ADVERTISEMENT

ನೆರೆ ಸಂತ್ರಸ್ತರ ಭೇಟಿ ಪರಿಹಾರಕ್ಕೆ ಕ್ರಮ

ಪ್ರಜಾವಾಣಿ ವರದಿ ಪರಿಣಾಮ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 18:16 IST
Last Updated 6 ಡಿಸೆಂಬರ್ 2019, 18:16 IST

ಶಿವಮೊಗ್ಗ: ಮನೆ ಕಳೆದುಕೊಂಡು ಪರಿಹಾರ ಸಿಗದೇ ಬಯಲಲ್ಲೇ ವಾಸಿಸುತ್ತಿರುವ ಕುಟುಂಬಗಳಿಗೆ ಶುಕ್ರವಾರ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಮಾಹಿತಿ ಪಡೆದರು.

ತುಂಗಾ ನದಿ ಪ್ರವಾಹದಿಂದ ಆಗಸ್ಟ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಮನೆಗಳು ಕುಸಿದು ಬೀದಿಗೆ ಬಿದ್ದ ಹಲವರಿಗೆ ನಾಲ್ಕು ತಿಂಗಳಾದರೂಪರಿಹಾರ ದೊರೆತಿರಲಿಲ್ಲ. ಈ ಕುರಿತು ‘ಪ್ರಜಾವಾಣಿ’ ನ.6ರ ಸಂಚಿಕೆಯಲ್ಲಿ ‘ನೆರೆ ಸಂತ್ರಸ್ತರಿಗೆ ಬಯಲೇ ಆಲಯ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

ಕಂದಾಯ ನಿರೀಕ್ಷಕ ಹಾ.ಮ.ಶಿವಮೂರ್ತಿ ಅವರ ತಂಡ ಹಲವೆಡೆ ಭೇಟಿ ನೀಡಿ ದಾಖಲೆ ಪರಿಶೀಲಿಸಿತು. ಯಾವ ಕಾರಣಕ್ಕೆ ಸಂತ್ರಸ್ತರಿಗೆಮೊದಲ ಕಂತಿನ ಪರಿಹಾರದ ಹಣ ದೊರೆತಿಲ್ಲ, ಎಲ್ಲಿ ಲೋಪಗಳಾಗಿವೆ ಎಂಬ ಮಾಹಿತಿ ಕಲೆಹಾಕಿತು.

ADVERTISEMENT

‘ಈಗಾಗಲೇ ಸಂಪೂರ್ಣ ಮನೆ ಕಳೆದುಕೊಂಡ 830 ಫಲಾನುಭವಿಗಳಿಗೆತಲಾ ₹ 1 ಲಕ್ಷದಂತೆ₹8.30 ಕೋಟಿ, ಭಾಗಶಃ ಹಾನಿಯಾಗಿರುವ 3,026 ಫಲಾನುಭವಿಗಳಿಗೆ ₹ 12.10 ಕೋಟಿ ಜಮಾ ಮಾಡಲಾಗಿದೆ. ಅನಧಿಕೃತವಾಗಿ ಮನೆ ಕಟ್ಟಿಕೊಂಡಿದ್ದ ಕುಟುಂಬಗಳಿಗೆ ಅಫಿಡವಿಟ್‌ ಸಲ್ಲಿಸಲು ಸೂಚಿಸಲಾಗಿತ್ತು. ಹಣ ನೀಡಲಾಗಿದೆ ಎಂಬ ಕಾರಣಕ್ಕೆ ಜಾಗದ ಹಕ್ಕುದಾರಿಕೆ ಪ್ರತಿಪಾದಿಸಬಾರದು ಎಂಬ ಷರತ್ತಿನ ಮೇಲೆ ಹಣ ಬಿಡುಗಡೆಗೆ ಸರ್ಕಾರ ಸಮ್ಮತಿಸಿದೆ’ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಮಾಹಿತಿ ನೀಡಿದರು.

‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಶಬ್ಬೀರ್ ಹುಸೇನ್ ಅವರ ನಿವೇಶನದ ದಾಖಲೆಗಳು ಸರಿ ಇವೆ. ಅವರದು ಅಧಿಕೃತ ಮನೆ. ಆದರೆ, ಬ್ಯಾಂಕ್‌ ಖಾತೆಯ ವಿವರಗಳನ್ನು ತಪ್ಪಾಗಿ ನಮೂದಿಸಿರುವ ಕಾರಣ ಹಣ ಜಮೆ ಆಗಿಲ್ಲ. ಸರಿಯಾದ ವಿವರ ಪಡೆಯಲಾಗಿದೆ. ತಕ್ಷಣ ಅವರಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.