
ಶಿವಮೊಗ್ಗ: ‘ಬಾಲ್ಯದಲ್ಲಿಯೇ ಇಂಗ್ಲಿಷ್ ಮಾಧ್ಯಮ ಹೇರದೇ, ಮಕ್ಕಳಿಗೆ ತಿಳಿಯುವ ಮಾತೃಭಾಷೆಯಲ್ಲಿ ಶಿಕ್ಷಣ ನೀಡಿ’ ಎಂದು ಜಾವಳ್ಳಿಯ ಜ್ಞಾನದೀಪ ಶಾಲಾ ವಿದ್ಯಾರ್ಥಿ ಪಿ.ಬಿ.ಶ್ರೀಕಾಂತ ಒತ್ತಾಯಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಗುರುವಾರ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ 21ನೇ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ದೇಶದ ಭಾಷಾ ಪರಂಪರೆಯಲ್ಲಿಯೇ ಅತ್ಯಂತ ಸತ್ವಯುತ ಭಾಷೆ ಕನ್ನಡ. ಅಂತಹ ಅದ್ಭುತವಾದ ಭಾಷೆಯಲ್ಲಿ ನಮಗೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಿಗಬೇಕು. ಸರ್ಕಾರಿ ಶಾಲೆಗಳಲ್ಲಿ ಕಟ್ಟುನಿಟ್ಟಾಗಿ ಕನ್ನಡ ಕಲಿಸುವ ಕೆಲಸವಾಗಬೇಕು. ಶಿಕ್ಷಕರಿಗೆ ಹಾಲು, ಮೊಟ್ಟೆ, ಬಿಸಿಯೂಟದ ಜಂಜಾಟ ಬಿಡಿಸಿ, ಉತ್ತಮ ಪಾಠ ಪ್ರವಚನದಲ್ಲಿ ತೊಡಗುವಂತಹ ಜವಾಬ್ದಾರಿ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಆಧುನಿಕ ಕಾಲಘಟ್ಟದಲ್ಲೂ ಮಲೆನಾಡಿನ ಹೆಣ್ಣುಮಕ್ಕಳು ಶಿಕ್ಷಣಕ್ಕಾಗಿ ಕಿಲೋಮೀಟರ್ಗಟ್ಟಲೇ ಕ್ರಮಿಸಬೇಕಿದೆ. ಅಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕುವತ್ತ ಸರ್ಕಾರ ಗಮನಹರಿಸಲಿ ಎಂದು ಮನವಿ ಮಾಡಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜೆ.ಹಂಸಿಕಾ ಮಾತನಾಡಿ, ‘ಶಾಲಾ ಹಂತದಲ್ಲಿ ಮಕ್ಕಳ ಸಮ್ಮೇಳನದಂತಹ ಅವಕಾಶ ಸಿಗುವುದರಿಂದ ನಮ್ಮೊಳಗೆ ಸಾಹಿತ್ಯ ಬಿತ್ತುವ ಕೆಲಸವಾಗುತ್ತಿದೆ’ ಎಂದರು.
ಆದಿಚುಂಚನಗಿರಿ ಮಠದ ನಾದಮಯಾನಂದನಾಥ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಬಿಇಒ ರಮೇಶ್ ನಾಯಕ್ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಿ. ಮಂಜುನಾಥ ಆಶಯ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಕವಿಗೋಷ್ಠಿ ಅಧ್ಯಕ್ಷೆ ಬಿ.ಎಲ್.ರುಕ್ಮಿಣಿ, ಕಥಾಗೋಷ್ಠಿ ಅಧ್ಯಕ್ಷೆ ಸಿ.ಕವಿತಾ, ಪ್ರಬಂಧ ಗೋಷ್ಠಿ ಅಧ್ಯಕ್ಷೆ ಕೆ.ಸಾಹಿತ್ಯ, ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಭದ್ರಾವತಿಯ ಸುಧಾಮಣಿ ವೆಂಕಟೇಶ್, ಸೊರಬದ ಶಂಕರ್ ಶೇಟ್, ಸಾಗರದ ಸದಾನಂದ ಶರ್ಮ, ಶಿಕಾರಿಪುರದ ಕೆ.ಎಸ್.ಹುಚ್ರಾಯಪ್ಪ, ಎಸ್.ಎನ್. ನರಸಿಂಹಸ್ವಾಮಿ ಉಪಸ್ಥಿತರಿದ್ದರು.
ಎಂ.ನವೀನ್ ಕುಮಾರ್ ಸ್ವಾಗತಿಸಿ, ಮಹಾದೇವಿ ನಿರೂಪಿಸಿ, ಪಿ.ಕೆ. ಸತೀಶ್ ವಂದಿಸಿದರು. ಇದೇ ವೇಳೆ ಸಹ್ಯಾದ್ರಿ ರಂಗತರಂಗ ತಂಡದಿಂದ ಕುವೆಂಪು ರಚಿತ ‘ಬೊಮ್ಮನಹಳ್ಳಿ ಕಿಂದರಜೋಗಿ’ ನಾಟಕ ಪ್ರದರ್ಶಿಸಲಾಯಿತು.
ಅರಳಿದ ಮಕ್ಕಳ ಕವಿಮನ ಎಸೆಯುತ್ತಿದ್ದಾರೆ ಕಸವನ್ನು... ಕಳೆದುಕೊಳ್ಳುತ್ತೇವೆ ಉತ್ತಮ ಪರಿಸರವನ್ನು...
ಮಕ್ಕಳು ತಮ್ಮ ಕವನ ವಾಚಿಸುತ್ತಿದ್ದರೆ ಇಡೀ ಸಭಾಂಗಣ ಮೌನದಿ ಕಾವ್ಯಪರವಶವಾಗಿತ್ತು. ನಮ್ಮ ಊರು ಮೆಚ್ಚಿದ ಪುಸ್ತಕ ದೇಶ ನಾಡು ನುಡಿ ಸೇರಿದಂತೆ ತಮ್ಮ ನಡುವೆ ಇರುವ ಅನೇಕ ವಾಸ್ತವ ಸಮಸ್ಯೆಗಳನ್ನು ತಮ್ಮ ಕವನದ ಮೂಲಕ ಕಟ್ಟಿಕೊಡುವಲ್ಲಿ ಮಕ್ಕಳು ಯಶಸ್ವಿಯಾಗಿದ್ದರು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಕಥೆ ಕಾವ್ಯ ಪ್ರಬಂಧ ಗೋಷ್ಟಿಗಳಲ್ಲಿ ಉತ್ಸುಕರಾಗಿ ಭಾಗವಹಿಸಿದ್ದರು. ಮೌಡ್ಯತೆ ಸಾಮಾಜಿಕ ವ್ಯವಸ್ಥೆ ಶ್ರಮಕ್ಕೆ ತಕ್ಕ ಫಲ ಎಂಬ ವಿಭಿನ್ನ ಸಾರಾಂಶ ಹೊಂದಿದ್ದ ಕಥೆಗಳನ್ನು ಮಕ್ಕಳು ವಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.