ADVERTISEMENT

ಸಾಗರ: ಮಾರಿಕಾಂಬಾ ಜಾತ್ರೆಯಲ್ಲಿ ತೊಡೆ ತಟ್ಟಲಿರುವ ಪೈಲ್ವಾನರುಗಳು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 2:57 IST
Last Updated 3 ಫೆಬ್ರುವರಿ 2026, 2:57 IST
ಸಾಗರದ ಮಾರಿಕಾಂಬಾ ಜಾತ್ರೆ ವೇಳೆ ನಡೆಯುವ ಕುಸ್ತಿ ಪಂದ್ಯಾವಳಿಯ ಒಂದು ನೋಟ.
ಸಾಗರದ ಮಾರಿಕಾಂಬಾ ಜಾತ್ರೆ ವೇಳೆ ನಡೆಯುವ ಕುಸ್ತಿ ಪಂದ್ಯಾವಳಿಯ ಒಂದು ನೋಟ.   

ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಜನಪದೀಯ ಹಿನ್ನೆಲೆಯ ಕ್ರೀಡೆಯಾಗಿರುವ ಕುಸ್ತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮೂರು ದಿನಗಳ ಕಾಲ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತದೆ.

ಈ ಬಾರಿ ನಗರದ ನೆಹರೂ ಮೈದಾನದಲ್ಲಿ ನಿರ್ಮಿಸಿರುವ ಮಣ್ಣಿನ ಅಂಕಣದಲ್ಲಿ ಫೆ. 6ರಿಂದ 8ರವರೆಗೆ ಪ್ರತಿದಿನ ಮಧ್ಯಾಹ್ನ 3ಗಂಟೆಗೆ ಕುಸ್ತಿ ಸ್ಪರ್ಧೆಗಳು ಆರಂಭವಾಗಲಿವೆ. ಕುಸ್ತಿ ಸ್ಪರ್ಧೆಯ ವ್ಯವಸ್ಥಿತ ಆಯೋಜನೆಗಾಗಿ ಪ್ರತ್ಯೇಕ ಸಮಿತಿಯನ್ನೂ ರಚಿಸಲಾಗಿದೆ.

ರಾಜ್ಯದ ವಿವಿಧ ಭಾಗಗಳಿಂದ ಜೊತೆಗೆ ಹೊರ ರಾಜ್ಯಗಳಾದ ದೆಹಲಿ, ಹರಿಯಾಣ, ಮಹಾರಾಷ್ಟ್ರಗಳಿಂದಲೂ ಪ್ರಸಿದ್ಧ ಪೈಲ್ವಾನರುಗಳು ಇಲ್ಲಿಗೆ ಆಗಮಿಸಿ ತಮ್ಮ ಕುಸ್ತಿಯ ಪಟ್ಟುಗಳನ್ನು ಪ್ರದರ್ಶಿಸಲಿದ್ದಾರೆ.

ADVERTISEMENT

ಕುಸ್ತಿಯಲ್ಲಿ ವಿಜೇತರಾಗುವ ಪೈಲ್ವಾನರುಗಳಿಗೆ ನಗದು ಬಹುಮಾನದ ಜೊತೆಗೆ ಬೆಳ್ಳಿಯ ಗದೆ, ಬಂಗಾರ, ಬೆಳ್ಳಿಯ ಬಳೆಗಳನ್ನು ಸಹ ನೀಡಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಪೈಲ್ವಾನರುಗಳು ಕೂಡ ಇಲ್ಲಿ ಕುಸ್ತಿ ಪ್ರದರ್ಶನ ನೀಡುತ್ತಿದ್ದಾರೆ.

ಎದುರಾಳಿಯ ಬೆನ್ನನ್ನು ಅಖಾಡದ ಮಣ್ಣಿಗೆ ತಾಗಿಸುವ ಪೈಲ್ವಾನರನ್ನು ಇಲ್ಲಿ ವಿಜೇತರೆಂದು ಘೋಷಿಸಲಾಗುತ್ತದೆ. ಹಿರಿಯ ಕುಸ್ತಿ ಪೈಲ್ವಾನರು ತೀರ್ಪುಗಾರರಾಗಿ ಪಾಲ್ಗೊಳ್ಳುತ್ತಾರೆ. ಮರಣಾಂತಿಕ ಪಟ್ಟುಗಳೆಂದೆ ಗುರುತಿಸಲ್ಪಟ್ಟಿರುವ ಕೊಕ್ಕರೆ, ಮಕಪಟ್ಟಿ, ಸವಾರಿ ಎಂಬ ಕುಸ್ತಿಯ ಪಟ್ಟುಗಳನ್ನು ಇಲ್ಲಿ ನಿಷೇಧಿಸಲಾಗಿದ್ದು ಇವುಗಳನ್ನು ಪ್ರಯೋಗಿಸಿದರೆ ತೀರ್ಪುಗಾರರು ಅಂತಹ ಪೈಲ್ವಾನರನ್ನು ಕುಸ್ತಿಯ ಮಧ್ಯೆಯೆ ತಡೆಯುತ್ತಾರೆ.

ಸಾವಿರಾರು ಸಂಖ್ಯೆ ಪ್ರೇಕ್ಷಕರು ಪ್ರತಿ ಬಾರಿ ಕುಸ್ತಿ ಸ್ಪರ್ಧೆಯನ್ನು ವೀಕ್ಷಿಸಿ ಪೈಲ್ವಾನರುಗಳನ್ನು ಪ್ರೋತ್ಸಾಹಿಸುತ್ತಾರೆ. ಕೆಲವೊಮ್ಮೆ ಉತ್ತಮ ಪ್ರದರ್ಶನ ನೀಡಿಯೂ ಸೋಲು ಅನುಭವಿಸುವ ಪೈಲ್ವಾನರಿಗೆ ಜನರು ಸಮಿತಿ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ನಗದು ಬಹುಮಾನ ನೀಡಿ ಬೆನ್ನು ತಟ್ಟುವ ವಿದ್ಯಮಾನವೂ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.