ADVERTISEMENT

ಬೌದ್ಧಿಕ ಬೆಳವಣಿಗೆಯೇ ವಿ.ವಿ.ಯ ಅಸ್ತಿತ್ವ; ಕಟ್ಟಡಗಳಲ್ಲ

ಕುವೆಂಪು ವಿ.ವಿ. ಚಿಂತನ–ಮಂಥನ ಕಾರ್ಯಕ್ರಮದಲ್ಲಿ ಪ್ರೊ.ಬಿ.ಪಿ.ವೀರಭದ್ರಪ್ಪ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 4:20 IST
Last Updated 3 ಆಗಸ್ಟ್ 2021, 4:20 IST
ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿಸೋಮವಾರ ಹಮ್ಮಿಕೊಂಡಿದ್ದ ಚಿಂತನ-– ಮಂಥನ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಅವರನ್ನು ಅಭಿನಂದಿಸಲಾಯಿತು. ಕುಲಸಚಿವೆ ಜಿ.ಅನುರಾಧ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ ಎಂ. ತ್ಯಾಗರಾಜ್ ಭಾಗವಹಿಸಿದ್ದರು.
ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿಸೋಮವಾರ ಹಮ್ಮಿಕೊಂಡಿದ್ದ ಚಿಂತನ-– ಮಂಥನ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಅವರನ್ನು ಅಭಿನಂದಿಸಲಾಯಿತು. ಕುಲಸಚಿವೆ ಜಿ.ಅನುರಾಧ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ ಎಂ. ತ್ಯಾಗರಾಜ್ ಭಾಗವಹಿಸಿದ್ದರು.   

ಶಿವಮೊಗ್ಗ: ‘ಕುವೆಂಪು ವಿಶ್ವವಿದ್ಯಾಲಯವನ್ನು ಕೋವಿಡ್ ಸಂಕಷ್ಟ ಕಾಲದಲ್ಲಿಯೂ ಯಾವುದೇ ಹಿನ್ನಡೆಯಾಗದಂತೆ ಆನ್‍ಲೈನ್ ತರಗತಿಗಳು, ಉಪನ್ಯಾಸ ಸರಣಿಗಳು ಮತ್ತು ವೆಬಿನಾರ್‌ಗಳ ಮೂಲಕ ಒಂದೂವರೆ ವರ್ಷಗಳಿಂದ ಚಲನಶೀಲವಾಗಿ ಮುನ್ನಡೆಸಲಾಗಿದೆ’ ಎಂದು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಹೇಳಿದರು.

ಕುವೆಂಪು ವಿಶ್ವವಿದ್ಯಾಲಯದ ಜ್ಞಾನಸಹ್ಯಾದ್ರಿ ಆವರಣದಲ್ಲಿರುವ ಬಸವ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವವಿದ್ಯಾಲಯ ಆಡಳಿತ ಮತ್ತು ಶೈಕ್ಷಣಿಕ ಪ್ರಗತಿಯ ಚಿಂತನ–ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊರೊನಾದಂತಹ ಸಂದಿಗ್ಧ ಸಂದರ್ಭದಲ್ಲೂ ಶೈಕ್ಷಣಿಕ ಬೆಳವಣಿಗೆಗೆ ತೊಂದರೆಯಾಗದಂತೆ ಆನ್‍ಲೈನ್ ಮೂಲಕವೇ ಘಟಿಕೋತ್ಸವವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಕೊರೊನಾ ಸಮಸ್ಯೆಯಿಂದ ಪ್ರಗತಿಗೆ ತಡೆಯಾದರೂ ವಿಶ್ವವಿದ್ಯಾಲಯವು ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಮುಂದಿದೆ ಎಂದು ತಿಳಿಸಿದರು.

ADVERTISEMENT

ವಿದೇಶದ 25 ವಿಶ್ವವಿದ್ಯಾಲಯ ಗಳೊಂದಿಗೆ ಸಂಶೋಧನಾ ಒಪ್ಪಂದ ಗಳನ್ನು ಮಾಡಿಕೊಳ್ಳಲಾಗಿದೆ. ಈ ಮೂಲಕ ಅಧ್ಯಾಪಕರಿಗೆ ಸಂಶೋಧನೆ ಯನ್ನು ತೀವ್ರಗೊಳಿಸಲು ಕೋರಲಾಗಿದೆ. ವಚನಕಾರ್ತಿ ಅಕ್ಕಮಹಾದೇವಿ, ಅಲ್ಲಮಪ್ರಭು, ಡಾ.ರಾಜ್‍ಕುಮಾರ್ ಸೇರಿ ಹಲವು ಮಹನೀಯರ ಅಧ್ಯಯನ ಪೀಠಗಳನ್ನು ಆರಂಭಿಸಿ ಅವರ ಕೊಡುಗೆ, ಚಿಂತನೆಗಳ ಕುರಿತ ಸಂಶೋಧನೆಗಳನ್ನು ಕೈಗೊಳ್ಳಲು ಉತ್ತೇಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಡಿಆರ್‌ಡಿಒ ಸಂಸ್ಥೆಯು ಸಂಶೋಧನಾ ಪ್ರಯೋಗಾಲಯವನ್ನು ವಿಶ್ವವಿದ್ಯಾಲಯದಲ್ಲಿ ಆರಂಭಿಸಲು ಯೋಜಿಸುತ್ತಿದೆ. ದೂರಶಿಕ್ಷಣ ನೀಡುವ ಅವಕಾಶವನ್ನು ನಿಲ್ಲಿಸಿದಾಗ ಯುಜಿಸಿ ಜತೆಗೆ ಸಮನ್ವಯ ಸಾಧಿಸಿ ವಿಶ್ವವಿದ್ಯಾಲಯ ಆನ್‍ಲೈನ್ ಮೂಲಕ ಪದವಿ, ಸ್ನಾತಕೋತ್ತರ ಕೋರ್ಸ್‌ಗಳನ್ನು ನೀಡುವ ಅರ್ಹತೆ ಮತ್ತು ಅನುಮತಿ ದೊರಕಿಸಿಕೊಳ್ಳಲಾಗಿದೆ. ಈಗಾಗಲೇ ಪ್ರವೇಶಾತಿ ಕಾರ್ಯವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಕುಲಸಚಿವೆ ಜಿ.ಅನುರಾಧಾ ಮಾತನಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಎಂ.ತ್ಯಾಗರಾಜ್, ಪ್ರಾಧ್ಯಾಪಕರಾದ ಪ್ರೊ.ಜಯಣ್ಣ, ಪ್ರೊ.ಜಯರಾಮ್ ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.