ADVERTISEMENT

ಕುವೆಂಪು ವಿವಿಯಲ್ಲಿ ರಾಜ್ಯೋತ್ಸವ: ‘ಜಾತ್ಯತೀತ ಕನ್ನಡ ಪ್ರಜ್ಞೆ ದಾರಿ ದೀಪವಾಗಲಿ’

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 2:38 IST
Last Updated 20 ನವೆಂಬರ್ 2025, 2:38 IST
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ ಅವರನ್ನು ಕುಲಪತಿ ಶರತ್‌ ಅನಂತಮೂರ್ತಿ ಗೌರವಿಸಿದರು 
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ ಅವರನ್ನು ಕುಲಪತಿ ಶರತ್‌ ಅನಂತಮೂರ್ತಿ ಗೌರವಿಸಿದರು    

ಶಂಕರಘಟ್ಟ (ಶಿವಮೊಗ್ಗ): ‘ಜಾತ್ಯತೀತ, ಸೌಹಾರ್ದ ಮತ್ತು ಸಮಾನತೆಯನ್ನೊಳಗೊಂಡ ಕನ್ನಡ ಪ್ರಜ್ಞೆ ನಮಗೆ ದಾರಿದೀಪವಾಗಲಿ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು. 

ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾ ಭವನದಲ್ಲಿ ಬುಧವಾರ ಆಯೋಜಿಸಿದ್ದ 70ನೇ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡದ ಪ್ರಜ್ಞೆ ಕೇವಲ ಭೌಗೋಳಿಕ ಅಥವಾ ಭಾಷಿಕವಾದುದಲ್ಲ. ಅದು ಜಾತ್ಯತೀತ, ಸೌಹಾರ್ದ ಮತ್ತು ಸಮಾನತೆಯ ಪ್ರಜ್ಞೆ. ಏಕಕಾಲಕ್ಕೆ ಸ್ಥಳೀಯತೆ, ರಾಷ್ಟ್ರೀಯತೆ ಮತ್ತು ಅಂತರರಾಷ್ಟ್ರೀಯತೆಯನ್ನು ಒಳಗೊಂಡ ಜಾಗತಿಕ ಪ್ರಜ್ಞೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಧರ್ಮ ದ್ವೇಷ ಮತ್ತು ಜಾತಿಯ ಜೈಲುಗಳಲ್ಲಿ ಬಂಧಿತರಾಗಿರುವ ನಮಗೆ ಕನ್ನಡದ ಜಾತ್ಯತೀತ ಪರಂಪರೆ ದಾರಿ ದೀಪವಾಗಬೇಕು. ಕ್ರಿ.ಶ. 850ರಲ್ಲಿ ರಚಿಸಲ್ಪಟ್ಟ ಕವಿರಾಜಮಾರ್ಗ ಕೃತಿಯಲ್ಲಿಯೇ ‘ಪರಧರ್ಮ ಮತ್ತು ಪರರ ವಿಚಾರ ಗೌರವಿಸುವುದೇ ನಿಜವಾದ ಬಂಗಾರ’ ಎಂಬ ಜಾತ್ಯತೀತ ನಿಲುವು ಪ್ರತಿಪಾದನೆಯಾಗಿತ್ತು’ ಎಂದರು. 

‘ಕನ್ನಡಕ್ಕೆ ಸವಾಲುಗಳಿವೆ, ಆದರೆ ಸಾವಿಲ್ಲ. ಇದು ಜನ ಭಾಷೆ. ಜಗತ್ತಿನ ಅತ್ಯಂತ ಜೀವಂತ ಭಾಷೆಗಳಲ್ಲಿ ಕನ್ನಡವೂ ಒಂದು. ಆಳಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ಕನ್ನಡಕ್ಕಿದೆ. ಇದರ ಶ್ರೇಯ ಜನಸಾಮಾನ್ಯರಿಗೆ ಸಲ್ಲಬೇಕು. ಕನ್ನಡಿಗರಿಗೆ ಶಿಕ್ಷಣ, ಉದ್ಯೋಗ, ಆಹಾರ ನೀಡಿದರೆ ಕನ್ನಡ ತಾನಾಗಿಯೇ ಉಳಿದು ಬೆಳೆಯುತ್ತದೆ’ ಎಂದು ತಿಳಿಸಿದರು. 

‘ಕನ್ನಡಕ್ಕೆ ಒಂದು ದೊಡ್ಡ ವಿವೇಕವಿದೆ. ಎಲ್ಲ ಜಾತಿ ಧರ್ಮಗಳ ಮಹನೀಯರು ಕನ್ನಡವನ್ನು ಕಟ್ಟಿ ಬೆಳೆಸಿದ್ದಾರೆ. ಹೀಗಾಗಿ ಕನ್ನಡದ ಪ್ರಜ್ಞೆ ಜಾತ್ಯತೀತವಾದುದು ಮತ್ತು ಪ್ರಜಾಸತ್ತಾತ್ಮಕವಾದುದು. ಕನ್ನಡದ ಮುಖಾಂತರ ಮತೀಯವಾದಿಗಳಿಗೆ ಉತ್ತರ ನೀಡಿದ ಸೂಫಿ ಸಂತರಿದ್ದಾರೆ. ಇಂತಹ ಆದರ್ಶಪ್ರಾಯವಾದ ದೊಡ್ಡ ಪರಂಪರೆಯನ್ನು ನಾವು ಆಚರಣೆಯಲ್ಲಿ ಅಳವಡಿಕೊಳ್ಳಬೇಕಿದೆ’ ಎಂದು ಕಿವಿಮಾತು ಹೇಳಿದರು.

ಕುಲಪತಿ ಶರತ್ ಅನಂತಮೂರ್ತಿ, ಕುಲಸಚಿವ ಎ.ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ತಿಮ್ಮರಾಯಪ್ಪ, ಹಣಕಾಸು ಅಧಿಕಾರಿ ಎಚ್.ಎನ್. ರಮೇಶ್, ಕನ್ನಡ ಭಾರತಿಯ ನೆಲ್ಲಿಕಟ್ಟೆ ಸಿದ್ದೇಶ್‌, ಪ್ರೊ. ಪ್ರಶಾಂತ ನಾಯಕ ಮಾತನಾಡಿದರು. ವಿವಿಧ ವಿಭಾಗಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ವಿಶ್ವವಿದ್ಯಾಲಯದ ವತಿಯಿಂದ ಈ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರೊ. ಶ್ರೀಕಂಠ ಕೂಡಿಗೆ, ಪ್ರೊ. ಬಸವರಾಜ ನೆಲ್ಲಿಸರ, ಪ್ರೊ. ಕುಮಾರ ಚಲ್ಯ, ಪ್ರೊ. ಸಣ್ಣರಾಮ ಮತ್ತು ಪ್ರೊ. ಕೇಶವ ಶರ್ಮಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.