ಶಿವಮೊಗ್ಗ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಹಿಂದಿನಿಂದಲೂ ಆರ್ಎಸ್ಎಸ್ ಹಾಗೂ ಬಿಜೆಪಿ ಜತೆ ಗುರುತಿಸಿಕೊಂಡು ಸಂಘಟನೆಗಳಿಗೆ ಶಕ್ತಿ ತುಂಬಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಜಿ.ಎಸ್.ಕೆ.ಎಂ. ರಸ್ತೆಯ ಶ್ರೀಲಕ್ಷ್ಮಿ ವೆಂಕಟರಮಣ ದೇವಮಂದಿರದಲ್ಲಿ ಈಚೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಿಎಸ್ಬಿ ಸಮಾಜಕ್ಕೆ ಆರ್ಥಿಕವಾಗಿ ಹಿಂದುಳಿದವರ ಮೀಸಲಾತಿ ದೊರಕಿಸಲು ಶ್ರಮಿಸಿದವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ದೇಶದಲ್ಲಿ ಪಾರ್ಸಿ ಸಮಾಜ ತೀರಾ ಚಿಕ್ಕದು. ಆದರೆ, ಆ ಸಮಾಜದ ಜನರು ದೇಶದ ಆರ್ಥಿಕತೆಗೆ ದೊಡ್ಡ ಶಕ್ತಿ ತುಂಬಿದ್ದಾರೆ. ಭಾರತ ದರ್ಶನದ ಮೂಲಕ ಸಂಸ್ಕೃತಿಯ ದರ್ಶನ ತೋರಿದ ವಿದ್ಯಾನಂದ ಶೆಣೈ ಅವರು ಹಿಂದು ಸಮಾಜಕ್ಕೆ, ಸಂಘಟನೆಗೆ ಅಪಾರ ಕೊಡುಗೆನೀಡಿದ್ದಾರೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ, ‘ಗೌಡ ಸಾರಸ್ವತ ಸಮಾಜ ವಿಶ್ವಾಸ ಹಾಗೂ ನಂಬಿಕೆಗೆಹೆಸರಾಗಿದೆ. ಬಿಜೆಪಿ ಸಂಘಟನೆಗೆ ಶಕ್ತಿ ತುಂಬಿದೆ. ಬಿಎಸ್ವೈ ತಮ್ಮ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಜಿಎಸ್ಬಿ ಸಮಾಜದವರಿಗೆ ಶೇ 10 ಮೀಸಲಾತಿ ನೀಡಿದರು. ಮುಂದಿನ ದಿನಗಳಲ್ಲೂ ಈ ಸಮಾಜದ ಒಳಿತಿಗೆಶ್ರಮಿಸಲಾಗುವುದು’ ಎಂದರು.
ಸಂಸದ ಬಿ.ವೈ.ರಾಘವೇಂದ್ರ, ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಮೇಯರ್ ಸುನಿತಾ ಅಣ್ಣಪ್ಪ, ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ ಜವಳಿ, ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರತ್ನಾಕರ ಶೆಣೈ, ತೀರ್ಥಹಳ್ಳಿ ಬಿಜೆಪಿ ಅಧ್ಯಕ್ಷ ಬಾಳೆಬೈಲು ರಾಘವೇಂದ್ರ, ಪ್ರಮುಖರಾದ ಹೃಷಿಕೇಷ್ ಪೈ, ರಾಜೇಶ್ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ಗೌಡಸಾರಸ್ವತ ಸಮಾಜದ ಮುಖಂಡರಾದ ಬಿ.ಶ್ರೀನಿವಾಸ ಕಾಮತ್, ದೇವದಾಸ್ ನಾಯಕ್, ಡಾ.ನರೇಂದ್ರ ಭಟ್, ಎಲ್ಲ ತಾಲ್ಲೂಕುಗಳ ಗೌಡಸಾರಸ್ವತ ಸಮಾಜ ಒಕ್ಕೂಟದ ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.