ADVERTISEMENT

ಸಾಗರ: ‘ಪುನೀತ್ ರಾಜ್‌ಕುಮಾರ್‌ರ ಸದ್ದಿಲ್ಲದ ಸಮಾಜ ಸೇವೆ’

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2021, 5:20 IST
Last Updated 5 ನವೆಂಬರ್ 2021, 5:20 IST
ಸಾಗರದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಈಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿದರು.
ಸಾಗರದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಈಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿದರು.   

ಸಾಗರ: ಯಾವುದೇ ಪ್ರಚಾರದ ಹಿಂದೆ ಬೀಳದೆ ಸದ್ದಿಲ್ಲದೆ ಹಲವು ರೀತಿಯ ಸಮಾಜ ಸೇವೆಯಲ್ಲಿ ತೊಡಗಿದ್ದ ಪುನೀತ್ ರಾಜ್‌ಕುಮಾರ್ ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯವಾದದ್ದು ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಹೇಳಿದರು.

ಇಲ್ಲಿನ ಸೇವಾಸಾಗರ ಶಾಲೆಯ ಅಜಿತ್ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಈಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.

‘ವೃದ್ಧಾಶ್ರಮ, ಅನಾಥಾಶ್ರಮ, ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದು ಸೇರಿ ಹತ್ತು ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ನಿರತರಾಗಿದ್ದ ಪುನೀತ್ ಅವರ ನಿರ್ಗಮನ ಕೇವಲ ಸಿನೆಮಾ ರಂಗಕ್ಕೆ ಮಾತ್ರವಲ್ಲ, ಎಲ್ಲಾ ಕ್ಷೇತ್ರಗಳಿಗೂ ಭರಿಸಲಾಗದ ನಷ್ಟ’ ಎಂದರು.

ADVERTISEMENT

ನಗರಸಭೆ ಉಪಾಧ್ಯಕ್ಷೆ ವಿ.ಮಹೇಶ್, ‘ಕೋವಿಡ್ ಸಂದರ್ಭ ಪುನೀತ್‌ ರಾಜ್‌ಕುಮಾರ್ ಅವರು ಸರ್ಕಾರಕ್ಕೆ ₹ 50 ಲಕ್ಷ ದೇಣಿಗೆ ನೀಡಿದ್ದರು. ಅವರ ಅಕಾಲಿಕ ನಿಧನದಿಂದ ನಾಡಿನ ಎಲ್ಲೆಡೆ ಜನರು ಬೇಸರಕ್ಕೆ ಒಳಗಾಗಿದ್ದಾರೆ. ಅಂತಹ ವ್ಯಕ್ತಿಯನ್ನು ಮತ್ತೆ ಕಲಾವಿದನ ರೂಪದಲ್ಲಿ ಕಾಣುವುದು ಕಷ್ಟ’ ಎಂದು ಹೇಳಿದರು.

ಪರಿಷತ್ತಿನ ನಿಕಟಪೂರ್ವ ತಾಲ್ಲೂಕು ಅಧ್ಯಕ್ಷ ಎಸ್.ವಿ. ಹಿತಕರ ಜೈನ್, ‘ಕುಟುಂಬ ಸಮೇತ ನೋಡಬಹುದಾದ ಸದಭಿರುಚಿಯ ಚಿತ್ರಗಳಲ್ಲಿ ಪುನೀತ್ ರಾಜ್‌ಕುಮಾರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದದ್ದು ವಿಶೇಷವಾಗಿತ್ತು. ಅಪಾರ ಜನಪ್ರಿಯತೆ ಇದ್ದರೂ ಪ್ರಚಾರ ಮತ್ತು ರಾಜಕೀಯದಿಂದ ದೂರ ಉಳಿದ ಕಾರಣ ಜನ ಅವರನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದರು’ ಎಂದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಡಿ. ತುಕಾರಾಮ್, ಸದಸ್ಯರಾದ ಕೆ.ಆರ್. ಗಣೇಶ್ ಪ್ರಸಾದ್, ರಾಜೇಂದ್ರ ಪೈ, ರವಿ ಉಡುಪ, ಬರಹಗಾರತಿರುಮಲ ಮಾವಿನಕುಳಿ ಮಾತನಾಡಿದರು.

ಪ್ರಮುಖರಾದ ಶರಾವತಿ ಸಿ.ರಾವ್, ಸಂತೋಷ್ ಆರ್.ಶೇಟ್, ಉದಯಕಾಮತ್, ಗಣಪತಿ ಶಿರಳಗಿ, ಸುರೇಖ, ಲತಾ, ಪದ್ಮಾ, ರಂಜನ, ಸರೋಜಾ, ಜಿ.ಎಸ್. ವೆಂಕಟೇಶ್, ಶಿವಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.