ADVERTISEMENT

ತುಮರಿ: ಕಲ್ಲಂಗಡಿ ಬೆಳೆಗಾರರ ಕಂಗೆಡಿಸಿದ ವರುಣ

​ಪ್ರಜಾವಾಣಿ ವಾರ್ತೆ
Published 1 ಮೇ 2025, 6:32 IST
Last Updated 1 ಮೇ 2025, 6:32 IST
   

ತುಮರಿ: ಕಳೆದೊಂದು ತಿಂಗಳಿಂದ ಆಗಾಗ ಬೀಳುತ್ತಿರುವ ಮಳೆ ಹಾಗೂ ಮೋಡ ಕವಿದ ವಾತಾವರಣವು ಮಲೆನಾಡಿನ ಕಲ್ಲಂಗಡಿ ಬೆಳೆಗಾರರನ್ನು ಕಂಗೆಡಿಸಿದೆ. ಇದರಿಂದ ಗಿಡಗಳಿಗೆ ಹಾನಿ ಯಾಗಿದ್ದು, ಇಳುವರಿ ಕುಸಿತವಾಗಿದೆ. ಕಟಾವು ಕಾರ್ಯಕ್ಕೂ ಅಡ್ಡಿಯಾಗಿದೆ. 

ಹಿತಮಿತ ತೇವಾಂಶ ಹಾಗೂ ಬಿಸಿಲಿನ ವಾತಾವರಣ ಕಲ್ಲಂಗಡಿ ಬೆಳೆಗೆ ಪೂರಕ. ಈ ಬಾರಿ ಉಂಟಾದ ಹವಾಮಾನ ವೈಪರೀತ್ಯ ಬೆಳೆಗೆ ಮಾರಕವಾಗಿ ಪರಿಣಮಿಸಿದ್ದು, ಶೇ 40ರಷ್ಟು ಇಳುವರಿ ಕುಂಠಿತಗೊಂಡಿದೆ.

ಸಾಗರ ತಾಲ್ಲೂಕಿನಲ್ಲಿ 35 ಹೆಕ್ಟೇರ್‌ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶ ಮತ್ತಷ್ಟು ವಿಸ್ತಾರಗೊಂಡಿದೆ. ಮುಂಗಾರಿನಲ್ಲಿ ಭತ್ತ ಬೆಳೆಯುವ ಇಲ್ಲಿನ ಕಟ್ಟಿನಕಾರು, ಮಾರಲಗೋಡು, ಹೊಸಕೊಪ್ಪ, ಚನ್ನಗೊಂಡ, ಕೋಗಾರು, ಕೊಡಸರ ಭಾಗದ ರೈತರು ಬೇಸಿಗೆಯಲ್ಲಿ ಕಲ್ಲಂಗಡಿ ಬಿತ್ತನೆ ಮಾಡುತ್ತಾರೆ. ಹವಾಮಾನ ವೈಪರೀತ್ಯ ಹಾಗೂ ಸೂಕ್ತ ಬೆಲೆ ಸಿಗದೇ ಇರುವುದು ರೈತರ ನಿದ್ದೆಗೆಡಿಸಿದೆ.

ADVERTISEMENT

ಕರೂರು, ಬಾರಂಗಿ ಹೋಬಳಿ ವ್ಯಾಪ್ತಿಯ ಕೆಲವು ರೈತರು ಪ್ಲಾಸ್ಟಿಕ್‌ ಮಲ್ಚಿಂಗ್ ಮಾಡಿದ್ದರು. ಇನ್ನೂ ಕೆಲವರು ನೀರು ಹಾಯಿಸಿ ಅಧಿಕ ತೇವಾಂಶ ನೀಡಿ ಹೆಚ್ಚಿನ ಇಳುವರಿಯ ನಿರೀಕ್ಷೆಯಲ್ಲಿದ್ದರು. ಆದರೆ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಸುರಿದ ಮಳೆಯಿಂದ ಎಳೆಯ ಹೂ ಹಾಗೂ ಕಾಯಿಗಳು ಉದುರಿದ್ದು, ಇಳುವರಿ ತೀವ್ರವಾಗಿ ಕುಸಿದಿದೆ. 

‘ದಿನವಿಡೀ ಮೋಡ ಕವಿದ ವಾತಾವರಣ ಇದ್ದಿದ್ದರಿಂದ ಆರಂಭದಲ್ಲಿಯೇ ಗಿಡಗಳಿಗೆ ಮುರುಟು ರೋಗ ಬಂದಿತ್ತು. ಹುಳು ಬಾಧೆಯಿಂದ ಇಳುವರಿಯೂ ಕಡಿಮೆಯಾಗಿದೆ’ ಎಂದು ಚನ್ನಗೊಂಡ ಗ್ರಾಮದ ರೈತ ಕೃಷ್ಣಪ್ಪ ನೋವು ತೋಡಿಕೊಂಡರು. 

