ADVERTISEMENT

ಶಿವಮೊಗ್ಗ: ಏಳು ವರ್ಷಗಳಲ್ಲೇ ಧ್ವನಿ ಕಳೆದುಕೊಂಡ ‘ಪಿಎಂ ಆವಾಸ್’

ಸಾಲ ಕೊಡಲು ಬ್ಯಾಂಕ್‌ಗಳ ಹಿಂದೇಟು; ನನಸಾಗದ ಬಡವರ ಸ್ವಂತ ಸೂರಿನ ಕನಸು

ವೆಂಕಟೇಶ ಜಿ.ಎಚ್.
Published 4 ಡಿಸೆಂಬರ್ 2024, 6:34 IST
Last Updated 4 ಡಿಸೆಂಬರ್ 2024, 6:34 IST
ಶಿವಮೊಗ್ಗದ ಶಾಂತಿ ನಗರದಲ್ಲಿ ನಿರ್ಮಾಣ ಹಂತದಲ್ಲಿಯೇ ಸ್ಥಗಿತಗೊಂಡಿರುವ ಪಿ.ಎಂ.ಆವಾಸ್ ಯೋಜನೆಯಡಿ ಮಂಜೂರಾದ ಮನೆ
ಶಿವಮೊಗ್ಗದ ಶಾಂತಿ ನಗರದಲ್ಲಿ ನಿರ್ಮಾಣ ಹಂತದಲ್ಲಿಯೇ ಸ್ಥಗಿತಗೊಂಡಿರುವ ಪಿ.ಎಂ.ಆವಾಸ್ ಯೋಜನೆಯಡಿ ಮಂಜೂರಾದ ಮನೆ   

ಶಿವಮೊಗ್ಗ: ಸಾಲ ಕೊಡಲು ಬ್ಯಾಂಕ್‌ಗಳ ಹಿಂದೇಟು, ನಿಧಾನಗತಿಯ ಪ್ರಕ್ರಿಯೆ, ಫಲಾನುಭವಿಗಳ ತಪ್ಪು ಗ್ರಹಿಕೆ ಹಾಗೂ ಗುತ್ತಿಗೆದಾರರ ನಿರಾಸಕ್ತಿಯ ಕಾರಣ ಪ್ರಧಾನಮಂತ್ರಿ ಆವಾಸ್‌ (ಪಿ.ಎಂ ಆವಾಸ್) ಯೋಜನೆಯಡಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ (ಸ್ಲಂ ಬೋರ್ಡ್‌) ಬಡವರಿಗೆ ಸ್ವಂತ ಸೂರು ಕಟ್ಟಿಸಿಕೊಡುವ ಕನಸಿಗೆ ಜಿಲ್ಲೆಯಲ್ಲಿ ಹಿನ್ನಡೆಯಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಫಲಾನುಭವಿಗೆ ಮನೆ ಕಟ್ಟಿಕೊಡುವ ಈ ಯೋಜನೆಯನ್ನು 2017–18ರಲ್ಲಿ ಪರಿಚಯಿಸಲಾಗಿತ್ತು. ಯೋಜನೆಯಡಿ ಇಲ್ಲಿಯವರೆಗೆ ಶಿವಮೊಗ್ಗ ಜಿಲ್ಲೆಗೆ 4,928 ಮನೆಗಳು ಮಂಜೂರು ಆಗಿವೆ. ಇದರಲ್ಲಿ ಏಳು ವರ್ಷಗಳಲ್ಲಿ ಬರೀ 1,145 ಮನೆಗಳನ್ನು ಕಟ್ಟಲು ಮಾತ್ರ ಸಾಧ್ಯವಾಗಿದೆ.

ಯೋಜನೆಯಡಿ ಮನೆ ಕಟ್ಟಿಸಿಕೊಡಲು ₹7 ಲಕ್ಷ ನಿಗದಿ ಮಾಡಲಾಗಿದೆ. ಇದರಲ್ಲಿ ಸಾಮಾನ್ಯ ವರ್ಗದ ಫಲಾನುಭವಿಗೆ ₹2.70 ಲಕ್ಷ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗೆ ₹3.50 ಲಕ್ಷ ನೆರವು ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ₹1.50 ಲಕ್ಷ ಕೊಟ್ಟರೆ ರಾಜ್ಯ ಸರ್ಕಾರ ಸಾಮಾನ್ಯ ವರ್ಗದವರಿಗೆ ₹1.20 ಲಕ್ಷ ಹಾಗೂ ಪರಿಶಿಷ್ಟ ಜಾತಿ–ಪಂಗಡದವರಿಗೆ ₹2 ಲಕ್ಷ ನೆರವು ಕೊಡುತ್ತಿದೆ. ಉಳಿದ ಹಣವನ್ನು ಫಲಾನುಭವಿ ಭರಿಸಬೇಕಿದೆ. ಅವರಿಗೆ ಬ್ಯಾಂಕ್‌ನಲ್ಲಿ ಶೇ 6.5 ಬಡ್ಡಿ ದರದಲ್ಲಿ ಸಾಲ ಪಡೆಯಲು ಕೊಳೆಗೇರಿ ಅಭಿವೃದ್ಧಿ ಮಂಡಳಿ ನೆರವಾಗುತ್ತದೆ.

