ADVERTISEMENT

ಬಾಬರಿ ಪ್ರಕರಣ ಮಥುರಾದಲ್ಲಿ ಕೃಷ್ಣ ಮಂದಿರ ನಿರ್ಮಾಣಕ್ಕೆ ಸ್ಫೂರ್ತಿ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 12:58 IST
Last Updated 30 ಸೆಪ್ಟೆಂಬರ್ 2020, 12:58 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಶಿವಮೊಗ್ಗ: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಮಥುರಾದಲ್ಲಿ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕೆ ಸ್ಫೂರ್ತಿಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಬುಧವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಸಿಬಿಐ ವಿಷೇಶ ನ್ಯಾಯಾಲಯ 32 ಜನರನ್ನೂ ಖುಲಾಸೆಗೊಳಿಸಿದೆ. ಇದು ರಾಷ್ಟ್ರೀಯವಾದಿಗಳಿಗೆ ಸಂತಸದ ದಿನ. ಸ್ವತಂತ್ರ್ಯ ಭಾರತದಲ್ಲಿ ನಮ್ಮದೇ ನೆಲದ ಶ್ರದ್ಧಾ ಕೇಂದ್ರಗಳ ಸಂರಕ್ಷಣೆಯ ಹೋರಾಟಕ್ಕೆ ಸಿಕ್ಕ ಗೆಲುವು. ಈ ತೀರ್ಪು ಅಯೋಧ್ಯೆಗಷ್ಟೇ ಸೀಮಿತವಲ್ಲ. ಮಥುರಾದಲ್ಲಿಯೂ ಕೃಷ್ಣನ ದೇವಾಲಯ ಕೆಡವಿ ಮಸೀದಿ‌ ನಿರ್ಮಿಸಲಾಗಿದೆ. ಕೃಷ್ಣ ದೇವಾಲಯ ಪುನರ್ ನಿರ್ಮಾಣಕ್ಕೆ ಈ ತೀರ್ಪು ಪ್ರೇರಣೆಯಾಗಿದೆ ಎಂದರು.

ಮಥುರಾದಲ್ಲಿ ಪೂರ್ಣ ಪ್ರಮಾಣದ ಕೃಷ್ಣ ದೇವಾಲಯ ನಿರ್ಮಾಣಕ್ಕೆ ಅವಕಾಶ ದೊರೆಯಬೇಕು. ಇಲ್ಲದಿದ್ದರೆ ಮಥುರಾದಲ್ಲಿಯೂ ಕರಸೇವೆ ಅನಿವಾರ್ಯ ಎಂದರು.

‌ಶಿರಾ, ಆರ್.ಆರ್.ನಗರ ಉಪ ಚುನಾವಣೆಯ ವಾತಾವರಣ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಪೂರಕವಾಗಿದೆ. ಪಕ್ಷದ ಗೆಲುವು ನಿಶ್ಚಿತ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಡಿದಾಡುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ತಮ್ಮದೂ ಒಂದು ಪಕ್ಷ ಇದೆ ಎಂದು ಹೇಳುತ್ತಿದ್ದಾರೆ. ಎಲ್ಲಿವೆ ಅವರ ಪಕ್ಷಗಳು ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಬದಲಾವಣೆ ಎಂಬುದು ತಲೆಕೆಟ್ಟವರ ಪ್ರಸ್ತಾಪಿಸುವ ವಿಚಾರ. ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.