ADVERTISEMENT

ನರೇಗಾ ಕೆಲಸ ಕೈಗೊಳ್ಳಲು ಅನುಮತಿ: ಉದ್ಯೋಗ ಖಾತ್ರಿಗೆ ಮತ್ತೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಮೇ 2021, 13:25 IST
Last Updated 13 ಮೇ 2021, 13:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶಿವಮೊಗ್ಗ: ಕೋವಿಡ್ ಮಾರ್ಗಸೂಚಿ ಅಡಿಯಲ್ಲೇ ಉದ್ಯೋಗ ಖಾತ್ರಿ ಕೆಲಸಗಳು ಆರಂಭಗೊಳ್ಳಲಿವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಾಹಿತಿ ನೀಡಿದರು.

ಕೋವಿಡ್ ಸಂಕಷ್ಟದಿಂದ ಉದ್ಯೋಗಾವಕಾಶಗಳು ಕಡಿಮೆಯಾಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆದೇಶದ ಅನ್ವಯ ಒಂದು ಸ್ಥಳದಲ್ಲಿ ಕನಿಷ್ಠ 40 ಕೂಲಿ ಕಾರ್ಮಿಕರನ್ನು ಬಳಸಿಕೊಂಡು ನರೇಗಾ ಕೆಲಸ ಕೈಗೊಳ್ಳಲು ಅನುಮತಿ ನೀಡಿದೆ. 2020-21ನೇ ಸಾಲಿನಲ್ಲಿ ರಾಜ್ಯಕ್ಕೆ 13 ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ ನೀಡಲಾಗಿತ್ತು. ಈಗಾಗಲೇ 14.87 ಕೋಟಿ ಮಾನವದಿನಗಳನ್ನು ಸೃಜಿಸಿ ಶೇ 114ರಷ್ಟು ಪ್ರಗತಿ ಸಾಧಿಸಲಾಗಿದೆ. ಪ್ರಗತಿ ಸಾಧನೆಗಾಗಿ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ₹ 800 ಕೋಟಿ ನೀಡಿದೆ ಎಂದರು.

ಪ್ರಸಕ್ತ ಸಾಲಿಗೆ 13 ಕೋಟಿ ಮಾನವ ದಿನಗಳ ಗುರಿ ನಿಗದಿಯಾಗಿದೆ. ಪ್ರತಿದಿನಕ್ಕೆ ಸರಾಸರಿ 9 ಲಕ್ಷ ಮಾನವ ದಿನಗಳಂತೆ ಈಗಾಗಲೇ 1.98 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. 2021ರ ಏಪ್ರಿಲ್‌ನಿಂದ ಕೂಲಿ ಮೊತ್ತ ಹೆಚ್ಚಳವಾಗಿದೆ. ಪ್ರತಿದಿನ ₹ 289 ಹಾಗೂ ಸಲಕರಣಾ ವೆಚ್ಚ ₹ 10 ನೀಡಲಾಗುತ್ತಿದೆ. 100 ದಿನಗಳು ಕೆಲಸ ಮಾಡಿದರೆ ಪ್ರತಿ ಕಾರ್ಮಿಕ ₹ 29,900 ಆದಾಯ ಗಳಿಸಬಹುದಾಗಿದೆ ಎಂದು ವಿವರ ನೀಡಿದರು.

ADVERTISEMENT

ಪ್ರಸಕ್ತ ಸಾಲಿನಲ್ಲಿ 87,453 ಕುಟುಂಬಗಳಿಗೆ ಹೊಸ ಜಾಬ್‌ ಕಾರ್ಡ್‌ ನೀಡಲಾಗಿದೆ. 2,29,089 ಜನರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಕೋವಿಡ್‌ನಿಂದ ಸಾಕಷ್ಟು ಜನರು ನಗರ ತೊರೆದು ಗ್ರಾಮೀಣ ಪ್ರದೇಶಕ್ಕೆ ಹಿಂದಿರುಗಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.