ADVERTISEMENT

ಫಲಾನುಭವಿಗಳ ಮನಃಸ್ಥಿತಿಯೂ ಅಡ್ಡಿ: ಈ ಹಿಂದಿನ ವಸತಿ ಯೋಜನೆಗಳಲ್ಲಿ ಸಾಮಾನ್ಯ ಫಲಾನುಭವಿಗಳು ಶೇ 15 ಹಾಗೂ ಪರಿಶಿಷ್ಟ ಜಾತಿ/ಪಂಗಡವರು ಶೇ 10ರಷ್ಟು ಪಾಲು ಕೊಡಬೇಕಿತ್ತು. ಈ ಯೋಜನೆಯಡಿ ಶೇ 50ರಷ್ಟು ಅವರೇ ಪಾವತಿಸಬೇಕಿದೆ. ಹಳೆಯ ಯೋಜನೆಗಳಲ್ಲಿ ಫಲಾನುಭವಿಗಳ ಪಾಲಿನ ವಂತಿಗೆಯನ್ನು ಸರ್ಕಾರ ಮನ್ನಾ ಮಾಡುತ್ತಿತ್ತು. ಆದರೆ ಈ ಯೋಜನೆಯಲ್ಲಿ ಅಂತಹ ಯಾವುದೇ ಪ್ರಸ್ತಾಪ ಇಲ್ಲ. ಹಾಗಿದ್ದರೂ ಬ್ಯಾಂಕ್‌ನಿಂದ ಸಾಲ ಪಡೆದರೆ ಅದನ್ನು ಸರ್ಕಾರ ಮನ್ನಾ ಮಾಡಲಿದೆ ಎಂದು ವಂತಿಗೆ ಹಣಕ್ಕೆ ಸಾಲವನ್ನೇ ಅವಲಂಬಿಸುತ್ತಿದ್ದಾರೆ. ಇದೂ ಕೂಡ ಯೋಜನೆಯ ಹಿನ್ನಡೆಗೆ ಕಾರಣ ಎಂಬುದು ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳ ಅಳಲು.

ಕಾಮಗಾರಿ ಆರಂಭವೇ ಆಗಿಲ್ಲ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಶಿಕಾರಿಪುರ–ಶಿರಾಳಕೊಪ್ಪಕ್ಕೆ 1,000 ಮನೆಗಳನ್ನು ಮಂಜೂರು ಮಾಡಿದ್ದರು. ಚುನಾವಣೆ ನೀತಿ–ಸಂಹಿತೆ ಶುರುವಾಗುತ್ತಿದ್ದಂತೆಯೇ ಅದು ನನೆಗುದಿಗೆ ಬಿದ್ದಿದೆ. ಭದ್ರಾವತಿಯಲ್ಲಿ 500ರ ಪೈಕಿ 300 ಮನೆಗಳನ್ನು ಕಟ್ಟಿಸಿಕೊಡಲಾಯಿತು. ಉಳಿದ 200 ತೀರ್ಥಹಳ್ಳಿಗೆ ವರ್ಗಾಯಿಸಲಾಗಿತ್ತು. ಆದರೆ ಆ ಮನೆಗಳನ್ನು ಮತ್ತೆ ಭದ್ರಾವತಿಗೆ ಕೊಡಲಾಗಿದೆ. ತಾಂತ್ರಿಕ ತೊಂದರೆಯಿಂದ ಅವುಗಳ ಕಾಮಗಾರಿ ಆರಂಭವಾಗಿಲ್ಲ ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿ ಪ್ರಸನ್ನಕುಮಾರ್ ಹೇಳುತ್ತಾರೆ.

ಸಿಬಿಲ್ ಸ್ಕೋರ್ ಲೇಔಟ್ ಪ್ಲಾನ್ !..

