ತೀರ್ಥಹಳ್ಳಿ: ಮಾನಸಿಕ ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಪ್ರೀತಿಯ ಆರೈಕೆ ಅಗತ್ಯವಿದೆ. ಅಂತಹ ಕಾಳಜಿಪೂರ್ಣ ನಿಮ್ಹಾನ್ಸ್ ಸಂಸ್ಥೆಯ ಪ್ರಯತ್ನದಿಂದ ಮಾನಸಿಕ ರೋಗಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ವೈದ್ಯ ಡಾ.ಯು.ಅರುಣಾಚಲ ಹೇಳಿದರು.
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಬುಧವಾರ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ಬೆಂಗಳೂರಿನ ನಿಮ್ಹಾನ್ಸ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು.
ಮನಸ್ಸಿನ ಮೇಲೆ ಹಿಡಿತ ಸಾಧಿಸಿ, ಅಸೆಗೆ ಕಡಿವಾಣ ಹಾಕಿಕೊಳ್ಳಬೇಕು. ಮದ್ಯ ವ್ಯಸನಿಗಳ ಸಂಖ್ಯೆ ಹೆಚ್ಚಿದಂತೆ ರೋಗಿಗಳ ಸಂಖ್ಯೆ ಹೆಚ್ಚುತ್ತದೆ. ಮದ್ಯ ವ್ಯವಹಾರವನ್ನು ಸರ್ಕಾರ ನಿಯಂತ್ರಿಸಬೇಕು. ವಿದ್ಯಾರ್ಥಿಗಳಿಗೆ ಸುಲಭವಾಗಿ ಮಾದಕ ಪದಾರ್ಥಗಳು ಸಿಗದಂತೆ ಎಚ್ಚರ ವಹಿಸಬೇಕು. ವ್ಯಸನಗಳ ದುಷ್ಪರಿಣಾಮದ ಬಗ್ಗೆ ಎಳವೆಯಲ್ಲಿಯೇ ಜಾಗೃತಿ ಮೂಡಿಸಬೇಕು ಎಂದರು.
ಔಷಧಗಳ ಅಡ್ಡ ಪರಿಣಾಮ ನಿಯಂತ್ರಿಸಲು ಯೋಗಾಭ್ಯಾಸ ರೂಢಿಸಿಕೊಳ್ಳಬೇಕು. ಯೋಗ, ಆಯುರ್ವೆದದ ಚಿಕಿತ್ಸೆಯನ್ನು ಅರಂಭದಲ್ಲೇ ಅನುಸರಿಸುವುದರಿಂದ ಔಷಧದಿಂದ ಆಗುವ ಹಾನಿ ತಡೆಯಬಹುದು. ಚಿಕ್ಕ ಸಮಸ್ಯೆಗೂ ಆಯುರ್ವೇದ ಉತ್ತಮ ಎಂದು ನಿಮ್ಹಾನ್ಸ್ ಇಂಟಿಗ್ರೇಟಿವ್ ಔಷಧ ವಿಭಾಗದ ಮುಖ್ಯಸ್ಥ ಡಾ. ಶಿವರಾಂ ವಾರಂಬಳ್ಳಿ ಹೇಳಿದರು.
‘ಮಾನಸಿಕ ಆರೋಗ್ಯವು ಸಮುದಾಯದ ಸಂಯುಕ್ತ ಹೊಣೆಗಾರಿಕೆಯಾಗಿದೆ” ಎಂದು ಮನೋವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನವೀನ್ ಕುಮಾರ್ ಹೇಳಿದರು.
“ಕಳೆದ 20 ವರ್ಷಗಳಿಂದ 5 ಸಾವಿರಕ್ಕೂ ಹೆಚ್ಚು ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 495 ಮಂದಿ ತೀವ್ರ ತರದ ರೋಗಿಗಳಾಗಿದ್ದು ಅವರಿಗೆ ಚಿಕಿತ್ಸೆಯ ಜೊತೆಗೆ ಪುನವರ್ಸತಿ ಕಲ್ಪಿಸಲಾಗಿದೆ ಎಂದು ಮನಶಾಸ್ತ್ರ ವಿಭಾಗದ ಕೆ.ಸುರೇಶ್ ತಿಳಿಸಿದರು.
ನಿಮ್ಹಾನ್ಸ್ ಸಂಸ್ಥೆಯ ಯಸ್ ಯೋಜನೆಯ ಪ್ರಧಾನ ಸಂಶೋಧಕಿ ಡಾ. ಆರತಿ ಜಗನ್ನಾಥನ್, ಶಿವಮೊಗ್ಗ ಸಿಮ್ಸ್ ಮನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಾಮಪ್ರಸಾದ್ ಕೆ.ಎಸ್. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.