
ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಕರಕುಶಲ ಕಾರ್ಯಾಗಾರ
ಬೆಂಗಳೂರು: ಮಹಾತ್ಮ ಗಾಂಧಿ ವಸ್ತ್ರೋದ್ಯಮ ಕೋಶವನ್ನು ಇನ್ನಷ್ಟು ನೇಕಾರ ಸ್ನೇಹಿಗೊಳಿಸುವ ಉದ್ದೇಶದಿಂದ ಪರಿಷ್ಕೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅನುಮತಿ ಸಿಗುವ ವಿಶ್ವಾಸವಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಅಭಿವೃದ್ಧಿ ಆಯುಕ್ತೆ ಹಾಗೂ ನಿರ್ದೇಶಕಿ ಕೆ.ಜ್ಯೋತಿ ಹೇಳಿದರು.
ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಸಾಗರದ ಹೆಗ್ಗೋಡು -ಹೊನ್ನೇಸರದ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ, ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಯೋಗದಲ್ಲಿ ಇದೇ 9 ರವರೆಗೆ ಹಮ್ಮಿಕೊಂಡಿರುವ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಕರಕುಶಲ ಕಾರ್ಯಾಗಾರದಲ್ಲಿ ಶುಕ್ರವಾರ ಕೈಮಗ್ಗ ಹಾಗೂ ನೈಸರ್ಗಿಕ ಬಣ್ಣದ ಬೆಡ್ ಸ್ಪ್ರೆಡ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೈಯಿಂದ ನೇಯ್ದ ಮತ್ತು ಕೈಮಗ್ಗ ಬಟ್ಟೆಯ ಉತ್ಪಾದಕರ ನಡುವೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಮಾರುಕಟ್ಟೆ ಅಗತ್ಯವಿದ್ದು, ಉದ್ದೇಶಿತ ಅಭಿವೃದ್ಧಿ ಕೋಶದಿಂದ ಸಾಧ್ಯವಿದೆ. ಇದರಲ್ಲಿ ಸರಕಾರದ ಕನಿಷ್ಠ ಮಟ್ಟದ ಹಸ್ತಕ್ಷೇಪ ಇರುವಂತೆ ನೋಡಿಕೊಳ್ಳಲಾಗುವುದು ಎಂದರು.
ಕೈಮಗ್ಗ ನೇಕಾರರಿಗೆ ಜಾರಿಯಲ್ಲಿರುವ ಯೋಜನೆಗಳನ್ನು ಪರಿಶೀಲಿಸಿ, ಅನುಕೂಲಕರವಾಗಿದ್ದರೆ ಅವುಗಳನ್ನು ಮುಂದುವರಿಸಲಾಗುವುದು. ಇಲ್ಲವೇ, ಕೈಬಿಟ್ಟು ಹೊಸ ಯೋಜನೆಗಳನ್ನು ಜಾರಿಗೊಳಿಸುವ ಸಂಬಂಧ ಕೋಶಕ್ಕೆ ಸಂಪೂರ್ಣ ಅಧಿಕಾರ ನೀಡುವ ಬಗ್ಗೆ ಸರಕಾರವನ್ನು ಕೇಳಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕೋಶಕ್ಕೆ ನೇರವಾಗಿ ಸರಕಾರ 1 ಕೋಟಿ ರೂ. ಮೀಸಲಿಡುವಂತೆಯೂ ಮನವಿ ಮಾಡಲಾಗಿದೆ ಎಂದು ಹೇಳಿದರು.
ಮೇಳ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿ, ವೇಗದ ಜೀವನಶೈಲಿಯಿಂದಾಗಿ ನಾವು ಉಡುವ-ತೊಡುವ ಮತ್ತು ಸೇವಿಸುವ ಉತ್ಪನ್ನಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಕೈಮಗ್ಗ ಬಟ್ಟೆ ಪರಿಸರ ಸ್ನೇಹಿಯಾಗಿದ್ದು, ನೇಕಾರರು ಕೈಯಲ್ಲೇ ಇವುಗಳನ್ನು ನೇಯ್ಗೆ ಮಾಡುತ್ತಿದ್ದಾರೆ. ಕೈಮಗ್ಗ ಬಟ್ಟೆಗಳನ್ನು ನಾವು ಬಳಸುವುದರಿಂದ ನೇಕಾರರನ್ನು ಉಳಿಸುವುದರ ಜತೆಗೆ ಪರಿಸರವನ್ನೂ ಸಂರಕ್ಷಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಚರಕ ಕುರಿತ "ದಿ ಚರಕ ಸ್ಟೋರಿ" ಕಾಫಿ ಟೇಬಲ್ ಪುಸ್ತಕವನ್ನು ಲೇಖಕಿ, ಉದ್ಯಮಿ ಸಾಧನಾ ರಾವ್ ಅವರು ಬಿಡುಗಡೆ ಮಾಡಿದರು.
