ADVERTISEMENT

ಅಡಿಕೆ ಸಸಿ ಸಂಶೋಧನೆ ಮಾಡಿದ್ದೇ ಆರಗ ಜ್ಞಾನೇಂದ್ರ: ಕಿಮ್ಮನೆ ರತ್ನಾಕರ

ಪತ್ರಿಕಾಗೋಷ್ಟಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 4:49 IST
Last Updated 26 ನವೆಂಬರ್ 2022, 4:49 IST
ಕಿಮ್ಮನೆ ರತ್ನಾಕರ
ಕಿಮ್ಮನೆ ರತ್ನಾಕರ   

ತೀರ್ಥಹಳ್ಳಿ: ‘ಅಡಿಕೆ ಎಲೆಚುಕ್ಕಿಯಿಂದ ರೈತರು ಕಂಗೆಟ್ಟಿದ್ದಾರೆ. ರಾಜ್ಯ ಸರ್ಕಾರದಿಂದ ಕೇವಲ ₹19 ಲಕ್ಷ ಪರಿಹಾರ ಬಂದಿದೆ. ಅಡಿಕೆ ಮುಲಾಮು ಚುನಾವಣೆವರೆಗೆ ಮಾತ್ರ. ಆರಗ ಜ್ಞಾನೇಂದ್ರ ಅಡಿಕೆ ಸಸಿ ಸಂಶೋಧನೆ ಮಾಡಿದ್ದಾರೆ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಕುಟುಕಿದರು.

ಶುಕ್ರವಾರ ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ತಾಲ್ಲೂಕಿನಲ್ಲಿ 40,000 ಎಕರೆ ಖಾತೆ ಜಮೀನು ಹಾಗೂ 25,000 ಎಕರೆ ಬಗರ್‌ಹುಕುಂ ಅಡಿಕೆ ತೋಟಗಳಿವೆ. ಕನಿಷ್ಠ ₹50 ಕೋಟಿ ಪರಿಹಾರ ಬೇಕಾಗುತ್ತದೆ. ಇಲ್ಲಿಯವರೆಗೆ ತಾಲ್ಲೂಕು ಆಡಳಿತದಿಂದ ನಷ್ಟವನ್ನು ಅಳತೆ ಮಾಡಲೇ ಇಲ್ಲ. ಅಲ್ಲದೇ ಯಾವುದೇ ರೀತಿಯ ಸಮಿತಿ ರಚನೆ ಆಗಿಲ್ಲ ಎಂದು ಆರೋಪಿಸಿದರು.

ADVERTISEMENT

‘ಡಿನೋಟಿಫಿಕೇಷನ್‌ ಮೂಲಕ 56 ಅಧಿಸೂಚನೆ ರದ್ದಾಗಿದ್ದು, ಬಹುತೇಕ ಶರಾವತಿ ಸಂತ್ರಸ್ತರು ಬೀದಿಗೆ ಬೀಳಲಿದ್ದಾರೆ. ಜ್ಞಾನೇಂದ್ರ ಮಂಜೂರು ಮಾಡಿಸಿದ್ದ ಮುಳುಗಡೆ ಸಂತ್ರಸ್ತರ ಭೂಮಿಯೂ ಇದರಲ್ಲಿದೆ. ಜಿಲ್ಲೆಯ ಪ್ರಮುಖ ರಾಜಕಾರಣಿಗಳ ಜಮೀನು ಕೈಬಿಡಲಾಗಿದೆ’ ಎಂದು ದೂರಿದರು. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ಹಾಗೂ ಮಲೆನಾಡಿನ ವಿವಿಧ
ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ನ. 28ರಂದು ಶಿವಮೊಗ್ಗದಲ್ಲಿ ಪಾದಯಾತ್ರೆ, ಬೃಹತ್‌ ಸಮಾವೇಶ ನಡೆಯಲಿದೆ. ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ರಾಜದೀಪ್‌ ಸಿಂಗ್ ಸುರ್ಜೇವಾಲ, ವಿದಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

20 ವರ್ಷಗಳ ನಿವೇಶನ ಹಂಚಿಕೆಯನ್ನು ಸಿಐಡಿ ತನಿಖೆ ನಡೆಸಲು ಆರಗ ಮುಂದಾಗಿದ್ದಾರೆ. ಗೃಹ ಸಚಿವ ಸ್ಥಾನದಲ್ಲಿದ್ದರೂ 5 ವರ್ಷಗಳ ಹಿಂದಿನ ನಂದಿತಾ ಪ್ರಕರಣ ಯಾಕೆ ಪುನಃ ತನಿಖೆ ನಡೆಸುತ್ತಿಲ್ಲ. ತನಿಖೆ ನಡೆದರೆ ಆರಗ ವಿರುದ್ಧ ಸಾಕ್ಷಿ ನಾಶ, ಕ್ರಿಮಿನಲ್‌ ಪ್ರಕರಣ ದಾಖಲಾಗುತ್ತದೆ. ಸಿಎಂ ಕಾರ್ಯಕ್ರಮಕ್ಕೆ ಜನ ಸೇರಿಸಲು ಅಧಿಕಾರಿಗಳ ಬಳಕೆ ಮಾಡುತ್ತಿದ್ದಾರೆ ಎಂದರು. ಕೆಪಿಸಿಸಿ ಸದಸ್ಯ ನಾರಾಯಣ ರಾವ್‌, ಕೆಸ್ತೂರು ಮಂಜುನಾಥ, ಮುಡುಬ ರಾಘವೇಂದ್ರ, ವಿಶ್ವನಾಥ ಶೆಟ್ಟಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಅಮರನಾಥ ಶೆಟ್ಟಿ, ಮುಖಂಡ ಕಡ್ತೂರು ದಿನೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.