ADVERTISEMENT

ಸಾವಯವ ಕೃಷಿ ಸಾಧನೆಯಲ್ಲ, ಜೀವನದ ಶೈಲಿ

‘ಪುರುಷೋತ್ತಮ ಸನ್ಮಾನ’ ಸ್ವೀಕರಿಸಿದ ಮಗನ್‌ಭಾಯ್‌ ಹಮೀರ್‌ಭಾಯ್‌

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 6:34 IST
Last Updated 28 ಜನವರಿ 2023, 6:34 IST
ತೀರ್ಥಹಳ್ಳಿಯಲ್ಲಿ ಶುಕ್ರವಾರ ಗುಜರಾತ್‌ನ ಕಛ್‌ ಜಿಲ್ಲೆಯ ನಿಂಗಲ್‌ ಗ್ರಾಮದ ಸಾವಯವ ಕೃಷಿಕ ಮಗನ್‌ಭಾಯ್‌ ಹಮೀರ್‌ಭಾಯ್‌ ಅವರಿಗೆ ‘ಪುರುಷೋತ್ತಮ ಸನ್ಮಾನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತೀರ್ಥಹಳ್ಳಿಯಲ್ಲಿ ಶುಕ್ರವಾರ ಗುಜರಾತ್‌ನ ಕಛ್‌ ಜಿಲ್ಲೆಯ ನಿಂಗಲ್‌ ಗ್ರಾಮದ ಸಾವಯವ ಕೃಷಿಕ ಮಗನ್‌ಭಾಯ್‌ ಹಮೀರ್‌ಭಾಯ್‌ ಅವರಿಗೆ ‘ಪುರುಷೋತ್ತಮ ಸನ್ಮಾನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.   

ತೀರ್ಥಹಳ್ಳಿ: ಸಾರಜನಕ, ಇಂಗಾಲ, ಗಾಳಿ, ನೀರಿನ ಸದ್ಬಳಕೆಯಿಂದ ಸಾವಯವ ಕೃಷಿ ಸುಲಭ. ಸಾವಯವ ಕೃಷಿ ಜೀವನ ಶೈಲಿ ಸಂಸ್ಕೃತಿ, ಸಂಸ್ಕಾರವೇ ಹೊರತು ಸಾಧನೆಯಲ್ಲ ಎಂದು ಗುಜರಾತ್‌ ಸಾವಯವ ಕೃಷಿಕ ಮಗನ್‌ಭಾಯ್‌ ಹಮೀರ್‌ಭಾಯ್‌ ಹೇಳಿದರು.

ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಪುರುಷೋತ್ತಮರಾವ್‌ ಕೃಷಿ ಸಂಶೋಧನಾ ಪ್ರತಿಷ್ಠಾನದಿಂದ ಕೃಷಿ ಋಷಿ ಎಂ. ಪುರುಷೋತ್ತಮರಾವ್‌ ನೆನಪಿನಲ್ಲಿ ನೀಡುವ ‘ಪುರುಷೋತ್ತಮ ಸನ್ಮಾನ’ ಪ್ರಶಸ್ತಿಯನ್ನು ಪತ್ನಿ ಧನುಬೆನ್‌ ಅವರೊಂದಿಗೆ ಸ್ವೀಕರಿಸಿ ಮಾತನಾಡಿದರು.

‘ಸನ್ಮಾನ, ಪದವಿ, ಪ್ರತಿಷ್ಠೆ, ಬಲಪ್ರಯೋಗ ಬದುಕು ಕಾಲ್ಪನಿಕ. ಸಾವಯವ ಕೃಷಿಯೇ ಜೀವನಕ್ಕೆ ಮೌಲ್ಯ. ಸಾವಯವ ಕೃಷಿ ಆರಂಭಿಸಿದ ನಾಲ್ಕೈದು ವರ್ಷ ಕಷ್ಟ ಆಗಿತ್ತು. ಇದೀಗ ಇಳುವರಿ ಚೆನ್ನಾಗಿ ಬಂದಿದ್ದು, ನಮ್ಮ ಕುಟುಂಬ ನಿತ್ಯ ಸಂಶೋಧನಾ ಬದುಕನ್ನು ಅನುಸರಿಸುತ್ತಿದೆ’ ಎಂದರು.

ADVERTISEMENT

‘ನಮ್ಮ ನೆಲದ ಸ್ಥಿತಿಗತಿಗೆ ಅನುಗುಣವಾಗಿ ದೇಸಿ, ಸ್ಥಳೀಯ ಬೆಳೆಗಳನ್ನು ಬೆಳೆಯುವುದರಿಂದ ಹವಾಮಾನ ವೈಪರೀತ್ಯ ತಡೆಯಬಹುದು. ಪಕ್ಷಿ, ಪ್ರಾಣಿಗಳ ಜೀವನ ಶೈಲಿ ಅಧ್ಯಯನ ಮಾಡುವುದರಿಂದ ಪರಿಸರದಲ್ಲಿ ಮುಂದೆ ನಡೆಯಬಹುದಾದ ಬದಲಾವಣೆ ಗಮನಿಸಬಹುದು’ ಎಂದು ಕೃಷಿಯಲ್ಲಿನ ತಮ್ಮ ಅನುಭವ ತೆರೆದಿಟ್ಟರು.

‘ಹೆಚ್ಚು ಬೆಳೆಯಿರಿ (ಗ್ರೋ ಮೋರ್) ಎನ್ನುವ ಹೆಸರಿನಲ್ಲಿ ಭೂಮಿಗೆ ವಿಷ ಉಣಿಸುತ್ತಿದ್ದೇವೆ. ರೈತ ಸ್ವಾರ್ಥಿಯಾದ ಪರಿಣಾಮ ಮೂಲ ಕೃಷಿ ಪದ್ಧತಿ ನಶಿಸಿದೆ’ ಎಂದು ಆರ್‌ಎಸ್‌ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ್‌ ಭೇಂಡೆ ಅಭಿಪ್ರಾಯಪಟ್ಟರು.

ಗೃಹಸಚಿವ ಆರಗ ಜ್ಞಾನೇಂದ್ರ, ಪ್ರತಿಷ್ಠಾನದ ಅಧ್ಯಕ್ಷ ವರದಾಚಾರ್‌ ಎಸ್‌. ಇದ್ದರು. ಸಾವಯವ ಉತ್ಪನ್ನಗಳ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.