ADVERTISEMENT

ಲೋಕಸಭೆ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2024, 15:18 IST
Last Updated 10 ಏಪ್ರಿಲ್ 2024, 15:18 IST
ಭದ್ರಾವತಿಯಲ್ಲಿ ರಾಷ್ಟ್ರಭಕ್ತರ ಬಳಗದ ಕಾರ್ಯಾಲಯವನ್ನು ಸೋಮವಾರ ಕೆ.ಎಸ್ ಈಶ್ವರಪ್ಪ ಉದ್ಘಾಟಿಸಿದರು
ಭದ್ರಾವತಿಯಲ್ಲಿ ರಾಷ್ಟ್ರಭಕ್ತರ ಬಳಗದ ಕಾರ್ಯಾಲಯವನ್ನು ಸೋಮವಾರ ಕೆ.ಎಸ್ ಈಶ್ವರಪ್ಪ ಉದ್ಘಾಟಿಸಿದರು   

ಭದ್ರಾವತಿ: ‘ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ. ಚುನಾವಣೆ ಬಳಿಕ ಕುಟುಂಬ ರಾಜಕಾರಣ ಮುಕ್ತಾಯಗೊಳ್ಳಲಿದೆ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ. ಎಸ್ ಈಶ್ವರಪ್ಪ ಭವಿಷ್ಯ ನುಡಿದರು.

ನಗರದ ಚನ್ನಗಿರಿ ರಸ್ತೆಯಲ್ಲಿ ಸೋಮವಾರ ರಾಷ್ಟ್ರಭಕ್ತ ಬಳಗದ ನೂತನ ಚುನಾವಣಾ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ನಮ್ಮ ಹೋರಾಟ ಪಕ್ಷದ ವಿರುದ್ಧವಲ್ಲ, ಪಕ್ಷದಲ್ಲಿ ಕೆಲವರು ನಡೆಸುತ್ತಿರುವ ಷಡ್ಯಂತ್ರಗಳ ವಿರುದ್ಧ’ ಎಂದರು. 

‘ಬಿಜೆಪಿಯಲ್ಲಿ ಹಿಂದುಳಿದವರು ಸೇರಿದಂತೆ ಯಾವ ನಾಯಕರನ್ನು ಸಹ ಬೆಳೆಯಲು ಬಿಡಲಿಲ್ಲ. ಪಕ್ಷದ ನಿಷ್ಠಾವಂತ ಕೆಲವು ನಾಯಕರನ್ನು ತುಳಿಯುವ ಮೂಲಕ ಪಕ್ಷವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು. 

ADVERTISEMENT

‘ವಿಧಾನಸಭೆ ಅಥವಾ ಲೋಕಸಭೆಗೆ ಆಯ್ಕೆಯಾದರೂ ಅಭಿವೃದ್ಧಿ ಕೆಲಸಗಳನ್ನು ಹೇಗೆ ಕೈಗೊಳ್ಳಬೇಕು ಎಂಬುದು ಗೊತ್ತಿದೆ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಜನರು ನನ್ನನ್ನು ನಿರಂತರವಾಗಿ ಆಯ್ಕೆ ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಕಾರಣ ನಾನು ಎಲ್ಲಾ ಧರ್ಮದ ಜಾತಿ, ಜನಾಂಗದವರ ಪರವಾಗಿದ್ದು ಸಾಕಷ್ಟು ಅಭಿವೃದ್ಧಿ ಕೆಲಸ ಕೈಗೊಂಡಿದ್ದೇನೆ. ಹೀಗಾಗಿ ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ’ ಎಂದರು.

ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮಾತನಾಡಿ, ‘ಈಶ್ವರಪ್ಪ ಅವರು ಕೇವಲ ಹಿಂದುತ್ವದ ನಾಯಕರಲ್ಲ, ಜನ ಮೆಚ್ಚುವ ನಾಯಕರು. ಎಲ್ಲಾ ಧರ್ಮ, ಜಾತಿ, ಜನಾಂಗದವರ ಪರವಾಗಿರುವವರು. ಇವರ ನಿಲುವನ್ನು ಪಕ್ಷದ ಅನೇಕರ ನಾಯಕರು ಸಹ ಬೆಂಬಲಿಸಿದ್ದಾರೆ. ಇಂತಹ ನಾಯಕರ ಗೆಲುವಿಗಾಗಿ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು.

ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಎಂ. ಪ್ರಭಾಕರ್, ತೇಜಸ್, ಮಂಜ ನಾಯಕ್, ಬಾಬು, ಬಸವರಾಜ್, ರಾಘವೇಂದ್ರ, ಕರಿಬಸಪ್ಪ, ಮಂಡಲಕೊಪ್ಪ, ಗಂಗಾಧರ್, ಬಿ.ವಿ ಚಂದನ್ ರಾವ್, ನಿಂಗೋಜಿ ರಾವ್, ಸಂತೋಷ್ ಸೇರಿದಂತೆ ಹಲವರು ಹಾಜರಿದ್ದರು. ಮುಖಂಡರಾದ ಬಿ.ಎಸ್ ನಾರಾಯಣಪ್ಪ ಪ್ರಾಸ್ತಾವಿಕ ನುಡಿಗಳನಾಡಿದರು. ವಿಜಯ್ ಸಿದ್ದಾರ್ಥ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.