ್ದು ಜುಲೈನಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಮಠದ ಪೀಠಾಧಿಕಾರಿ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಪುಣ್ಯಸಾಗರ ಮಹಾರಾಜರು, ಅರ್ಯಿಕಾ ನೂತನಮತಿ ಮಾತಾಜಿ, ಹೈಕೋರ್ಟ್ ನ್ಯಾಯಮೂರ್ತಿ ಪದ್ಮರಾಜ ಎನ್. ದೇಸಾಯಿ, ಡಾ.ಜೀವಂಧರ ಜೈನ, ಇಂಪಾಲ ವಿಜಯಪಾಟ್ನಿ, ಧನ್ಯಕುಮಾರ ಗುಂಡೆ, ವಿಜಯ ಕುಚನೂರೆ, ಆಶೋಕ ಪಾಪಡಿವಾಲ್, ರಜನೀಶ್ಜೈನ್, ಶಿವಮೊಗ್ಗ ದಿಗಂಬರ ಜೈನ ಸಂಘದ ಅಧ್ಯಕ್ಷ ಪ್ರಭಾಕರಗೋಗಿ, ಭದ್ರಾವತಿ ದಿಗಂಬರ ಜೈನ ಸಂಘದ ಅಧ್ಯಕ್ಷ ಪ್ರಕಾಶಚಂದ್ ಜೈನ್, ಸಿ.ಡಿ. ಅಶೋಕ ಕುಮಾರ್, ಯಶೋಧರ ಇಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.