ADVERTISEMENT

ಶಿವಮೊಗ್ಗ | ಭರಪೂರ ಮಳೆ: 306 ಕೆರೆಗಳಲ್ಲಿ 3.38 ಟಿಎಂಸಿ ಅಡಿ ನೀರು ಸಂಗ್ರಹ

ರೈತರ ಮೊಗದಲ್ಲಿ ಮಂದಹಾಸ; ಬೆಳೆಗಳಿಗೆ ಜೀವ ಕಳೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 5:06 IST
Last Updated 16 ಸೆಪ್ಟೆಂಬರ್ 2024, 5:06 IST
ಶಿಕಾರಿಪುರ ತಾಲ್ಲೂಕಿನ ಹಿರೇಜಂಬೂರು ಗ್ರಾಮದ ದೊಡ್ಡ ಕೆರೆ
ಶಿಕಾರಿಪುರ ತಾಲ್ಲೂಕಿನ ಹಿರೇಜಂಬೂರು ಗ್ರಾಮದ ದೊಡ್ಡ ಕೆರೆ    

ಶಿವಮೊಗ್ಗ: ಮಲೆನಾಡಿನಲ್ಲಿ ಈ ಬಾರಿ ಭರಪೂರವಾಗಿ ಮಳೆಯಾಗಿರುವ ಪರಿಣಾಮ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿರುವ ಜಿಲ್ಲೆಯ 306 ಕೆರೆಗಳಲ್ಲಿ 3.38 ಟಿಎಂಸಿ ನೀರು ಸಂಗ್ರಹವಾಗಿದೆ.

ಕೆರೆಗಳಲ್ಲಿ ನೀರು ಸಂಗ್ರಹವಾಗಿರುವುದರಿಂದ 22,682 ಹೆಕ್ಟೇರ್‌ ಪ್ರದೇಶದ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದ್ದು, ಅನ್ನದಾತರಿಗೆ ಅನುಕೂಲವಾಗಲಿದೆ.

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಟ್ಟು 306 ಕೆರೆಗಳು ಬರುತ್ತವೆ. ಈ ಕೆರೆಗಳಲ್ಲಿ ನೀರಿನ ಸಂಗ್ರಹದ ಸಾಮರ್ಥ್ಯ 3.56 ಟಿಎಂಸಿ ಇದೆ. ಈಗಾಗಲೇ 3.38 ಟಿಎಂಸಿ ನೀರು ಸಂಗ್ರಹ ಆಗಿದೆ. ಇನ್ನೂ ಮಳೆ ಹೆಚ್ಚಾದರೆ ಸಂಗ್ರಹದ ಗುರಿ ತಲುಪಬಹುದು. ಮುಂದಿನ ದಿನಗಳಲ್ಲಿ ರೈತರು ಕೆರೆಯ ನೀರು ಬಳಸಿಕೊಂಡು ಕೃಷಿ ಚಟುವಟಿಕೆ ಮಾಡಬಹುದು. ಬೆಳೆಗಳಿಗೆ ನೀರುಣಿಸಬಹುದು. 

ADVERTISEMENT

ರೈತರು ಅಡಿಕೆ ಬೆಳೆ, ರಾಗಿ, ಭತ್ತ, ಮೆಕ್ಕೆಜೋಳ, ಜೋಳ, ರಾಗಿ, ಅಲಸಂದೆ, ತೊಗರಿ, ಹೆಸರು, ಉದ್ದು, ಶೇಂಗಾ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ಅನುಕೂಲವಾಗಲಿದೆ. ಮುಂಗಾರು ಹಂಗಾಮಿನಲ್ಲಿ ಮಳೆರಾಯ ಕೃಪೆ ತೋರಿದ ಕಾರಣ ಬೆಳೆಗಳಿಗೆ ಈ ವರ್ಷ ಬಹುತೇಕ ನೀರಿನ ಕೊರತೆ ಉಂಟಾಗುವುದಿಲ್ಲ. ಸಕಾಲಕ್ಕೆ ಬೆಳೆಗಳಿಗೆ ನೀರು ಬಿಡುವ ಮೂಲಕ ಉತ್ತಮ ಫಸಲು ತೆಗೆಯಬಹುದು. 

