ADVERTISEMENT

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಹಗರಣ ಸಿಬಿಐಗೆ ವಹಿಸಲು ಕೋರಿ ಸರ್ಕಾರಕ್ಕೆ ಪತ್ರ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 11:34 IST
Last Updated 16 ಏಪ್ರಿಲ್ 2021, 11:34 IST

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಗಾಂಧಿ ಬಜಾರ್ ಶಾಖೆಯಲ್ಲಿ 2014ರಲ್ಲಿ ನಡೆದ ₹ 62.77 ಕೋಟಿ ಬಂಗಾರ ಅಡಮಾನ ಸಾಲದ ಹಗರಣವನ್ನು ಸಿಬಿಐಗೆ ವಹಿಸಲು ಕೋರಿ ಬ್ಯಾಂಕ್‌ನ ಆಡಳಿತ ಮಂಡಳಿ ಸರ್ಕಾರಕ್ಕೆ ಪತ್ರ ಬರೆದಿದೆ.

ಹಗರಣದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ ಸೇರಿ 18 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಸಿಐಡಿ ತನಿಖೆ ನಡೆದು ಮಂಜುನಾಥ್ ಗೌಡರನ್ನು ಆರೋಪಮುಕ್ತಗೊಳಿಸಲಾಗಿತ್ತು. ಸಿಐಡಿ ಅಧಿಕಾರಿಗಳು ನಡೆಸಿದ ತನಿಖೆ ಸಮರ್ಪಕವಾಗಿಲ್ಲ ಎನ್ನುವ ಭಾವನೆ ಇದೆ. ಹಾಗಾಗಿ, ಕೂಲಂಕಷ ತನಿಖೆಗಾಗಿ ಸಿಬಿಐಗೆ ವಹಿಸಲು ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಉಳಿದ 17 ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಿಸಿಸಿ ಬ್ಯಾಂಕ್‌ ರಾಜ್ಯದ ಬಿಜಾಪುರ, ಬಾಗಲಕೋಟೆ, ಚನ್ನರಾಯಪಟ್ಟಣದ ಸಕ್ಕರೆ ಕಾರ್ಖಾನೆಗಳಿಗೆ ಸುಮಾರು ₹ 90 ಕೋಟಿ ಸಾಲ ನೀಡಿದೆ. ಹಿಂದಿನ ಆಡಳಿತ ಮಂಡಳಿ ನಿಯಮ ಬಾಹಿರವಾಗಿ ನೀಡಿದೆ ಎಂದು ಬ್ಯಾಂಕಿನ 11 ನಿರ್ದೇಶಕರು ದೂರು ನೀಡಿದ್ದಾರೆ. ಈ ಕುರಿತು ತನಿಖೆಗೆ ಒತ್ತಾಯಿಸಲಾಗಿದೆ ಎಂದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲೇ ನಿರ್ದೇಶಕರಾದ ದುಗ್ಗಪ್ಪಗೌಡ, ಯೋಗೀಶ್, ಎಸ್.ಪಿ.ದಿನೇಶ್ ಪರಸ್ಪರ ವಾಗ್ವಾದ ನಡೆಸಿದರು. ಆರೋಪ, ಪ್ರತ್ಯಾರೋಪಗಳೂ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.