‘ಮಾರುಕಟ್ಟೆಯಲ್ಲಿ ಕಲ್ಲಂಗಡಿ ಬೆಲೆ ಕೆ.ಜಿ.ಗೆ ₹11 ರಿಂದ ₹13 ಇದೆ. ಆದರೆ, ಬಹುತೇಕರಿಗೆ ಮೊದಲ ಕಟಾವಿನಲ್ಲಿ ಕೆ.ಜಿ.ಗೆ ಸರಾಸರಿ ₹5 ರಿಂದ ₹6 ದರ ಸಿಕ್ಕಿದೆ. ಇದರಿಂದ ಬೇಸರಗೊಂಡ ರೈತರು 2ನೇ ಹಂತದ ಕಟಾವು ಮಾಡಲು ಮುಂದಾಗುತ್ತಿಲ್ಲ. ಕಡಿಮೆ ದರದಿಂದಾಗಿ ಮೊದಲ ಕಟಾವಿನಲ್ಲಿಯೇ ನಮಗೆ ಸಾಕಷ್ಟು ನಷ್ಟವಾಗಿದೆ’ ಎನ್ನುತ್ತಾರೆ ಹಿನ್ನೀರು ಭಾಗದ ರೈತರು. 

‘ಕೆ.ಜಿ.ಗೆ ಕನಿಷ್ಠ ₹10ಕ್ಕಿಂತ ಹೆಚ್ಚು ದರ ಸಿಗಬಹುದೆಂಬ ನಿರೀಕ್ಷೆ ಇತ್ತು. ಎರಡನೇ ಕಟಾವಿಗೆ ಖರೀದಿದಾರರು ಬಾರದೇ ಇರುವುದರಿಂದ ಹಣ್ಣುಗಳು ಹೊಲದಲ್ಲೇ ಕೊಳೆಯುತ್ತಿವೆ. ಅಕಾಲಿಕ ಮಳೆಯ ನೆಪ ಹೇಳಿ ಮಧ್ಯವರ್ತಿಗಳು ಕಡಿಮೆ ದರಕ್ಕೆ ಹಣ್ಣು ಕೇಳುತ್ತಿದ್ದಾರೆ’ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಬಲ ಬೆಲೆ ನೀಡಿ : ಸರ್ಕಾರವು ಭತ್ತ, ಶುಂಠಿ ಹಾಗೂ ಇತರ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿ ಬೆಳೆಗಾರರ ಹಿತ ಕಾಯುತ್ತದೆ. ಆದರೆ, ಕಲ್ಲಂಗಡಿ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಬೆಳೆಗಾರರು ನೋವು ತೋಡಿಕೊಂಡಿದ್ದಾರೆ.

ಸರ್ಕಾರ ಕಲ್ಲಂಗಡಿ ಬೆಳೆಗಾರರ ನೆರವಿಗೂ ಧಾವಿಸಬೇಕು ಎಂದು ಕರೂರು, ಬಾರಂಗಿ ಹೋಬಳಿಯ ರೈತರು ಒತ್ತಾಯಿಸಿದ್ದಾರೆ.

ಸಿಗದ ಪ್ರೋತ್ಸಾಹ

‘ತೋಟಗಾರಿಕೆ ಇಲಾಖೆಯು ಕಲ್ಲಂಗಡಿ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿಲ್ಲ’ ಎಂದು ಬೆಳೆಗಾರರು ಆರೋಪಿಸಿದ್ದಾರೆ. 

‘ಕಲ್ಲಂಗಡಿಗೆ ಯಾವುದೇ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಮಧ್ಯವರ್ತಿಗಳು ನೇರವಾಗಿ ಹೊಲಗಳಿಗೆ ಬಂದು ಕಡಿಮೆ ದರಕ್ಕೆ ರೈತರಿಂದ ಖರೀದಿಸುತ್ತಾರೆ. ಬಳಿಕ ಹೆಚ್ಚಿನ ಬೆಲೆಗೆ ಮಾರಿ ಲಾಭ ಪಡೆಯುತ್ತಾರೆ. ನಷ್ಟವಾದರೆ ಯಾವುದೇ ಪರಿಹಾರವನ್ನೂ ನೀಡುವುದಿಲ್ಲ. ತೋಟಗಾರಿಕೆ ಇಲಾಖೆ ಬೆಳೆಗಾರರಿಗೆ ಸೂಕ್ತ ಮಾರ್ಗದರ್ಶನ, ಮಾಹಿತಿ ಒದಗಿಸದೇ ಇರುವುದರಿಂದ ಸಾಕಷ್ಟು ಅನಾನುಕೂಲ ಆಗುತ್ತಿದೆ. ಇನ್ನಾದರೂ ಇಲಾಖಾ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಗುಣಮಟ್ಟದ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಪೂರೈಕೆ ಮಾಡಬೇಕು’ ಎನ್ನುವುದು ರೈತರ ಆಗ್ರಹ.

ಕೈ ಸಾಲ ಮಾಡಿ ಕಲ್ಲಂಗಡಿ ಬೆಳೆದಿದ್ದೇವೆ. ಈ ವರ್ಷವಾದರೂ ಉತ್ತಮ ದರ ದೊರೆಯಬಹುದು ಎಂಬ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿದ್ದೇವೆ
ಸುರೇಶ, ಕಲ್ಲಂಗಡಿ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.