ಕೆರೆಗಳಲ್ಲಿ ನೀರು ಸಂಗ್ರಹದಿಂದ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಇದರ ಜೊತೆಗೆ ಬೇಸಿಗೆ ಹೊತ್ತಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಕಡಿಮೆ ಆಗುವ ಸಾಧ್ಯತೆಯಿದೆ. ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದರೆ ಬೆಳೆಗಳಿಗೆ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಇದಲ್ಲದೇ ಬೇಸಿಗೆ ಮುನ್ನವೇ ಸಮಸ್ಯೆ ಉಂಟಾಗುತ್ತಿತ್ತು. ಮಳೆರಾಯ ಈ ಬಾರಿ ಆ ಕೊರತೆ ನೀಗಿಸಿದ್ದಾನೆ.

ಬಹುತೇಕ ಕೆರೆಗಳಲ್ಲಿ ಹೂಳು ತುಂಬಿಕೊಂಡಿದೆ. ಇದನ್ನು ತೆಗೆಯುವಂತಹ ಕೆಲಸವನ್ನು ಇಲಾಖೆ ಮಾಡಿದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹ ಮಾಡಬಹುದು. ರೈತರಿಗೂ ಅನುಕೂಲವಾಗುತ್ತದೆ. ಬೇಸಿಗೆ ಹೊತ್ತಿನಲ್ಲಿ ಹೂಳು ತೆಗೆಯಬೇಕು. ಇದರಿಂದಾಗಿ ಹೆಚ್ಚಿಗೆ ನೀರು ಸಂಗ್ರಹ ಆಗುತ್ತದೆ ಎಂದು ತಾಲ್ಲೂಕಿನ ಸೋಮಿನಕೊಪ್ಪ ಗ್ರಾಮದ ರೈತ ಎನ್‌. ಬಸವರಾಜ ಹೇಳಿದರು. 

ಮಳೆ ಉತ್ತಮವಾಗಿ ಬಂದಿರುವ ಹಿನ್ನೆಲೆಯಲ್ಲಿ ಕೆರೆಗಳು ಭರ್ತಿಯಾಗಿವೆ. ನೀರಾವರಿ ಮಾಡಿಕೊಳ್ಳಲು ರೈತರಿಗೆ ಅನುಕೂಲ ಆಗುತ್ತದೆ. ಈ ವರ್ಷ ಬೆಳೆಗಳಿಗೆ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ. ಪ್ರಮುಖವಾಗಿ ಅಂತರ್ಜಲ ಕೂಡ ಏರಿಕೆ ಆಗುತ್ತದೆ ಎಂದು ಸಾಗರ ತಾಲ್ಲೂಕಿನ ತಾಳಗುಪ್ಪ ಗ್ರಾಮದ ರೈತ ಕೆ. ಪುಟ್ಟಪ್ಪ ಹೇಳಿದರು.

ಮುಂಗಾರಿನಲ್ಲಿ ಉತ್ತಮವಾಗಿ ಮಳೆ ಆಗಿರುವ ಹಿನ್ನೆಲೆಯಲ್ಲಿ ಕೆರೆಗಳಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದೆ. ಅಚ್ಚುಕಟ್ಟು ಪ್ರದೇಶದ ರೈತರು ನೀರಾವರಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಅಂತರ್ಜಲ ಮಟ್ಟ ಕೂಡ ಏರಿಕೆಯಾಗಲಿದೆ.

-ಕೆ.ಎಂ. ಕೃಷ್ಣ ಕಾರ್ಯನಿರ್ವಾಹಕ ಎಂಜಿನಿಯರ್‌ ಸಣ್ಣ ನೀರಾವರಿ ಇಲಾಖೆ

ಉತ್ತಮ ಮಳೆಯಿಂದ ಕೆರೆಗಳಿಗೆ ಜೀವಕಳೆ ಬಂದಿದೆ. ನೀರಾವರಿಗೆ ಅನುಕೂಲವಾಗಲಿದೆ. ಕೆರೆಗಳಲ್ಲಿ ತುಂಬಿರುವ ಹೂಳು ತೆಗೆಯುವ ಕೆಲಸ ಮಾಡಿದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹ ಆಗಲಿದೆ. -ಚಂದ್ರೇಗೌಡ ರೈತ ಮಾರವಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.