ಚರಕದ ಸಂಸ್ಥಾಪಕರು, ಹಿರಿಯ ರಂಗಕರ್ಮಿಗಳೂ ಆದ ಪ್ರಸನ್ನ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೈಮಗ್ಗ ನೇಕಾರರನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುತುವರ್ಜಿ ವಹಿಸಿ ಘೋಷಿಸಿದ ಮಹಾತ್ಮ ಗಾಂಧಿ ವಸ್ತ್ರೋದ್ಯಮ ಕೋಶಕ್ಕೆ ಇನ್ನೂ ಅಂತಿಮ ರೂಪು- ರೇಷೆ ಸಿಕ್ಕಿಲ್ಲ. ಸರ್ಕಾರಕ್ಕೆ ಕೈಮಗ್ಗ ನೇಕಾರರಿಗೆ ನಿಜವಾಗಿಯೂ ಅನುಕೂಲ ಮಾಡಿಕೊಡುವ ಮನಸ್ಸಿದ್ದರೆ ಮಹಾತ್ಮ ಗಾಂಧಿ ವಸ್ತ್ರೋದ್ಯಮ ಕೋಶವನ್ನು ಶೀಘ್ರ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು.
ಚರಕದ ಅಧ್ಯಕ್ಷೆ ಮಹಾಲಕ್ಷ್ಮಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಚರಕದ ಕಾರ್ಯದರ್ಶಿ ಎನ್.ರಮೇಶ್, ಸಿಇಒ ಟೆರೆನ್ಸ್ ಪೀಟರ್, ಪ್ರಮುಖರಾದ ಶಾರದಾ ರಿತೀಶ್, ವೀಣಾ ಹೆಗಡೆ, ರಾಮಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಮೇಳದಲ್ಲಿ ಮನಸೆಳೆದ ಕೈಮಗ್ಗದ ನೈಸರ್ಗಿಕ ಬಟ್ಟೆಗಳು
ಚರಕದ ವಿನೂತನ ವಿನ್ಯಾಸದ ನೈಸರ್ಗಿಕ ಬಣ್ಣದ ಕೈಮಗ್ಗದ ಸಿದ್ಧ ಉಡುಪು-ಬಟ್ಟೆಗಳ ಜತೆಗೆ ಚೆನ್ನೈನ ತುಲಾ ಸಂಸ್ಥೆಯ ಕೈಮಗ್ಗ ವಸ್ತುಗಳು, ಶಿರಸಿಯ ಚೇತನಾ ಫೌಂಡೇಷನ್ ಅವರ ಬಾಳೆನಾರಿನ ಉತ್ಪನ್ನಗಳು, ಆಂಧ್ರಪ್ರದೇಶದ ಟಿಂಬಕ್ಟು ಕಲೆಕ್ಟಿವ್ನ ಸಹಜ ಬಣ್ಣದ ವಸ್ತುಗಳು, ಮರಳಿ ಮಣ್ಣಿಗೆಯ ಕೈಮಗ್ಗ ಮತ್ತು ಕರಕುಶಲ ವಸ್ತುಗಳು, ಉತ್ತರ ಕರ್ನಾಟಕದ ದಖನಿ ಡೈರಿಯ ಉಣ್ಣೆಯ ವಸ್ತುಗಳು, ಸಹನಾ ರೀಡ್ಸ್ನ ಹುಲ್ಲಿನ ಬ್ಯಾಗ್ಗಳು, ಜಿಯೋಸ್ಮಿನ್ ಕರಕುಶಲ ವಸ್ತುಗಳು, ನೇಚರ್ ಆಲಿಯ ಸಹಜ ಬಣ್ಣದ ಉಡುಪುಗಳು, ಟೆರಾಬಾನ್ ಅವರ ಮಣ್ಣಿನ ಮಡಿಕೆ-ಕುಡಿಕೆಗಳು, ಟೆರಾಕೋಟಾ ವಸ್ತುಗಳು, "ಮಾಯ" ಅವರ ಕಸೂತಿಯ ಬಟ್ಟೆಗಳು ಹಾಗೂ ಉತ್ತರ ಕರ್ನಾಟಕದ ವಿವಿಧ ನೇಕಾರರು ಸಿದ್ಧಪಡಿಸಿದ ತರಹೇವಾರಿ ಉಡುಪುಗಳು ಮೇಳದಲ್ಲಿ ಗಮನ ಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.