ಶಿವಮೊಗ್ಗ: ಸೈಬರ್ ಅಪರಾಧ, ರೌಡಿಸಂ, ಮಾದಕ ವಸ್ತುಗಳು, ರಿಯಲ್ ಎಸ್ಟೇಟ್ ದಂಧೆಕೋರರಿಗೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಸೈಬರ್ ಕ್ರೈಮ್ ವಿಭಾಗವನ್ನು ಬಲಪಡಿಸಲಾಗುತ್ತಿದೆ. ಅತ್ಯಾಧುನಿಕ ತಂತ್ರಾಂಶಗಳು, ಸಾಧನಗಳನ್ನು ಅಳವಡಿಸಿಕೊಳ್ಳಲಾಗಿದೆ. ರಾಜ್ಯದ ಪೊಲೀಸರಿಗೆ ಸೈಬರ್ ಅಪರಾಧಗಳನ್ನು ತ್ವರಿತವಾಗಿ ಪತ್ತೆ ಹಚ್ಚಲು, ಅಪರಾಧಿಗಳನ್ನು ಬಂಧಿಸಲು ಇನ್ಫೋಸಿಸ್ ನೆರವು ಪಡೆಯಲಾಗುತ್ತಿದೆ. ಪೊಲೀಸರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಹೊರ ರಾಜ್ಯದ ಪೊಲೀಸರು ಇಲ್ಲಿ ಬಂದು ತರಬೇತಿ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಬೆಂಗಳೂರಿನಲ್ಲಿ ರೌಡಿಸಂ ಮಟ್ಟಹಾಕಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಹಗಲು, ರಾತ್ರಿ ಕೆಲಸ ಮಾಡುತ್ತಿದ್ದಾರೆ. ರೌಡಿಗಳ ಮನೆಗಳ ಮೇಲೆ ದಾಳಿಗಳು ನಡೆಯುತ್ತಿವೆ ಎಂದು ವಿವರ ನೀಡಿದರು.
ಅಫ್ಗಾನಿಸ್ತಾನದಲ್ಲಿರುವ ಕನ್ನಡಿಗರಿಗೆ ನೆರವು: ಅಫ್ಗಾನಿಸ್ಥಾನದಲ್ಲಿರುವ ಕನ್ನಡಿಗರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಈ ಜವಾಬ್ದಾರಿ ವಹಿಸಿಕೊಂಡಿದೆ. ಕೇಂದ್ರದೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಈ ಕಾರ್ಯಕ್ಕಾಗಿಯೇ ಸಿಐಡಿಯ ಪ್ರಮುಖ ಅಧಿಕಾರಿ ಉಮೇಶ್ ಅವರನ್ನು ನೇಮಿಸಿದ್ದೇವೆ. ಈ ಹಿಂದೆ ಕೂಡ ಹಲವು ದೇಶದಲ್ಲಿ ಅವರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ತೀರ್ಥಹಳ್ಳಿ ಮೂಲದ ಪಾದ್ರಿ ಸೇರಿದಂತೆ ಎಲ್ಲರನ್ನು ರಕ್ಷಿಸುತ್ತೇವೆ ಎಂದು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.