ADVERTISEMENT

ಬಿಜೆಪಿಯಿಂದ ಸಮಾಜಕ್ಕೆ ಒಳ್ಳೆಯದು ಬಯಸಲು ಸಾಧ್ಯವೇ: ಕಿಮ್ಮನೆ ರತ್ನಾಕರ

ಮಾಜಿ ಸಚಿವ ಕಿಮ್ಮನೆ ರತ್ನಾಕರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 9 ಮೇ 2022, 3:03 IST
Last Updated 9 ಮೇ 2022, 3:03 IST

ಶಿವಮೊಗ್ಗ: ದೇಶವನ್ನೇ ಹಾಳು ಮಾಡುವ ಉದ್ದೇಶ ಹುಟ್ಟಿರುವ ಬಿಜೆಪಿಯಿಂದ ಸಮಾಜಕ್ಕೆ ಒಳ್ಳೆಯದನ್ನು ಬಯಸಲು ಸಾಧ್ಯವೇ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಪ್ರಶ್ನಿಸಿದರು.

ಗೃಹ ಸಚಿವರ ರಾಜೀನಾಮೆಗೆ ಹಾಗೂ ಸರ್ಕಾರದ ವೈಫಲ್ಯದ ವಿರುದ್ಧ ತೀರ್ಥಹಳ್ಳಿ ತಾಲ್ಲೂಕು ಮಂಡಗದ್ದೆ ಗ್ರಾಮದಲ್ಲಿ ಭಾನುವಾರ ನಡೆದ ಪಾದಯಾತ್ರೆ ಸಂದರ್ಭ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಬದಲಾವಣೆ ಆಗಿದೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಕೇಂದ್ರ ಸರ್ಕಾರ ಜನರ ಒಳಿತಿಗಾಗಿ ಏನು ಮಾಡಿದೆ ಹೇಳಲಿ ನೋಡೋಣ’ ಎಂದು ಸವಾಲು ಎಸೆದರು.

ADVERTISEMENT

‘ಮಾತೆತ್ತಿದರೆ ಬಿಜೆಪಿಯವರು ಈದ್ಗಾ ಮೈದಾನ, ರಾಮಜನ್ಮಭೂಮಿ ಎನ್ನುತ್ತಾರೆ. ಮನುಷ್ಯನ ಹೊಟ್ಟೆಗೆ ಅನ್ನ ನೀಡುವ, ದುಡಿಯುವ ಕೈಗಳಿಗೆ ಉದ್ಯೋಗ ಕೊಡುವ ಕೆಲಸ ಆಗಬೇಕು. ಜನರ ಬದುಕಿಗೆ ಪೂರಕವಾದ ಯಾವುದೇ ಕೆಲಸವನ್ನು ಬಿಜೆಪಿ ಮಾಡಿಲ್ಲ. ಕೇವಲ ಜಾತಿ, ಧರ್ಮದ ನಡುವೆ ಕಂದಕ ಸೃಷ್ಟಿಸುತ್ತಾ ಇದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಟ್ಕಾ ಕಟ್, ಹಲಾಲ್ ಕಟ್ ಯಾರಿಗೆ ಬೇಕಾಗಿದೆ? ಸುಮಾರು 60 ವರ್ಷ ಬದುಕು ಸಹಿಸಿಕೊಂಡು ಬಂದಿದ್ದೇವೆ. ಇಷ್ಟು ದಿನ ಇಲ್ಲದ ಸಮಸ್ಯೆ ಈಗೇಕೆ ಉದ್ಭವವಾಗಿದೆ? ಬಿಜೆಪಿ ಅಧಿಕಾರಕ್ಕೆ ಬಂದರೆ ಇಂತಹ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಜಾತಿ ನೋಡಿ ವ್ಯಾಪಾರ ಮಾಡಬೇಕು ಎಂದರೆ ಹೇಗೆ ? ಜಾತಿ ನೋಡಿ ದಿನಸಿ ಖರೀದಿ ಮಾಡಲು ಹೋಗಬೇಕೇ? ಹಿಂದೂ ಧರ್ಮದಲ್ಲಿ 6000 ಜಾತಿಗಳಿವೆ. ಹಾಗಾದರೆ ಅವರೆಲ್ಲಾ ಏನು ಮಾಡಬೇಕು’ಎಂದು ಪ್ರಶ್ನಿಸಿದರು.

‘ದೇಶದಲ್ಲಿ ಬಹುಸಂಖ್ಯಾತರಿಗೆ ಅವಕಾಶ ನೀಡಬೇಕು. ಅವರ ಮಾತು ಕೇಳಬೇಕು ಎಂದರೆ ಇವರು ಪ್ರತಿಪಾದನೆ ಮಾಡಲು ಹೊರಟಿರುವುದಾದರೂ ಏನು? ಜಾತಿ ನೋಡಿ ವ್ಯಾಪಾರ- ವ್ಯವಹಾರ ಮಾಡಬೇಕು ಎಂದಾದರೆ ಸಣ್ಣ ಪುಟ್ಟ ಜಾತಿಗಳು ಏನು ಮಾಡಬೇಕು? ಬಿಜೆಪಿಯವರು ಈ ರೀತಿ ಒಡಕು ಮೂಡಿಸುತ್ತಿರುವುದು ಸರಿಯಲ್ಲ’ ಎಂದರು.

‘ನಜೀರ್ ಸಾಬ್ ಇದ್ದ ಸಂದರ್ಭ ಹಾಗೂ ನಂತರ ಬಂದ ಸರ್ಕಾರಗಳು ವಿಕೇಂದ್ರೀಕರಣದ ಬಗ್ಗೆ ಮಾತನಾಡಿದ್ದವು. ಗೃಹಸಚಿವ ಆರಗ ಜ್ಞಾನೇಂದ್ರ ಏನು ಮಾಡುತ್ತಿದ್ದಾರೆ? ಅವರು ಸಂಪುಟ ದರ್ಜೆ ಸಚಿವರಲ್ಲವೇ? ಗ್ರಾಮ ಪಂಚಾಯಿತಿ ಸದಸ್ಯರಿಗೆ
ಅವಕಾಶ ಕೊಡಿ ಎಂದು ಕೇಳಬೇಕು. ಸದಸ್ಯರು ಸುಶಿಕ್ಷಿತರಿದ್ದಾರೆ. ಓದು-ಬರಹ ಗೊತ್ತಿದೆ. ಇವರಿಗಿಂತ ಉತ್ತಮವಾಗಿ ಕನ್ನಡವನ್ನು ತಪ್ಪಿಲ್ಲದೆ ಮಾತನಾಡಬಲ್ಲರು’ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಪ್ರಮುಖರಾದ ವಿಜಯಕುಮಾರ್, ದೇವಿ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.