ADVERTISEMENT

ರಿಪ್ಪನ್‌ಪೇಟೆ: ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆ

ರಿ.ರಾ.ರವಿಶಂಕರ್
Published 23 ಡಿಸೆಂಬರ್ 2024, 8:04 IST
Last Updated 23 ಡಿಸೆಂಬರ್ 2024, 8:04 IST
ರಿಪ್ಪನ್‌ಪೇಟೆಯ ಶ್ರೀ ರಾಮನಗರದಲ್ಲಿ ಮನೆ ಮುಂದಿನ ಚರಂಡಿಯಲ್ಲಿ ನೀರು ನಿಂತಿರುವುದು
ರಿಪ್ಪನ್‌ಪೇಟೆಯ ಶ್ರೀ ರಾಮನಗರದಲ್ಲಿ ಮನೆ ಮುಂದಿನ ಚರಂಡಿಯಲ್ಲಿ ನೀರು ನಿಂತಿರುವುದು   

ರಿಪ್ಪನ್‌ಪೇಟೆ: ಹೊಸನಗರ ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಶ್ರೇಯ ಹೊಂದಿರುವ ರಿಪ್ಪನ್‌ಪೇಟೆಯಲ್ಲಿ  ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಸ್ಥಳೀಯಾಡಳಿತ ಸಂಪೂರ್ಣ ವಿಫಲವಾಗಿದೆ. ಜನರು ನೆಲೆಸಿರುವ ಪ್ರದೇಶಗಳು ತ್ಯಾಜ್ಯ ಸಂಗ್ರಹ ಕೇಂದ್ರಗಳಾಗಿ ಮಾರ್ಪಟ್ಟಿವೆ!

ಮುಂಗಾರು ಹಂಗಾಮಿನ ಆರಂಭಕ್ಕೂ ಮೊದಲು ಗ್ರಾಮದಲ್ಲಿ ಡೆಂಗಿ ಜ್ವರ ಕಾಣಿಸಿಕೊಂಡಿತ್ತು. ಇದರಿಂದ ಜೀವಹಾನಿಯೂ ಆಗಿತ್ತು. ಇಷ್ಟಾದರೂ ಗ್ರಾಮ ಆಡಳಿತ ಮಾತ್ರ ಎಚ್ಚೆತ್ತುಕೊಂಡಿಲ್ಲ. ಜನವಸತಿ ಪ್ರದೇಶದಲ್ಲಿನ ರಸ್ತೆ, ಚರಂಡಿ ಸ್ವಚ್ಛತೆ ಹಾಗೂ ಖಾಲಿ ನಿವೇಶನಗಳಲ್ಲಿನ ಗಿಡಗಂಟಿಗಳ ತೆರವಿಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ರಿಪ್ಪನ್‌ಪೇಟೆ ಹೋಬಳಿ ಕೇಂದ್ರವಾಗಿದೆ. ಆದ್ದರಿಂದ ಸಾರ್ವಜನಿಕರು ದೈನಂದಿನ ಕೆಲಸ ಕಾರ್ಯಗಳಿಗಾಗಿ ನಾಡ ಕಚೇರಿ, ರೈತ ಸಂಪರ್ಕ ಕೇಂದ್ರ, ಡಿ.ದೇವರಾಜ ಅರಸು ವಿದ್ಯಾರ್ಥಿನಿಯರ ವಸತಿ ನಿಲಯ ಇರುವ ದೊಡ್ಡಿನಕೊಪ್ಪಕ್ಕೆ ಭೇಟಿ ನೀಡುವುದು ಸಾಮಾನ್ಯ. ಈ ಪ್ರದೇಶಗಳಲ್ಲಿ ಸ್ವಚ್ಛತೆಗೆ ಒತ್ತು ನೀಡುವ ಜೊತೆಗೆ ರಸ್ತೆ ದುರಸ್ತಿ ಕಾರ್ಯವನ್ನೂ ತುರ್ತಾಗಿ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹ.

ADVERTISEMENT

ಗ್ರಾಮದಲ್ಲಿ ಮಳೆ ಹಾಗೂ ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಇರುವ ಬೆರಳೆಣಿಕೆಯ ಚರಂಡಿಗಳು ನಿರ್ವಹಣೆ ಇಲ್ಲದೆ ದುರ್ವಾಸನೆ ಬೀರುತ್ತಿವೆ. ಶ್ರೀ ರಾಮನಗರ ಬಡಾವಣೆಯಲ್ಲಿ ಕೈಗೊಳ್ಳಲಾಗಿರುವ ಅವೈಜ್ಞಾನಿಕ ಕಾಮಗಾರಿ, ನೆಹರೂ ಬಡಾವಣೆ, ಮದೀನಾ ಕಾಲೊನಿ, ವಿನಾಯಕ ನಗರ, ಸಂತೆ ಮೈದಾನ ಸೇರಿದಂತೆ ಹಲವು ಬಡಾವಣೆಗಳಲ್ಲಿ ಹಾಗೂ ಊರಿನ ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿನ ಚರಂಡಿಗಳಲ್ಲಿ ಕೊಳಚೆ ನೀರು ನಿಂತು ಗಬ್ಬು ನಾರುತ್ತಿದೆ. ದಾರಿಹೋಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. 

‘ಸ್ಥಳೀಯಾಡಳಿತ ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜನಪ್ರತಿನಿಧಿಗಳು ಸ್ವ-ಹಿತಾಸಕ್ತಿ ಬದಿಗೊತ್ತಬೇಕು. ರೋಗರುಜಿನ ಹರಡುವ ಮುನ್ನ ಸ್ವಚ್ಛತೆ ಕೈಗೊಳ್ಳಬೇಕು’ ಎಂದು ನಿವಾಸಿಗಳಾದ ಶಿವರಾಜ್ ಡಿ.ಪ್ರಭು, ತೀ.ರಾ.ಕೃಷ್ಣಪ್ಪ, ಕೇತಾರ್ಜಿರಾವ್ ಗವಟೂರು ಹಾಗೂ ರಾಮನಗರದ ವಿನಾಯಕ ಆಗ್ರಹಿಸಿದ್ದಾರೆ. 

ರಿಪ್ಪನ್‌ಪೇಟೆಯ ಸಂತೇ ಮಾರುಕಟ್ಟೆಯ ಚರಂಡಿಯಲ್ಲಿ ತ್ಯಾಜ್ಯ ನೀರು ಸಂಗ್ರಹವಾಗಿರುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.