ಶಿವಮೊಗ್ಗ: ಆಸ್ತಿ ತೆರಿಗೆ ಅವೈಜ್ಞಾನಿಕವಾಗಿ ಹೆಚ್ಚಳದ ವಿರುದ್ಧ ಹೈಕೋರ್ಟ್ನಲ್ಲಿ ದಾವೆ ಹೂಡಲಾಗಿದೆ. ಇದರ ಅನ್ವಯ ನ್ಯಾಯಾಲಯ ಸರ್ಕಾರಕ್ಕೆ ಮತ್ತು ಮಹಾನಗರ ಪಾಲಿಕೆಗೆ ನೋಟಿಸ್ ಜಾರಿಗೊಳಿಸಿದೆ ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ಅವೈಜ್ಞಾನಿಕವಾಗಿ ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗಿದೆ. ಒಕ್ಕೂಟ ಹಲವು ಪ್ರತಿಭಟನೆಗಳ ಮೂಲಕ ಕಾನೂನಾತ್ಮಕ ಹೋರಾಟಕ್ಕೂ ಸಜ್ಜಾಗಿ ಹೈಕೋರ್ಟ್ ಗೆ ದಾವೆ ಹೂಡಿದೆ. ಈಗ ಹೈಕೋರ್ಟ್ ಮಧ್ಯಂತರ ಆದೇಶ ನೀಡಿ ಆಸ್ತಿ ತೆರಿಗೆಯನ್ನು ಪಾವತಿಸಬೇಕು. ಆದರೆ, ಈ ದಾವೆಯಲ್ಲಿ ಯಶಸ್ವಿಯಾದರೆ ಪಾವತಿಸಿರುವ ಹೆಚ್ಚುವರಿ ಹಣವನ್ನು ಶೇ 12 ರ ಬಡ್ಡಿಯೊಂದಿಗೆ ಪಾಲಿಕೆ ಹಿಂದಿರುಗಿಸಬೇಕು ಎಂದು ಸೂಚನೆ ನೀಡಿದೆ. ತೆರಿಗೆ ವಿರುದ್ಧ ಕಾನೂನು ಸಮರದಲ್ಲಿ ಇದೊಂದು ಯಶಸ್ಸು ಎಂದೇ ವೇದಿಕೆ ಭಾವಿಸುತ್ತಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಂಘಟನಾ ಕಾರ್ಯದರ್ಶಿ ಡಾ.ಎ.ಸತೀಶ್ ಕುಮಾರ್ ಶೆಟ್ಟಿ, ಎಸ್.ಬಿ.ಅಶೋಕ್ ಕುಮಾರ್, ಸೀತಾರಾಂ ಇದ್ದರು.
ಒಕ್ಕೂಟದ ಸಭೆ ಇಂದು
ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದಿಂದ ಜೂನ್ 30 ರಂದು ಸಂಜೆ 6.30ಕ್ಕೆ ಶಿವಮೊಗ್ಗದ ಶಾಂತಲಾ ಸ್ಪೆರೋಕ್ಯಾಸ್ಟ್ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ. ಎಲ್ಲ ಆಸ್ತಿ ತೆರಿಗೆದಾರರು, ಅನ್ಯಾಯಕ್ಕೆ ಒಳಗಾದವರು ಆಸ್ತಿಯ ಪಿ.ಐ.ಡಿ. ನಂಬರ್ ಮತ್ತು ಆಧಾರ್ ಕಾರ್ಡ್ ನೊಂದಿಗೆ ಸಭೆಯಲ್ಲಿ ಭಾಗವಹಿಸಬೇಕು ಎಂದು ಕೆ.ವಿ. ವಸಂತ ಕುಮಾರ್ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.