ADVERTISEMENT

ಟಿಪ್ಪುಗೆ ಗೂಂಡಾ ಎಂದ ಆರೋಪ: ನಾಲಿಗೆ ಕಟ್‌ ಮಾಡುವುದಾಗಿ ಈಶ್ವರಪ್ಪಗೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 1:52 IST
Last Updated 25 ಆಗಸ್ಟ್ 2022, 1:52 IST
ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ   

ಶಿವಮೊಗ್ಗ: ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಅನಾಮಧೇಯ ವ್ಯಕ್ತಿಯಿಂದ ಜೀವ ಬೆದರಿಕೆ ಪತ್ರಬಂದಿದೆ.

ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಈಶ್ವರಪ್ಪ ಅವರ ನಿವಾಸಕ್ಕೆ ಬುಧವಾರ ಅನಾಮಧೇಯ ಬೆದರಿಕೆ ಪತ್ರ ಬಂದಿದೆ. ಈ ಬಗ್ಗೆ ಈಶ್ವರಪ್ಪ ಪರವಾಗಿ ಆಪ್ತ ಸಹಾಯಕರು, ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

‘ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಟಿಪ್ಪು ಸುಲ್ತಾನ್ ಬಗ್ಗೆ ನೀನು ಮುಸ್ಲಿಂ ಗೂಂಡಾ ಅಂತ ಹೇಳಿದೆಯಲ್ಲ, ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನಲ್ಲಿ ಮೋಟೆಬೆನ್ನೂರಿನ ಕಾಲೇಜು ಕಟ್ಟಡ ಕಟ್ಟಲಿಕ್ಕೆ ನಮ್ಮ ಮುಸ್ಲಿಂ ಸಿಮೆಂಟ್ ಬೇಕು. ಆದರೆ, ನಿಮಗೆ ಮುಸ್ಲಿಂ ಸಮುದಾಯ ಬೇಡ. ನಾಚಿಕೆಯಾಗಬೇಕು. ನಾಲಿಗೆ ಕಟ್ ಮಾಡುತ್ತೇವೆ ಹುಷಾರ್, ಬಾಲ ಬಿಚ್ಚಬೇಡ’ ಎಂದು ಪತ್ರದಲ್ಲಿ ಬೆದರಿಕೆ ಒಡ್ಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಬೆದರಿಕೆ ಪತ್ರವನ್ನು ಪರಿಶೀಲಿಸಿ ತನಿಖೆ ಕೈಗೊಂಡು, ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ಹೇಡಿಗಳ ಪತ್ರಕ್ಕೆ ಹೆದರುವುದಿಲ್ಲ’

ಬೆದರಿಕೆ ಪತ್ರದ ಬಗ್ಗೆ ದೂರು ದಾಖಲಿಸಿರುವಶಾಸಕ ಕೆ.ಎಸ್‌.ಈಶ್ವರಪ್ಪ,‘ಎಲ್ಲ ಮುಸ್ಲಿಮರಿಗೆ ಗೂಂಡಾ ಎಂದಿಲ್ಲ. ಕೊಲೆ, ಹಲ್ಲೆ, ದರೋಡೆ, ಗೂಂಡಾಗಿರಿ ಮಾಡುವ ಮುಸ್ಲಿಮರಿಗೆ ಮಾತ್ರ ಗೂಂಡಾ ಎಂದಿರುವೆ. ಗೂಂಡಾಗಿರಿ ಮಾಡುವವರಿಗೆ ಗೂಂಡ ಅನ್ನದೇ ಒಳ್ಳೆಯವರು ಎಂದು ಕರೆಯಬೇಕೇ’ ಎಂದು ಪ್ರಶ್ನಿಸಿದರು.

‘ಗೊಡ್ಡು ಬೆದರಿಕೆ ಹಾಗೂ ಹೇಡಿಗಳು ಬರೆಯುವ ಪತ್ರಗಳಿಗೆ ಎಂದೂ ಹೆದರುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.