ನಗರ ಪಟ್ಟಣ ಪ್ರದೇಶದಲ್ಲಿ ಯೋಜನೆಯಡಿ ಹೆಚ್ಚಾಗಿ ಕೊಳೆಗೇರಿಗಳಲ್ಲಿ ವಾಸಿಸುವವರೇ ಮನೆ ಕೇಳಿಕೊಂಡು ಅರ್ಜಿ ಹಾಕುತ್ತಾರೆ. ಅವರಿಗೆ ಸಾಲ ಮಂಜೂರು ಮಾಡಲು ಬ್ಯಾಂಕ್‌ನವರು ಸಿಬಿಲ್ ಸ್ಕೋರ್ ಲೇಔಟ್ ಪ್ಲಾನ್ ಆದಾಯ ಪ್ರಮಾಣಪತ್ರ ಜಾಗಕ್ಕೆ ಸಂಬಂಧಿಸಿದಂತೆ 15 ವರ್ಷಗಳ ಇಸಿ ಕೇಳುತ್ತಾರೆ.

‘ಬಹುತೇಕ ಕೊಳೆಗೇರಿಗಳು ಯೋಜಿತವಲ್ಲ. ಅಡ್ಡಾದಿಡ್ಡಿ ಬೆಳೆದಿರುತ್ತವೆ. ಅಲ್ಲಿ ವಾಸವಿರುವ ಫಲಾನುಭವಿ ಲೇಔಟ್ ಪ್ಲಾನ್ ಎಲ್ಲಿಂದ ತಂದುಕೊಡುವುದು. ಆರ್ಥಿಕವಾಗಿ ಹಿಂದುಳಿದಿರುವ ಅವರಲ್ಲಿ ಬಹುತೇಕರು ಬ್ಯಾಂಕ್ ಅಕೌಂಟ್ ಕೂಡ ತೆರೆದಿರುವುದಿಲ್ಲ. ಅವರಿಂದ ಸಿಬಿಲ್ ಸ್ಕೋರ್ ನಿರೀಕ್ಷಿಸಿದರೆ ಹೇಗೆ?’ ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿ ಪ್ರಶ್ನಿಸುತ್ತಾರೆ.

‘ಬ್ಯಾಂಕ್‌ನವರು ಕೇಳುವ ದಾಖಲೆ ಹೊಂದಿಸಲು ಸಾಧ್ಯವಾಗದೇ ಫಲಾನುಭವಿ ಉತ್ಸಾಹ ಕಳೆದುಕೊಳ್ಳುತ್ತಾರೆ. ಸಾಲ ಕೊಡಿಸಲು ನಾವೂ ಮೂರ್ನಾಲ್ಕು ತಿಂಗಳು ಬ್ಯಾಂಕಿಗೆ ಎಡತಾಕುತ್ತೇವೆ. ನಿಗದಿತ ಅವಧಿಯಲ್ಲಿ ಹಣ ಹೊಂದಿಸಲು ಆಗೊಲ್ಲ. ಇದರಿಂದ ಕಾಮಗಾರಿ ವೇಗ ಪಡೆಯೊಲ್ಲ. ನಿರ್ಮಾಣ ವೆಚ್ಚ (ಎಸ್‌ಆರ್‌ ರೇಟ್‌) ಹೆಚ್ಚಾಯಿತು ಎಂದು ಗುತ್ತಿಗೆದಾರರು ಕೂಡ ಮನೆ ಕಟ್ಟಲು ನಿರಾಕರಿಸುತ್ತಿದ್ದಾರೆ. ಕಾಮಗಾರಿ ಆರಂಭಗೊಂಡ ಮನೆಗಳ ಸ್ಥಿತಿ ಇದಾದರೆ ಇನ್ನೂ ಕೆಲಸ ಆರಂಭಿಸದ ಮನೆಗಳಿಗೆ ಮಂಜೂರಾದ ಹಣ ವಾಪಸ್ ಹೋಗುತ್ತಿದೆ’ ಎಂದು ವಾಸ್ತವ ಸ್ಥಿತಿ ಬಿಚ್ಚಿಡುತ್ತಾರೆ.

‘ಪ್ರತೀ ಬ್ಯಾಂಕಿಗೂ ನಿರ್ದಿಷ್ಟ ಕಾಲಮಿತಿಯಡಿ ಸಾಲ ವಿತರಣೆಗೆ ಗುರಿ ನೀಡಿದರೆ ಮನೆ ನಿರ್ಮಾಣ ಕಾರ್ಯ ವೇಗ ಪಡೆದುಕೊಳ್ಳಲಿದೆ’ ಎನ್ನುತ್ತಾರೆ.

ಲೀಡ್ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಸಭೆ ಕರೆದು ಯೋಜನೆ ವೇಗ ಪಡೆಯಲು ಅಡ್ಡಿಯಾಗಿರುವ ಸಂಗತಿಗಳನ್ನು ಪರಿಹರಿಸುವೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದಲೂ ಮಾಹಿತಿ ಪಡೆಯುವೆ.
–ಎನ್.ಹೇಮಂತ್, ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.