ADVERTISEMENT

ವಿಜ್ಞಾನ ವಿಭಾಗ | ಪ್ರಥಮ ರ‍್ಯಾಂಕ್ ಪಡೆದ ದೀಕ್ಷಾಗೆ ಎಂಜಿನಿಯರಿಂಗ್ ಓದುವ ಆಸೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 9:59 IST
Last Updated 8 ಏಪ್ರಿಲ್ 2025, 9:59 IST
   

ಶಿವಮೊಗ್ಗ: ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿರುವ ತೀರ್ಥಹಳ್ಳಿಯ ಮೇಲಿನಕುರುವಳ್ಳಿಯ ವಾಗ್ದೇವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆರ್. ದೀಕ್ಷಾ ಅವರಿಗೆ ಮುಂದೆ ಎಂಜಿನಿಯರಿಂಗ್ ಓದುವ ಆಸೆ.

ಮಂಗಳವಾರ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯಲ್ಲಿರುವ ದೀಕ್ಷಾ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು.

ವಾಗ್ದೇವಿ ಕಾಲೇಜಿನ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು, ಸಂಬಂಧಿಗಳು, ಕುಟುಂಬದ ಸ್ನೇಹಿತರು, ಅಕ್ಕಪಕ್ಕದ ಮನೆಯವರು ಹಾಗೂ ಮಾಧ್ಯಮದವರು ದೀಕ್ಷಾ ಮನೆಗೆ ಭೇಟಿ ನೀಡಿ ಅಭಿನಂದಿಸಿದರು. ಸಿಹಿ ತಿನ್ನಿಸಿ ಶುಭ ಹಾರೈಸಿದರು.

ADVERTISEMENT

'ರಾಜ್ಯಕ್ಕೆ ಮೊದಲ ರ‍್ಯಾಂಕ್ ಬರುವ ಫಲಿತಾಂಶ ನಿರೀಕ್ಷಿಸಿರಲಿಲ್ಲ. ನಾನು ಪ್ರತಿದಿನ ಓದುತ್ತಿದ್ದೆ. ಕಾಲೇಜಿನಲ್ಲಿ ಉಪನ್ಯಾಸಕರು ಚೆನ್ನಾಗಿ ಕಲಿಸುತ್ತಿದ್ದರು. ಯಾವುದೇ ಡೌಟುಗಳಿದ್ದರು ತಿಳಿಸಿ ಕೊಡುತ್ತಿದ್ದರು. ಅಲ್ಲದೆ ಯುಟ್ಯೂಬ್‌ನಲ್ಲೂ ವಿಷಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ನೋಡುತ್ತಿದ್ದೆ. ಆದ್ದರಿಂದ ವಿಷಯಗಳು ಹೆಚ್ಚು ಮನದಟ್ಟಾದವು. ಇದು ಪರೀಕ್ಷೆಯಲ್ಲಿ ಅನುಕೂಲವಾಯಿತು' ಎಂದು ದೀಕ್ಷಾ 'ಪ್ರಜಾವಾಣಿ' ಗೆ ಪ್ರತಿಕ್ರಿಯಿಸಿದರು.

ಅಪ್ಪ-ಅಮ್ಮ ಇಬ್ಬರೂ ಶಿಕ್ಷಕರಾಗಿರುವ ಕಾರಣ ನನ್ನ ಓದಿಗೆ ಕೊರತೆ ಆಗದಂತೆ ನೋಡಿಕೊಂಡರು. ಅಲ್ಲದೆ ನನ್ನ ಓದಿನ ವಿಚಾರದಲ್ಲಿ ಯಾವುದೇ ಗೊಂದಲ ಉಂಟಾದರು ಅದನ್ನು ಪರಿಹರಿಸುತ್ತಿದ್ದರು. ಕಾಲೇಜಿನಲ್ಲಿ ಶಿಕ್ಷಕರು ಪ್ರೋತ್ಸಾಹ ಕೊಟ್ಟರು. ಅದರಿಂದಲೇ ಈ ಸಾಧನೆ ಸಾಧ್ಯವಾಯಿತು ಎಂದರು.

ಮಗಳನ್ನು ಅಪ್ಪಿಕೊಂಡು ಸಂಭ್ರಮಿಸಿದೆ: ಉಷಾ

'ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಮಧ್ಯಾಹ್ನ ಫಲಿತಾಂಶ ಚೆಕ್ ಮಾಡಿದಾಗ 599 ಅಂಕ ಬಂದಿರುವುದು ಕಂಡು ನಂಬಲು ಸಾಧ್ಯವಾಗಲಿಲ್ಲ. ಶಾಲೆಯಿಂದ ಅನುಮತಿ ಪಡೆದು ಮನೆಗೆ ಬಂದು ಮಗಳನ್ನು ಅಪ್ಪಿಕೊಂಡು ಸಂಭ್ರಮಿಸಿದೆ' ಎಂದು ದೀಕ್ಷಾ ಅಮ್ಮ ಉಷಾ ಸಂತಸ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.