
ಹೊಳೆಹೊನ್ನೂರು: ಹೋಬಳಿಯ ಕೆಲವು ಗ್ರಾಮಗಳಲ್ಲಿ ಗುರುವಾರ ಉತ್ತಮ ಮಳೆಯಾಗಿದೆ. ಸಂಜೆ ವೇಳೆಗೆ ಆರಂಭವಾದ ಮಳೆ ಭಾರಿ ಗಾಳಿ, ಸಿಡಿಲು, ಗುಡುಗು ಸಹಿತ ಒಂದು ಗಂಟೆ ಸುರಿಯಿತು.
ಆನವೇರಿ, ಮೈದೊಳಲು, ಮಂಗೋಟೆ, ಮಲ್ಲಾಪುರ, ಸನ್ಯಾಸಿಕೋಡಮಗ್ಗಿ, ಯಡೇಹಳ್ಳಿ, ಅಶೋಕನ ನಗರ, ಅಗರದಹಳ್ಳಿ, ಚಂದನಕೆರೆ, ಕಲ್ಲಿಹಾಳ್, ಡಿ.ಬಿ.ಹಳ್ಳಿ, ಅರಹತೊಳಲು, ಅರಕೆರೆ, ಅರಬಿಳಚಿ, ವಿಠಲಾಪುರ, ಜಂಭರಘಟ್ಟೆ, ಕೆರೆಬೀರನ ಹಳ್ಳಿ, ಹನುಮಂತಾಪುರದಲ್ಲಿ ಉತ್ತಮ ಮಳೆಯಾಗಿದೆ.
ಹೊಳೆಹೊನ್ನೂರು, ಎಮ್ಮೆಹಟ್ಟಿ, ಅಗಸನಹಳ್ಳಿ, ಕೂಡ್ಲಿ, ಡಣಾಯಪುರ, ಸಿದ್ಲೀಪುರ, ದಾಸರಕಲ್ಲಹಳ್ಳಿಯಲ್ಲಿ ಸಾಧಾರಣ ವರ್ಷಧಾರೆಯಾಗಿದೆ.
ಹನುಮಂತಾಪುರ ಗ್ರಾಮದಲ್ಲಿ ಮಳೆಗೆ ಚರಂಡಿ ಕಟ್ಟಿಕೊಂಡು ರಸ್ತೆಗೆ ನೀರು ಹರಿಯಿತು. ಮನೆಗಳಿಗೆ ನೀರು ನುಗ್ಗಿದೆ.
ಮೂರ್ನಾಲ್ಕು ದಿನಗಳಿಂದ ಮೋಡ ಆವರಿಸುತ್ತಿದ್ದು, ಮಳೆ ಬಂದಿರಲಿಲ್ಲ. ಇದರಿಂದ ಕಂಗಾಲಾಗಿದ್ದ ರೈತರು ಪ್ರತಿ ದಿನ ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ಗುರುವಾರ ಮಳೆ ಬೀಳಲು ಆರಂಭಿಸಿದ ಕೂಡಲೇ ಸಂತಸಗೊಂಡ ರೈತರು ವರುಣ ದೇವನಿಗೆ ಕೈ ಮುಗಿದು ಸ್ವಾಗತಿಸಿದರು.
ಕಳೆದ ವಾರ ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದ್ದು, ಗುರುವಾರ ಮಳೆ ಸುರಿದ್ದರಿಂದ ಅಡಿಕೆ ತೋಟಗಳಿಗೆ ಅನುಕೂಲವಾಗಿದೆ. ಕೆಲವು ರೈತರು ಪಂಪ್ಸೆಟ್ ಗಳ ಮೂಲಕ ತೋಟಗಳಿಗೆ ನೀರು ಹರಿಸುತ್ತಿದ್ದು, ರಾತ್ರಿ ಪಾಳಿಯಲ್ಲಿ 3 ಪೇಸ್ ವಿದ್ಯುತ್ ನೀಡುತ್ತಿದ್ದರಿಂದ ರೈತರು ಹೈರಾಣರಾಗಿದ್ದಾರೆ. ಮಳೆಯಿಂದ ರೈತರು ಕೊಂಚ ನಿಟ್ಟುಸಿರುಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.