ADVERTISEMENT

ಕ್ಷೇತ್ರದ ಜನರಿಗೆ ಬೆಂಗಳೂರಿನಲ್ಲಿ ಔತಣಕೂಟ ಇಂದು: ಹಾಲಪ್ಪ, ಮಧು ಬಂಗಾರಪ್ಪ ಆಯೋಜನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 19:48 IST
Last Updated 11 ಮಾರ್ಚ್ 2023, 19:48 IST

ಶಿವಮೊಗ್ಗ: ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಮತದಾರರ ಸೆಳೆಯಲು ಜಿಲ್ಲೆಯ ರಾಜಕೀಯ ಮುಖಂಡರ ಕಸರತ್ತು ಮಲೆನಾಡಿನ ಗಡಿ ದಾಟಿ ಈಗ ರಾಜಧಾನಿ ಬೆಂಗಳೂರಿಗೂ ತಲುಪಿದೆ.

ಸಾಗರ ಕ್ಷೇತ್ರದ ಬಿಜೆಪಿಯ ಶಾಸಕ ಹರತಾಳು ಹಾಲಪ್ಪ ಹಾಗೂ ಸೊರಬ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆದ ಕೆಪಿಸಿಸಿ ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ ಮಧು ಬಂಗಾರಪ್ಪ ಅವರು ಮಾರ್ಚ್ 12ರಂದು ಬೆಂಗಳೂರಿನಲ್ಲಿ ಕ್ಷೇತ್ರದ ವ್ಯಾಪ್ತಿಯ ಜನರಿಗೆ ‘ಸ್ನೇಹ ಮಿಲನ’ದ ಹೆಸರಲ್ಲಿ ಪ್ರತ್ಯೇಕವಾಗಿ ಔತಣಕೂಟ ಏರ್ಪಡಿಸಿದ್ದಾರೆ.

ಹರತಾಳು ಹಾಲಪ್ಪ ಭಾನುವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಸಮೀಪದ ಜ್ಞಾನ ಜ್ಯೋತಿ ಸಭಾಂಗಣ ಹಾಗೂ ಸಿಟಿ ಸಿವಿಲ್ ಕೋರ್ಟ್‌ನ ಮೆಟ್ರೊ ಸ್ಟೇಶನ್ ಹತ್ತಿರ ಸ್ನೇಹಮಿಲನ ಇಟ್ಟುಕೊಂಡಿದ್ದು, ಸಾಗರ, ಹೊಸನಗರ, ಶಿವಮೊಗ್ಗ ಗ್ರಾಮಾಂತರ, ಸೊರಬ ತಾಲ್ಲೂಕುಗಳಿಂದ ಬೆಂಗಳೂರಿನಲ್ಲಿ ಉದ್ಯೋಗ, ವ್ಯಾಪಾರ, ವ್ಯವಹಾರ ಮಾಡುತ್ತಿರುವವರನ್ನು ಔತಣಕೂಟಕ್ಕೆ ಆಹ್ವಾನಿಸಿದ್ದಾರೆ.

ADVERTISEMENT

ಬೆಂಗಳೂರಿನ ಸದಾಶಿವನಗರದಲ್ಲಿನ ಮಧು ಬಂಗಾರಪ್ಪ ಅವರ ನಿವಾಸದಲ್ಲಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಔತಣಕೂಟ ಇಟ್ಟುಕೊಂಡಿದ್ದು, ಮಧು ಬಂಗಾರಪ್ಪ ಅಭಿಮಾನಿ ಬಳಗದ ಹೆಸರಲ್ಲಿ ಸೌಹಾರ್ದ ಸ್ನೇಹಕೂಟ ಆಯೋಜಿಸಲಾಗಿದೆ. ಕುಟುಂಬ ಸಮೇತವಾಗಿ, ಸ್ನೇಹಿತರೊಂದಿಗೆ ಔತಣದಲ್ಲಿ ಭಾಗವಹಿಸಲು ಮನವಿ ಮಾಡಲಾಗಿದೆ.

ಔತಣಕೂಟಕ್ಕೆ ಕ್ಷೇತ್ರದ ಮತದಾರರನ್ನು ಆಹ್ವಾನಿಸಲು ಇಬ್ಬರೂ ಸಾಮಾಜಿಕ ಜಾಲ ತಾಣ ಬಳಕೆ ಮಾಡಿಕೊಂಡಿದ್ದು, ವೈಯಕ್ತಿಕವಾಗಿಯೂ ಕರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹರತಾಳು ಹಾಲಪ್ಪ ಔತಣಕ್ಕೆ ಆಹ್ವಾನ ನೀಡುವ ವಿಡಿಯೊ ಬಿಡುಗಡೆ ಆಗಿದೆ. ಪ್ರತಿ ವರ್ಷದಂತೆ ಪಕ್ಷಾತೀತವಾಗಿ ಬರುವಂತೆ ಕೋರಿದ್ದಾರೆ. ಮಧು ಬಂಗಾರಪ್ಪ ಅವರ ಲಿಖಿತ ಆಹ್ವಾನ ವಾಟ್ಸ್ಆ್ಯಪ್‌ನಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.